Sunday, June 29, 2025
Homeರಾಷ್ಟ್ರೀಯ | Nationalಪುರಿಯ ಗುಂಡಿಚಾ ದೇವಸ್ಥಾನದ ಮುಂದೆ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಭಕ್ತರ ಸಾವು

ಪುರಿಯ ಗುಂಡಿಚಾ ದೇವಸ್ಥಾನದ ಮುಂದೆ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಭಕ್ತರ ಸಾವು

Three Dead, Over 50 Injured In Stampede At Jagannath Rath Yatra Near Puri’s Gundicha Temple

ಭುವನೇಶ್ವರ/ ಪುರಿ, ಜೂ.29- ಪುರಿಯ ಗುಂಡಿಚಾ ದೇವಸ್ಥಾನದ ಮುಂದೆ ಇಂದು ಬೆಳಗಿನಜಾವ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಭಕ್ತರು ಸಾವನ್ನಪ್ಪಿ, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಮೃತರನ್ನು ಪ್ರೇಮಕಾಂತ ಮೊಹಂತಿ (80), ಬಸಂತಿ ಸಾಹೂ (36) ಮತ್ತು ಪ್ರಭಾತಿ ದಾಸ್ (42) ಎಂದು ಗುರುತಿಸಲಾಗಿದೆ.

ಗಾಯಗೊಂಡವರಲ್ಲಿ ಹಲವರನ್ನು ನಿಗಾದಲ್ಲಿರಿಸಲಾಗಿದ್ದು, ಅವರನ್ನು ಜಿಲ್ಲಾ ಕೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಂದು ಪುರಿ ಜಿಲ್ಲಾ ಕೇಂದ್ರ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮೂವರೂ ಒಡಿಶಾದ ಖುರ್ದಾ ಜಿಲ್ಲೆಯವರಾಗಿದ್ದು, ರಥಯಾತ್ರೆಗಾಗಿ ಪುರಿಗೆ ಬಂದಿದ್ದರು ಎಂದು ತಿಳಿದುಬಂದಿದೆ. ಇನ್ನು ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.

ಪಹಾಡ ಆಚರಣೆ ಪ್ರಾರಂಭವಾಗುವ ಹಂತದಲ್ಲಿದ್ದಾಗ ಈ ಘಟನೆ ಸಂಭವಿಸಿದ್ದು, ರಥಗಳ ಮೇಲೆ ಸ್ಥಾಪಿಸಲಾದ ದೇವರುಗಳನ್ನು ನೋಡಲು ಪ್ರಯತ್ನಿಸುತ್ತಿದ್ದ ಭಕ್ತರ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ

ಕಳೆದ ರಾತ್ರಿಯಿಡೀ ಪುರಿಯಲ್ಲಿ ಭಾರಿ ಜನಸಮೂಹ ಜಮಾಯಿಸಿತ್ತು, ಅಪಹಾಡು ಪ್ರಾರಂಭವಾದಾಗ ಅದು ನಿಯಂತ್ರಿಸಲಾಗದೆ ಹೋಯಿತು. ನಂತರದ ಗದ್ದಲದಲ್ಲಿ, ಮೂವರು ಭಕ್ತರು ಮೃತಪಟ್ಟು ಹಲವಾರು ಮಂದಿ ಗಾಯಗೊಂಡರು.

ಭಗವಾನ್ ಬಲಭದ್ರ, ದೇವಿ ಸುಭದ್ರಾ ಮತ್ತು ಭಗವಾನ್ ಜಗನ್ನಾಥನ ಮೂರು ರಥಗಳು ನಿಂತಿರುವ ಗುಂಡಿಚಾ ದೇವಾಲಯದ ಬಳಿಯ ಸರಧಾಬಲಿಯಲ್ಲಿ ಈ ಘಟನೆ ಸಂಭವಿಸಿದೆ. ವಾರಾಂತ್ಯದ ಯಾತ್ರಾರ್ಥಿಗಳು ತಮ್ಮ ರಥಗಳ ಮೇಲೆ ದೇವತೆಗಳನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದಾಗ ಮುಂಜಾನೆ 4ರಿಂದ 5 ಗಂಟೆಯ ನಡುವೆ ಕಾಲ್ತುಳಿತ ಸಂಭವಿಸಿದೆ.

