ಬೆಂಗಳೂರು, ಜೂ.1- ಆಪರೇಷನ್ ಸಿಂಧೂರದ ಬಗ್ಗೆ ಪಾಕಿಸ್ತಾನಕ್ಕೆ ಪೂರ್ವ ಮಾಹಿತಿ ನೀಡಿದ್ದರಿಂದಾದ ಅನಾಹುತಗಳ ಬಗ್ಗೆ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರು ವಾಸ್ತವಾಂಶವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗಲಾದರೂ ಸುಳ್ಳು ಪ್ರಚಾರಗಳನ್ನು ಬಿಟ್ಟು ಜನರಿಗೆ ಸತ್ಯ ಹೇಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಪರೇಷನ್ ಸಿಂಧೂರ ಹಾಗೂ ಆನಂತರದ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸುಳ್ಳಿಗೆ ಪ್ರಚಾರದ ಹುಚ್ಚಿರುತ್ತದೆ ಆದರೆ ಸತ್ಯಕ್ಕೆ ಮಾತ್ರ ಶಕ್ತಿ ಹೆಚ್ಚಿರುತ್ತೆ ಅನ್ನೋದಕ್ಕೆ ಆಪರೇಷನ್ ಸಿಂಧೂರ ಬಗ್ಗೆ ಹೊರಬೀಳುತ್ತಿರುವ ಘಟನೆಗಳೇ
ಸಾಕ್ಷಿ. ಪಾಕಿಸ್ತಾನಿ ಉಗ್ರರನ್ನು ಹುಟ್ಟಗಡಿಸಿದ ನಮ್ಮ ಸೈನ್ಯದ ಪರಾಕ್ರಮದ ಬಗ್ಗೆ ಹಾಗೂ ಆಪರೇಷನ್ ಸಿಂಧೂರದ ಯಶಸ್ಸಿನ ಬಗ್ಗೆ ದೇಶ ಹೆಮ್ಮೆ ಪಟ್ಟಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ಹಾಗೂ ನಮ್ಮ ನಾಯಕರು, ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಸೇನಾಪಡೆಯ ಸಾಹಸ ಹಾಗೂ ದಿಟ್ಟತನವನ್ನು ಪ್ರಶಂಸಿಸುತ್ತಲೇ, ಸೈನ್ಯಕ್ಕಾದ ಹಾನಿ ಹಾಗೂ ನಷ್ಟದ ಬಗ್ಗೆ ದೇಶದ ಜನರೆದುರು ವಾಸ್ತವ ತೆರೆದಿಡಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಸತ್ಯವನ್ನು ಮರೆಮಾಚುವ ಉದ್ದೇಶದಿಂದ ಮೋದಿ ಸರ್ಕಾರ ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಉತ್ತರಿಸಿದೆ, ಮೊಂಡುವಾದ ಮಾಡುತ್ತಾ, ಹೀಯಾಳಿಸುತ್ತಾ, ನಿಂದಿಸುತ್ತಾ, ಕಾಲ ಹರಣ ಮಾಡಿತು ಎಂದು ತಿಳಿಸಿದ್ದಾರೆ.
ದೇಶದ ರಕ್ಷಣಾಪಡೆಗಳ ಮುಖ್ಯಸ್ಥರಾದ ಅನಿಲ್ ಚೌಹಾಣ್ ಅವರೇ ಈಗ ದೇಶದ ಎದುರು ವಾಸ್ತವನ್ನ ಒಪ್ಪಿಕೊಂಡಿದ್ದಾರೆ. ಯುದ್ಧ ವಿಮಾನಗಳನ್ನ ಕಳೆದುಕೊಂಡಿರುವ ಸತ್ಯವೂ ಸೇರಿದಂತೆ ಆಪರೇಷನ್ ಸಿಂಧೂರದ ಸಮಯದಲ್ಲಿ ಆಗಿರುವ ಲೋಪಗಳ ಬಗ್ಗೆಯೂ ಮಾತಾಡಿದ್ದಾರೆ. ಆದರೆ ಸುಳ್ಳು ಪ್ರಚಾರವನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥಸಿಂಗ್ ಅವರು ಮೌನವಹಿಸಿದ್ದು ಯಾಕೆ?, ದೇಶಕ್ಕೆ ಈಗಲಾದರೂ ಉತ್ತರದಾಯಿಗಳಾಗಿ, ಆಪರೇಷನ್ ಸಿಂಧೂರದ ಸ್ಪಷ್ಟ ಚಿತ್ರಣವನ್ನು ತೆರೆದಿಡಿ ಎಂದು ಹೇಳಿದ್ದಾರೆ.