ಮೈಸೂರು, ಮೇ2- ಪಾಕಿಸ್ತಾನಕ್ಕೆ ಜೈ ಎಂದವರಿಗೆ ಗುಂಡಿಕ್ಕಿ ಕೊಲ್ಲಬೇಕಾಗಿತ್ತು. ಕೆಲವು ಹುಡುಗರು ಇಲ್ಲಿನ ಅನ್ನ ತಿಂದು, ಪಾಕಿಸ್ತಾನಕ್ಕೆ ಜೈ ಎನ್ನುತ್ತಾರೆ. ಈ ಬಗ್ಗೆ ಸರ್ಕಾರ ಹೊಸ ಕಾನೂನನ್ನು ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಹಲ್ಲಾಮ್ ಉಗ್ರರ ದಾಳಿ ವಿಚಾರ ಪ್ರಸ್ತಾಪಿಸಿ, ಇಡೀ ದೇಶ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಇದೆ. 1971ರಲ್ಲಿ ಇಂದಿರಾಗಾಂಧಿ ಪಾಕಿಸ್ತಾನವನ್ನು ಬಗ್ಗುಬಡಿದರು. ಅದೇ ಕೆಲಸ ಈಗಲೂ ನಮೋ ಮೂಲಕ ಅಗಬೇಕು. ಆ ಸಂದರ್ಭದಲ್ಲಿ ಇಡೀ ದೇಶ ಅವರ ಪರವಾಗಿ ಇತ್ತು. ಈಗಲೂ ದೇಶದ ಜನತೆ ಅದೇ ಕೆಲಸ ಮಾಡಬೇಕಿದೆ ಎಂದರು.
ಜಾತಿ ಗಣತಿ ಕೇಂದ್ರ ಸರಕಾರ ಜಾತಿಗಣತಿಗೆ ಮುಂದಾಗಿರುವುದನ್ನು ಸ್ವಾಗತಿಸಿದ ವಿಶ್ವನಾಥ್, ಕೇಂದ್ರದ ಜಾತಿ ಗಣತಿಯನ್ನು ದೇಶದ ಎಲ್ಲಾ ಜನರು ಸ್ವಾಗತ ಮಾಡುತ್ತಾರೆ. ನಾನೂ ಕೂಡ ಕೇಂದ್ರದ ಜಾತಿಗಣತಿಯನ್ನು ಸ್ವಾಗತಿಸುತ್ತೇನೆ. ರಾಜ್ಯದ ಜಾತಿಗಣತಿಗೂ ಕೇಂದ್ರ ಜಾತಿಗಣತಿಗೂ ಬಹಳ ವ್ಯತ್ಯಾಸವಿದೆ ಎಂದು ಸಮರ್ಥಿಸಿಕೊಂಡರು.
ರಾಜ್ಯದಲ್ಲಿ 10 ವರ್ಷದಿಂದ ಜಾತಿಗಣತಿ ವರದಿ ನಡೆಯುತ್ತಲೇ ಇದೆ. ಆದರೆ ಅದು ಇಂದಿಗೂ ಮಂಡನೆಯಾಗಲಿಲ್ಲ. ಕಾಂತರಾಜು ವರದಿ ಇನ್ನು ನಮ್ಮ ಕೈಗೆ ಸಿಕ್ಕಿಲ್ಲ. ಸಿಕ್ಕಿರುವುದು ಕೆ.ಜಯಪ್ರಕಾಶ್ ಹೆಗ್ಡೆ ಅವರ ವರದಿ ಮಾತ್ರ. ಕಾಂತರಾಜು ವರದಿ ಏನಾಯಿತು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿಯ ಗಂಭೀರತೆಯನ್ನು ಅರಿತಿಲ್ಲ. ಸುಖಾಸುಮ್ಮನೆ ಏನೇನೋ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಕೇಂದ್ರದ ಜಾತಿಗಣತಿಯನ್ನು ಎಲ್ಲಾ ಸಮುದಾಯಗಳು ಸ್ವಾಗತ ಮಾಡಿವೆ. ಕೇಂದ್ರ ಜಾತಿಗಣತಿ ಮಾಡುವುದಕ್ಕೆ ಮುಂದಾಗಿರುವ ಕಾರಣ ಇನ್ನು ರಾಜ್ಯದ ಗಣತಿಗೆ ಬೆಲೆ ಇರುವುದಿಲ್ಲ. ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಅವರು ಆಗಲಾದರೂ ಇದನ್ನು ಪರಿಷ್ಕರಿಸಿಬಹುದಾಗಿತ್ತು. ಇದರಲ್ಲಿ ಗೊತ್ತಗುತ್ತಾದೆ ಅಲ್ಲವೇ ಎಂದು ಪ್ರಶ್ನಿಸಿದರು.
ಬೆಳಗಾವಿ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಪೊಲೀಸ್ ಅಧಿಕಾರಿಗೆ ಸಿಎಂ ಸಿದ್ದರಾಮಯ್ಯ ಕೋಪೋದ್ರಿಕರಾಗಿ ಕೈ ಎತ್ತಿದ ವಿಚಾರವನ್ನು ಪ್ರಸ್ತಾಪಿಸಿದ ಅವರು, ಸಿದ್ದರಾಮಯ್ಯ ಅವರು ಎಲ್ಲರನ್ನೂ ಏಕವಚನದಲ್ಲಿ ಮಾತನಾಡಿಸುತ್ತಾರೆ. ಈ ರೀತಿ ಮಾತನಾಡಿಸಲು ಹೋಗಿ ಅವರೇ ಸಮಾಜದಲ್ಲಿ ಏಕಾಂಗಿಯಾಗುತ್ತಿದ್ದಾರೆ. ಇದ್ದರಿಂದ ಅವರ ಗೌರವವನ್ನು ಅವರೇ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರದ ಉನ್ನತ ಮಟ್ಟದಲ್ಲಿ ಇರುವ ನೀವೆ ಈ ರೀತಿ ಮಾಡೋದು ತಪ್ಪು ಅಧಿಕಾರಿಗಳ ಮೇಲೆ ಕೈ ಎತ್ತಿದರೆ ಅಧಿಕಾರಿಗಳು ಕೆಲಸ ಮಾಡುವುದಾದರೂ ಹೇಗೆ? ಸಿಎಂ ಸಿದ್ದರಾಮಯ್ಯ ವರ್ತನೆಗೆ ವಿಶ್ವನಾಥ್ ಕಿಡಿಕಾರಿದರು.