ಬೆಂಗಳೂರು,ಏ.27– ಮದುವೆ ಆಮಂತ್ರಣ ನೀಡಲು ಹೋಗುತ್ತಿದ್ದವರ ಕಾರು ರಸ್ತೆಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿ, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಪೊಲೀಸ್ ಠಾಣೆ ಸಮೀಪ ಕಳೆದ ರಾತ್ರಿ ಸಂಭವಿಸಿದೆ.
ಮೃತರನ್ನು ಕಾರು ಚಾಲಕ ಮಹೇಶ್ (32), ಪ್ರೇಮ್ಕುಮಾರ್ (25) ಹಾಗೂ ಅನ್ನದಾನಯ್ಯ (25) ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ನಿತ್ಯಾನಂದ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಕಲಬುರಗಿಯ ಜಿಮ್ಸೌ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸಂಬಂಧಿಕರಿಗೆ ಮದುವೆ ಆಮಂತ್ರಣ ನೀಡಲು ಸೇಡಂ ಕಲಬುರಗಿ ಹೆದ್ದಾರಿಯಲ್ಲಿ ರಾತ್ರಿ 9.30ರ ಸಮಯದಲ್ಲಿ ತೆರಳುತ್ತಿದ್ದಾಗ ಎದುರೆಗಡೆಯಿಂದ ಬಂದ ವಾಹನದ ಲೈಟ್ ಚಾಲಕನ ಕಣ್ಣಿಗೆ ಬಡಿದು ಮುಂದೆ ದಾರಿ ಕಾಣದೇ ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಮಳಖೇಡ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ಬಗ್ಗೆ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕೆಲವೇ ದಿನಗಳಲ್ಲಿ ಇವರುಗಳ ಸಂಬಂಧಿಕರೊಬ್ಬರ ಮದುವೆ ಇತ್ತ್ತು. ಅದಕ್ಕಾಗಿ ಇವರುಗಳು ವಿವಿಧ ಗ್ರಾಮಗಳಿಗೆ ತೆರಳಿ ಸಂಬಂಧಿಕರಿಗೆ ಆಮಂತ್ರಣ ನೀಡಲು ಹೋಗುತ್ತಿದ್ದರು. ಘಟನೆಯಿಂದ ಸಂಬಂಧಿಕರು ತೀವ್ರ ಆಘಾತಗೊಂಡಿದ್ದಾರೆ.