ಗೀತಪ್ರಿಯ ಎಂಬ ಹೆಣ್ಣು ಮಗಳು ತಾಯವ್ವ ಎಂಬ ಸಿನಿಮಾ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಎಷ್ಟೋ ವಿಚಾರದಲ್ಲಿ ನಾವಿನ್ನೂ ಯಾವ ಶತಮಾನದಲ್ಲಿದ್ದೀವಿ ಗುರು ಎಂಬ ಪ್ರಶ್ನೆ ಕಾಡುವುದು ಸಹ. ಮೂಢನಂಬಿಕೆ ಎದುರಾದಾಗಲೋ, ಹಳೆಯ ಕೆಲವೊಂದು ಕೆಟ್ಡ ಸಂಪ್ರದಾಯಗಳನ್ನು ಪಾಲನೆ ಮಾಡಿದಾಗ ನಮಗೆ ನಾವೇ ಆ ಪ್ರಶ್ನೆಗಳನ್ನ ಕೇಳಿಕೊಳ್ಳುತ್ತೇವೆ. ಅದರಲ್ಲಿ ಹೆಣ್ಣಿನ ವಿಚಾರವೂ ಒಂದು.
ಮನೆಗೆ ವಾರಸುದಾರನೇ ಬೇಕು, ಹೆಣ್ಣು ಬೇರೆಯವರ ಮನೆಯಲ್ಲಿ ಮುಸುರೆ ತಿಕ್ಕಂಡು ಇರೋದಕ್ಕಷ್ಟೇ ಸೀಮಿತ ಅನ್ನೋದು. ನಾವೀಗ ಬಹಳ ಮುಂದೆ ಬಂದಾಗಿದೆ. 21 ಶತಮಾನದಲ್ಲಿದ್ದೇವೆ. ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಇದ್ದಾರೆ, ದುಡೀತಾರೆ, ಜೀವನ ಕಟ್ಟಿಕೊಂಡಿದ್ದಾರೆ, ಅಪ್ಪ ಅಮ್ಮನನ್ನ ಸಾಕ್ತಾರೆ. ಆದ್ರೂ ಹೆಣ್ಣು ಬೇಡ ಎಂಬ ಮನಸ್ಥಿತಿ ಈಗಲೂ ಜೀವಂತವಾಗಿದೆ ಅಂದ್ರೆ ನೀವೂ ನಂಬ್ತೀರಾ. ಖಂಡಿತ ನಂಬಬೇಕು. ಅಂಥದ್ದೊಂದು ಗಟ್ಟಿ ಕಥೆಯನ್ನಿಟ್ಟುಕೊಂಡು ತಾಯವ್ವ ಸಿನಿಮಾವನ್ನ ತೆಗೆಯಲಾಗಿದೆ.
ಶುಕ್ರವಾರವಷ್ಟೇ ರಾಜ್ಯಾದ್ಯಂತ ತಾಯವ್ವ ರಿಲೀಸ್ ಆಗಿದೆ. ಗಂಡು ಮಕ್ಕಳೇ ಬೇಕು ಎಂಬ ಅಜ್ಜಿಯಂದಿರ ದುರ್ಬುದ್ದಿಯನ್ನ ಈ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸಲಾಗಿದೆ. ಹಾಗಂತ ಆ ವಿಚಾರವನ್ನ ಅಷ್ಟಕ್ಕೇ ಪ್ರವೋಕ್ ಮಾಡಿಲ್ಲ. ಹೆಣ್ಣು ಮಕ್ಕಳು ಎಷ್ಟು ಮುಖ್ಯ ಎಂಬುದನ್ನು ಆ ಅಜ್ಜಿಯಂದಿರಿಗೆ ತಿಳಿಸಿ, ಬದಲಾಯಿಸುವ ಸನ್ನಿವೇಶವೂ ಅಲ್ಲಿ ಬರುತ್ತದೆ. ಬಹಳ ಮುಖ್ಯವಾಗಿ ಇಡೀ ಸಿನಿಮಾದಲ್ಲಿ ನಮಗೆ ತಾಯವ್ವ ಕಾಡುತ್ತಾರೆ.
