ಬೆಂಗಳೂರು,ಮಾ.26– ವಿಧಾನಸಭೆಯಲ್ಲಿ ಅಶಿಸ್ತು ತೋರಿದ ಶಾಸಕರ ವಿರುದ್ದ ಸಭಾಧ್ಯಕ್ಷರು ಶಿಸ್ತುಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಸಮರ್ಥಿಸಿಕೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿರುವ ಬಗ್ಗೆ ಚರ್ಚೆಗಳಾಗುತ್ತಿವೆ. ಆ ಬಗ್ಗೆ ಹಲವು ರಾಜಕೀಯ ಮುಖಂಡರು ಮಾತನಾಡಿದ್ದಾರೆ. ಅಮಾನತು ವಾಪಸ್ ಪಡೆಯಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ನಾಳಿನ ಸಚಿವ ಸಂಪುಟ ಸಭೆಯಲ್ಲೂ ಚರ್ಚಿಸಲಾಗುವುದು ಎಂದರು.
ಸಭಾಧ್ಯಕ್ಷರ ಆಡಳಿತವನ್ನು ನಾವು ಚರ್ಚೆ ಮಾಡಲು ಬರುವುದಿಲ್ಲ. ಶಾಸಕರ ಅಶಿಸ್ತಿನ ನಡವಳಿಕೆಯನ್ನು ಯಾರೂ ಕೂಡ ನಂಬಲು ಸಾಧ್ಯವಿಲ್ಲ ಎಂದರು. ಮನವಿ: ವಿಧಾನಪರಿಷತ್ನ ಸಭಾಪತಿ ಬಸವರಾಜ ಹೊರಟ್ಟಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಾರದು.
ಅವರು ವಿಧಾನಪರಿಷತ್ ಹಿರಿಯ ಸದಸ್ಯರೂ ಹಾಗೂ ಸಭಾಪತಿಗಳಾಗಿದ್ದಾರೆ. ಅವರು ರಾಜೀನಾಮೆ ನೀಡಬಾರದು ಎಂದು ಮನವಿಯನ್ನು ಮಾಡುತ್ತೇನೆ ಎಂದು ಹೇಳಿದರು. ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕೆ ಹೊರತು ರಾಜೀನಾಮೆ ನೀಡುವುದು ಸೂಕ್ತವಲ್ಲ ಎಂದರು.