Tuesday, September 17, 2024
Homeರಾಜ್ಯಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕರೇ ಇಲ್ಲ

ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕರೇ ಇಲ್ಲ

ಬೆಂಗಳೂರು,ಜು.16- ರಾಜ್ಯ ವಿಧಾನ ಮಂಡಲದ ಅಧಿವೇಶನ ಆರಂಭಗೊಂಡಿದ್ದು, ವಿಧಾನ ಪರಿಷತ್ತಿಗೆ ಪ್ರತಿಪಕ್ಷದ ನಾಯಕನ ಆಯ್ಕೆಗೆ ಯಾವುದೇ ಹೆಸರನ್ನು ಅಂತಿಮ ಗೊಳಿಸದ ಕಾರಣ ವಿರೋಧ ಪಕ್ಷದ ನಾಯಕರೇ ಇಲ್ಲದೇ ಬಿಜೆಪಿ ಭಾಗಿಯಾಗುವಂತಾಗಿದೆ.

ವಿರೋಧ ಪಕ್ಷದ ನಾಯಕನ ಆಸನ ಖಾಲಿಯಿಟ್ಟು ಕೇಸರಿ ಪಡೆ ಸದನದಲ್ಲಿ ಹಾಜರಾಗಿದ್ದು, ಯಾರ ನಾಯಕತ್ವದಲ್ಲಿ ಮುನ್ನಡೆಯಬೇಕು ಎನ್ನುವ ಗೊಂದಲದಲ್ಲೇ ಸದಸ್ಯರು ಕಲಾಪದಲ್ಲಿ ಮುಂದುವರೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ.

ವಿರೋಧಪಕ್ಷ ನಾಯಕ ಸ್ಥಾನದ ಹುದ್ದೆ ಖಾಲಿ ಇರುವುದರಿಂದ ಮೊದಲ ದಿನದ ಕಲಾಪ ದಲ್ಲಿಯೇ ಇದರ ಪರಿಣಾಮ ಬಿಜೆಪಿಗೆ ತಟ್ಟಿದೆ. ನಿಲುವಳಿ ಸೂಚನೆ ಮಂಡನೆ, ಪ್ರಶ್ನೋತ್ತರ ಕಲಾಪದಲ್ಲಿ ಉಪ ಪ್ರಶ್ನೆಗಳಿಗೆ ಸಾಥ್‌ ಕೊರತೆ, ಸಭಾಪತಿಗಳ ಮೂಲಕ ಸರ್ಕಾರಕ್ಕೆ ಚಾಟಿ ಬೀಸುವ ಅವಕಾಶವನ್ನು ತಪ್ಪಿಸಿಕೊಂಡಿತು.

ವಿರೋಧ ಪಕ್ಷದ ನಾಯಕರು ಯಾವಾಗ ಎದ್ದು ನಿಂತರೂ ಅವರು ಮಾತನಾಡಲು ಅವಕಾಶ ಕೊಡಲಾಗುತ್ತದೆ. ಆದರೆ ಈಗ ಆ ಸ್ಥಾನ ಖಾಲಿ ಇರುವ ಕಾರಣ ಬಿಜೆಪಿ ಸದಸ್ಯರು ಅಗತ್ಯ ಬಿದ್ದಾಗಲೆಲ್ಲಾ ಮಧ್ಯಪ್ರವೇಶ ಮಾಡಿ ಸರ್ಕಾರವನ್ನು ಟೀಕಿಸುವ ಅವಕಾಶ ಕಳೆದುಕೊಂಡಿದ್ದಾರೆ.

ಇದು ಒಂದು ರೀತಿಯಲ್ಲಿ ಸರ್ಕಾರಕ್ಕೆ ಧನಾತಕವಾದ ಅಂಶವಾಗಿದೆ. ಆಡಳಿತ ಪಕ್ಷದ ಚರ್ಚೆಯ ಬೇಡಿಕೆಗೆ ವಿರೋಧ ವ್ಯಕ್ತಪಡಿಸಲು ವಿರೋಧ ಪಕ್ಷದ ನಾಯಕರಿಲ್ಲದ ಕಾರಣ ಆಡಳಿತ ಪಕ್ಷಕ್ಕೆ ಕೆಲವೊಂದು ವಿಷಯ ಆಕ್ಷೇಪಣೆ ಯಿಲ್ಲದೆ ಅರ್ಧ ಗಂಟೆ ಚರ್ಚೆಗೆ ಅವಕಾಶ ಪಡೆದುಕೊಳ್ಳಲು ಸಾಧ್ಯವಾಯಿತು.

ಭಾನುವಾರ ರಾತ್ರಿ ವೇಳೆಗೆ ಹೈಕಮಾಂಡ್‌ನಿಂದ ವಿರೋಧ ಪಕ್ಷದ ನಾಯಕರ ಹೆಸರು ಪ್ರಕಟವಾಗಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೆ, ಬೆಳಗ್ಗೆ ಕಲಾಪ ಶುರುವಾದರೂ ಹೈಕಮಾಂಡ್‌ ಕಡೆಯಿಂದ ಯಾವುದೇ ಸಂದೇಶ ಬಾರದ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕರಿಲ್ಲದೆ ಬಿಜೆಪಿ ಸದನಕ್ಕೆ ಹಾಜರಾಗುವಂತಾಗಿದೆ.

ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಸಂಸತ್‌ ಸದಸ್ಯರಾಗಿ ಆಯ್ಕೆಯಾಗಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆ, ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕನ ಸ್ಥಾನ ತೆರವಾಗಿದ್ದು, ಆ ಸ್ಥಾನಕ್ಕೆ ಮತ್ತೊಬ್ಬರ ನೇಮಕ ಮಾಡಲು ಬಿಜೆಪಿ ಮತ್ತೆ ವಿಳಂಬ ಮಾಡುತ್ತಿದೆ.ವರ್ಷದ ಹಿಂದೆಯೂ ಈ ಸ್ಥಾನವನ್ನು ಖಾಲಿಯಾಗಿಟ್ಟೇ ಎರಡು ಅಧಿವೇಶನ ಮುಗಿಸಿದ್ದ ಬಿಜೆಪಿ, ಈಗ ಮತ್ತೊಮೆ ಅಂತಹದ್ದೇ ಸ್ಥಿತಿ ಎದುರಿಸುವಂತಾಗಿದೆ.

2023ರ ಮೇ ತಿಂಗಳಿನಲ್ಲಿಯೇ ಕಾಂಗ್ರೆಸ್‌‍ ಸರ್ಕಾರ ರಚಿಸಿದರೂ ಬಿಜೆಪಿಗೆ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡಲು ಆರು ತಿಂಗಳು ಬೇಕಾಯಿತು. ಡಿಸೆಂಬರ್‌ನಲ್ಲಿ ವಿಧಾನಪರಿಷತ್‌ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಿತು. ಇದೀಗ ಮತ್ತೆ ಹೊಸ ಪ್ರತಿಪಕ್ಷ ನಾಯಕರ ತಲಾಶ್‌ನಲ್ಲಿ ಬಿಜೆಪಿ ಹೈಕಮಾಂಡ್‌ ನಿರತವಾಗಿದೆ. ಸದ್ಯ ಪರಿಷತ್‌ ಪ್ರತಿಪಕ್ಷದ ಸಚೇತಕರಾಗಿರುವ ರವಿಕುಮಾರ್‌ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅನುಭವಿ, ಉತ್ತಮ್ಮ ಸಂಘಟಕ, ಪಕ್ಷಕ್ಕೆ ಸಲ್ಲಿಸಿರುವ ಸೇವೆ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಯೂ ಆಗಿರುವ ಹಿನ್ನೆಲೆಯಲ್ಲಿ ರವಿಕುಮಾರ್‌ ಅವರನ್ನೇ ಪ್ರತಿಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

ಉತ್ಸಾಹದಲ್ಲಿ ಸಿ.ಟಿ.ರವಿ: ಸಿ.ಟಿ.ರವಿ ಉತ್ತಮ್ಮ ವಾಗಿ, ಪಕ್ಷದ ನಿಷ್ಟಾವಂತ ಕಾರ್ಯ ಕರ್ತ. ಯಡಿಯೂರಪ್ಪ ಸಂಪುಟದಲ್ಲಿದ್ದಾಗ ಸಂಘಟನೆಗೆ ಬರುವಂತೆ ಪಕ್ಷ ನೀಡಿದ್ದ ನಿರ್ದೇಶನವನ್ನು ಪಾಲಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಿದ್ದವರು.

ಪಕ್ಷದ ಶಿಸ್ತಿನ ಸಿಪಾಯಿ, ಕ್ರಿಯಾಶೀಲತೆ, ರಾಜಕೀಯ ಅನುಭವದ ಆಧಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಚಾಕಚಕ್ಯತೆ ಇರುವ ಹಿನ್ನೆಲೆ ಸಿ. ಟಿ ರವಿ ಬಿಜೆಪಿಗೆ ಉತ್ತಮ್ಮ ಆಯ್ಕೆ. ಆದರೆ ಉಭಯ ಸದನಗಳಲ್ಲಿಯೂ ಒಕ್ಕಲಿಗ ಸಮುದಾಯಕ್ಕೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಲು ಕಷ್ಟಸಾಧ್ಯವಾಗಿರುವ ಹಿನ್ನೆಲೆ ಸದ್ಯದ ಮಟ್ಟಿಗೆ ಸಿ.ಟಿ.ರವಿಗೆ ಅವಕಾಶ ಸಿಗುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ.

ಆದರೂ ಹೈಕಮಾಂಡ್‌ ನಿರ್ಧಾರದ ಮೇಲೆ ಎಲ್ಲವೂ ನಿಂತಿದೆ. ಸದ್ಯ ಸದನಕ್ಕೆ ಉತ್ಸಾಹದಲ್ಲಿ ಭಾಗಿಯಾಗಿರುವ ಸಿ ಟಿ ರವಿ, ಬಿಜೆಪಿ ಪರ ಗಟ್ಟಿ ದನಿಯಾಗಿ ಮಾತನಾಡುತ್ತಿ ದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ರಾಧಾಮೋಹನ್‌ ದಾಸ್‌‍ ಅಗರ್ವಾಲ್‌ ನೇಮಕಗೊಂಡ ನಂತರ ಮೊದಲ ಕಾರ್ಯಕಾರಿಣಿ ಪೂರ್ಣಗೊಂಡಿದ್ದು, ನಂತರ ನಡೆದ ಅನೌಪಚಾರಿಕ ಸಭೆಯಲ್ಲಿ ಪರಿಷತ್‌ ಪ್ರತಿಪಕ್ಷ ನಾಯಕರ ಆಯ್ಕೆ ವಿಷಯದ ಕುರಿತು ಚರ್ಚೆಯಾಗಿದೆ. ಆಕಾಂಕ್ಷಿಗಳ ಪಟ್ಟಿಯೊಂದಿಗೆ ಅಗರ್ವಾಲ್‌ ದೆಹಲಿಗೆ ತೆರಳಿದ್ದು, ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆಯಾಗಿದೆ.

RELATED ARTICLES

Latest News