ರಥ ಯಾತ್ರೆಯ ಒಂದು ದಿನದ ನಂತರ ಶನಿವಾರದಂದು ರಥಗಳು ಜಗನ್ನಾಥ ದೇವಾಲಯದಿಂದ ಶಾರದಾ ಬಾಲಿಗೆ ಬಂದಿಳಿದಿದ್ದವು. ಮರದ ದಿಮ್ಮಿಗಳನ್ನು ಹೊತ್ತ ಎರಡು ಟ್ರಕ್‌ಗಳು ಜನನಿಬಿಡ ಬೀದಿಯಲ್ಲಿ ಸಾಗುತ್ತಿದ್ದ ವೇಳೆ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಭಾರೀ ಜನಸಾಗರ :
ರಥ ಯಾತ್ರೆ ವೇಳೆ ಜನದಟ್ಟಣೆ ಹಾಗೂ ಬಿಸಿಲಿನಿಂದ ಭಕ್ತರು ತತ್ತರಿಸಿದ್ದಾರೆ. ರಥಯಾತ್ರೆಯು ಜನದಟ್ಟಣೆ ಮತ್ತು ವಿಪರೀತ ಹವಾಮಾನ ಪರಿಸ್ಥಿತಿಗಳಿಂದಾಗಿ ನಿರಂತರ ಸಮಸ್ಯೆಗಳನ್ನು ಎದುರಿಸುತ್ತಿದೆ.ಜೂನ್ 27ರಂದು ಸುಮಾರು 625 ಜನರು ಅನಾರೋಗ್ಯಕ್ಕೀಡಾಗಿದ್ದು, ವಿಪರೀತ ಬಿಸಿಲು ಮತ್ತು ಜನದಟ್ಟಣೆಯಿಂದಾಗಿ ಅನೇಕರನ್ನು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಶುಕ್ರವಾರ ಭಗವಾನ್ ಬಲಭದ್ರನ ತಲಧ್ವಜ ರಥವು ಒಂದು ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಬಾಲಗಾಂಡಿ ಪ್ರದೇಶದ ಬಳಿ ಅನೇಕ ಭಕ್ತರು ಗಾಯಗೊಂಡಿದ್ದಾರೆ. ಶನಿವಾರ ರಥಯಾತ್ರೆಯ ಸಮಯದಲ್ಲಿ ಆಯಾಸ ಮತ್ತು ಜನಸಂದಣಿಯ ಒತ್ತಡದಿಂದಾಗಿ ಸುಮಾರು 750 ಭಕ್ತರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ ಪಹಾಡವನ್ನು ರಾತ್ರಿಯಲ್ಲಿ ನಡೆಸಲಾಗುವುದಿಲ್ಲ, ಹೆಚ್ಚಿನ ಸಂಖ್ಯೆಯ ಭಕ್ತರು ರಥಗಳ ಮೇಲಿನ ದೇವತೆಗಳನ್ನು ವೀಕ್ಷಿಸಲು ಬರುತ್ತಾರೆ. ಆದಾಗ್ಯೂ ನಸುಕಿನಜಾವ ದೇವತೆಗಳ ದರ್ಶನ ಲಭ್ಯವಾಗುತ್ತದೆ ಎಂಬ ಸುದ್ದಿ ಹರಡಿತು. ಇದರಿಂದ ಗುಂಡಿಚಾ ದೇವಾಲಯದ ಮುಂದೆ ನಿಲ್ಲಿಸಲಾದ ರಥಗಳ ಬಳಿ ಲಭ್ಯವಿರುವ ಭದ್ರತೆ ಮತ್ತು ಜನಸಂದಣಿ ನಿಯಂತ್ರಣ ಮೀರಿ ಯಾತ್ರಿಕರ ಹಠಾತ್ ದಟ್ಟಣೆ ಉಂಟಾಯಿತು.

ಕಾಲ್ತುಳಿತಕ್ಕೆ ಕಾರಣ ಏನು?
ಶುಕ್ರವಾರ ಸಂಜೆಯ ವೇಳೆಗೆ ಮೂರು ರಥಗಳು ಗುಂಡಿಚಾ ದೇವಸ್ಥಾನವನ್ನು ತಲುಪಬೇಕಿತ್ತು. ಆದರೆ ಬಲಭದ್ರನ ತಾಳದ್ವಾಜ ರಥವು ತಿರುವು ಪಡೆಯುವಾಗ ಸಿಕ್ಕಿಹಾಕಿಕೊಂಡ ಕಾರಣ, ಉಳಿದ ಎರಡು ರಥಗಳು ಮುಂದುವರಿಯದಂತೆ ತಡೆಯುವ ಮೂಲಕ ಅವುಗಳನ್ನು ಮಧ್ಯದಲ್ಲೇ ನಿಲ್ಲಿಸಬೇಕಾಯತು. ದೇವರುಗಳಿದ್ದ ರಥಗಳನ್ನು ರಾತ್ರಿಯಿಡೀ ಬಿಗಿ ಭದ್ರತೆಯ ನಡುವೆ ರಸ್ತೆಯಲ್ಲಿಯೇ ಇರಿಸಲಾಗಿತ್ತು. ಇದು ಜನದಟ್ಟಣೆ ಹೆಚ್ಚಲು ಕಾರಣ ಎನ್ನಲಾಗಿದೆ. ಇದೇ ವೇಳೆ ಜನಗನ್ನಾಥ ರಥಯಾತ್ರೆಯ ವೇಳೆ ಉಂಟಾಗಿರುವ ಅವ್ಯವಸ್ಥೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ರಥಗಳ ಸಂಚಾರದಲ್ಲಿ ಆಗುತ್ತಿರುವ ವಿಳಂಬವನ್ನು ಒಡಿಶಾ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಟೀಕಿಸಿದ್ದಾರೆ. ಈ ವಿಳಂಬವನ್ನು ಭಯಾನಕ ಅವ್ಯವಸ್ಥೆ ಎಂದು ಕರೆದಿರುವ ಅವರು, ಘಟನೆಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News