ಬೆಂಗಳೂರು, ಮೇ.29- ಬೇಸಿಗೆ ರಜೆ ಕಳೆದು ಮಕ್ಕಳು ಇಂದು ಶಾಲೆಯತ್ತ ಖುಷಿಯಿಂದ ಹೆಜ್ಜೆ ಹಾಕಿದ್ದಾರೆ. ರಾಜ್ಯಾದ್ಯಂತ ಇಂದು ಅಧಿಕೃತವಾಗಿ ಶೈಕ್ಷಣಿಕ ಸಾಲಿನ ತರಗತಿಗಳು ಆರಂಭಗೊಂಡಿದ್ದು, ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಶಿಕ್ಷಕರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ಕೆಲವು ಶಾಲೆಗಳಲ್ಲಿ ವಿಶೇಷವಾಗಿ ಆಲಂಕಾರ ಮಾಡಿ ವಿದ್ಯಾರ್ಥಿಗಳನ್ನು ಆಹ್ವಾನಿಸಿದ್ದಾರೆ. ಸಿಹಿತಿಂಡಿಗಳನ್ನು ನೀಡಿ ಖುಷಿಯಿಂದಲೇ ಪಾಠ ಪ್ರವಚನಗಳು ಆರಂಭಗೊಂಡಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಿ ಶಾಲೆಯಲ್ಲಿಂದು 2 ವರ್ಷ ಶಿಕ್ಷಣದಲ್ಲಿ ಹರ್ಷ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಂಗಳೂರಿನ ಆಡುಗೋಡಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಈ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೂಡ ಪಾಲ್ಗೊಂಡು ಮಕ್ಕಳೊಂದಿಗೆ ಸಂವಾದ ನಡೆಸಿದ್ದಾರೆ.
ಈಗಾಗಲೇ ಬಹುತೇಕ ಶಾಲೆಗಳಿಗೆ ಪಠ್ಯಪುಸ್ತಕ ಸಮವಸ್ತ್ರ ತಲುಪಿದ್ದು, ಹೊಸ ಉಡುಪಿನೊಂದಿಗೆ ಮಕ್ಕಳು ಆಗಮಿಸಿದ್ದು ಎಲ್ಲರಲ್ಲೂ ಸಂತೋಷ ಕಂಡು ಬಂತು. ಈ ಬಾರಿ ವಿಶೇಷವಾಗಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಪುನಃ ಶಿಕ್ಷಣದತ್ತ ಕರೆ ತರುವ ಆಂದೋಲನ ಕೂಡ ಶಿಕ್ಷಣ ಇಲಾಖೆ ಹಮಿಕೊಂಡಿದೆ. ಈಗಾಗಲೇ ಬಹುತೇಕ ಖಾಸಗಿ ಶಾಲೆಗಳು ಆರಂಭಗೊಂಡಿದ್ದರೂ ಇಂದಿನಿಂದ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಆರಂಭಗೊಂಡಿದೆ.