ಕೋಲಾರ, ಜೂ.5- ಬಾಳಿ ಬದುಕಿ ಮದುವೆಯಾಗಿ ಹಾರ ಹಾಕಿಸಿಕೊಳ್ಳಬೇಕಾಗಿದ್ದ ನನ್ನ ಮಗಳು ಆರ್ಸಿಬಿ ಸಂಭ್ರಮಾಚರಣೆಯ ಕಾಲ್ತುಳಿತದಲ್ಲಿ ಮೃತಪಟ್ಟು ಸಾವಿನ ಮಾಲೆ ಹಾಕಿಸಿಕೊಂಡಿದ್ದಾಳೆ ಎಂದು ತಂದೆ ಮಮ್ಮಲ ಮರುಗಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಸಂಭ್ರಮಾಚರಣೆ ಸಂದರ್ಭದಲ್ಲಿ ಕಾಲ್ತುಳಿತದಿಂದ ಕೆಜಿಎಫ್ ತಾಲ್ಲೂಕಿನ ಬುಡಮಾಕನಹಳ್ಳಿಯ ಟೆಕ್ಕಿ ಸಹನಾ (24) ದುರಂತ ಅಂತ್ಯ ಕಂಡಿದ್ದು ಪೋಷಕರಲ್ಲಿ ಆಕ್ರಂದನ ಮುಗಿಲುಮುಟ್ಟಿತ್ತು.
ಶಿಕ್ಷಕ ದಂಪತಿ ಸುರೇಶ್ಬಾಬು ಮತ್ತು ಮಂಜುಳ ದಂಪತಿ ಪುತ್ರಿ ಸಹನಾ ಬುದ್ದಿವಂತಳಾಗಿದ್ದು, ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಇಂಜಿನಿಯರ್ ಪದವಿ ಪೂರೈಸಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ನಿನ್ನೆ ಆರ್ಸಿಬಿ ತಂಡ ಬೆಂಗಳೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕ್ರೀಡಾಪಟುಗಳನ್ನು ಕಣ್ಣುಂಬಿಕೊಳ್ಳಲು ಸಹನಾ ಸ್ನೇಹಿತರೊಂದಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದರು. ಜನಸಾಗರದ ನಡುವೆ ಸಿಲುಕಿ ಯುವತಿ ಸಾವನ್ನಪ್ಪಿದ್ದಾರೆ.
ವಿದ್ಯಾಭ್ಯಾಸಕ್ಕಾಗಿ ಕೋಲಾರದಲ್ಲಿ ಕುಟುಂಬ ನೆಲೆಸಿದ್ದು, ನಗರದ ಎಜಿ ಬಡಾವಣೆಯ ನಿವಾಸಕ್ಕೆ ಪಾರ್ಥಿವ ಶರೀರವನ್ನು ಪೊಲೀಸ್ ಹಾಗೂ ಎಸ್ಕಾರ್ಟ್ ಮೂಲಕ ಆ್ಯಂಬುಲೆನ್ಸ್ನಲ್ಲಿ ಕರೆತರಲಾಯಿತು. ಮಗಳ ಮೃತದೇಹವನ್ನು ಕಂಡ ಪೋಷಕರ ದುಃಖದ ಕಟ್ಟೆ ಒಡೆಯಿತು. ಆಕ್ರಂದನ ಮುಗಿಲು ಮುಟ್ಟಿತ್ತು.
ಇಬ್ಬರು ಹೆಣ್ಣುಮಕ್ಕಳಲ್ಲಿ ಸಹನಾ ಮೊದಲ ಮಗಳಾಗಿದ್ದು, ಕುಟುಂಬಕ್ಕೆ ಒಂದು ರೀತಿಯಲ್ಲಿ ಬೆನ್ನೆಲುಬಾಗಿದ್ದಳು. ಇನ್ನೂ ಬಾಳಿ ಬದುಕಬೇಕಾಗಿದ್ದ ಮಗಳು ಘೋರ ಅಂತ್ಯ ಕಂಡಿರುವುದು ಪೋಷಕರಿಗೆ ದಿಗ್ಧಮೆ ಉಂಟುಮಾಡಿದೆ. ಕೋಲಾರದ ನಿವಾಸಕ್ಕೆ ಉಪವಿಭಾಗಾಧಿಕಾರಿ ಮೈತ್ರಿ ಹಾಗೂ ತಹಸೀಲ್ದಾರ್ ಭೇಟಿ ನೀಡಿ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವಾನ ಹೇಳಿದರು. ನಂತರ ಕೋಲಾರದಿಂದ ಸ್ವಗ್ರಾಮ ಬುಡಮಾಕನಹಳ್ಳಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲಾಯಿತು. ನೆರೆದಿದ್ದ ಅಪಾರ ಬಂಧು ಬಳಗ ಸ್ನೇಹಿತರು ಕಂಬನಿ ಮಿಡಿದರು.