ಈ ಹಿಂದೆಲ್ಲಾ ಯಾವ ಆಸ್ಪತ್ರೆ ಇತ್ತು ಹೇಳಿ. ಈ ತಾಯವ್ವನಂತಹ ಸೂಲಗಿತ್ತಿಯರೇ ಹೆರಿಗೆ ಮಾಡಿಸ್ತಾ ಇದ್ದದ್ದು. ಆ ಸೂಲಗಿತ್ತಿಯ ಬದುಕು ಬವಣೆಯನ್ನು ಅತ್ಯದ್ಭುತವಾಗಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಬಾಲ್ಯವಿವಾಹದಿಂದ ಮುಂದಿನ ಜೀವನ ಎಷ್ಡು ಕಷ್ಟಕರವಾಗಿರುತ್ತೆ ಅನ್ನೋದನ್ನ ತಾಯವ್ವನ ಮೂಲಕ ತೋರಿಸಲಾಗಿದೆ. ಬಾಲ್ಯದಲ್ಲಿ ಮದುವೆಯಾದರೆ ಗಂಡ ಸತ್ತೋದ ಮೇಲೆ ಆ ಹೆಣ್ಣು ಮಕ್ಕಳಿಗೆ ದಿಕ್ಕು ಯಾರು ಹೇಳಿ. ಅಂಥದ್ದೊಂದು ಮನಮುಟ್ಟುವ ಕಥೆಯನ್ನ ಹೇಳಿದ್ದಾರೆ. ಇದರ ಜೊತೆಗೆ ಅನಂತ್ ಆರ್ಯನ್ ಸಂಗೀತ ಕೂಡ ಇಷ್ಟವಾಗುತ್ತದೆ. ಇದು ಜಾನಪದ ಶೈಲಿಯ ಸಂಗೀತವಾಗಿರೋದ್ರಿಂದ ಅಲ್ಲಲ್ಲಿ ಸಂದರ್ಭಕ್ಕೆ ತಕ್ಕ ಪದಗಳು ಖುಷಿ ನೀಡುತ್ತವೆ.
ಕಥೆ ಗಟ್ಟಿಯಾಗಿರೋ ಕಾರಣ ನರೇಷನ್ ವಿಚಾರದಲ್ಲಿ ಇನ್ನಷ್ಟು ಸ್ಟ್ರಾಂಗ್ ಆಗಬೇಕಿತ್ತು ಟೀಂ. ದೃಶ್ಯಗಳನ್ನ ತೋರಿಸುವ ವಿಚಾರದಲ್ಲೂ ಅಷ್ಟೇ ನೀರಸ ಎಂಬ ಭಾವನೆ ಮೂಡುತ್ತದೆ. ಅನಗತ್ಯ ಫೋನ್ ಕಾಲ್ ಗಳನ್ನು ತುರುಕಿದ್ದಾರೆ. ಡಾಕ್ಟರ್ ಮಗಳು ಹಳ್ಳಿಗೆ ಬಂದಾಗ ಅಷ್ಟೊಂದು ಫೋನ್ ಅನಗತ್ಯ ಎನಿಸುತ್ತದೆ. ಏನಾದರೂ ವಿಚಾರವಿದ್ದಿದ್ದರೆ ಓಕೆ. ಹಲೋ.. ಆನ್ ದಿ ವೇ ಅನ್ನೋದಕ್ಕೆ ಆ ದೃಶ್ಯದ ಅವಶ್ಯಕತೆ ಇರಲಿಲ್ಲ. ಕೆಲವೊಂದು ಕಡರ ಈ ರೀತಿ ಭಾಸವಾಗುತ್ತದೆ. ಅದನ್ನ ಹೊರತು ಪಡಿಸಿದರೆ ಗಟ್ಟಿ ಕಥೆಯನ್ನ ತಾಯವ್ವ ಹೊಂದಿದೆ.