Tuesday, July 2, 2024
Homeಬೆಂಗಳೂರುಬೆಂಗಳೂರಲ್ಲಿ ಒಂದೇ ದಿನ ಮೂರು ಮರ್ಡರ್..!

ಬೆಂಗಳೂರಲ್ಲಿ ಒಂದೇ ದಿನ ಮೂರು ಮರ್ಡರ್..!

ಬೆಂಗಳೂರು, ಜೂ.24- ಸಿಲಿಕಾನ್ ಸಿಟಿಯಲ್ಲಿ ನಡೆದ ಮೂರು ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಮೂವರನ್ನು ಕೊಲೆ ಮಾಡಲಾಗಿದೆ.

ಗಂಗಮನ ಗುಡಿ:
ರಾಡ್ನಿಂದ ಹೊಡೆದು ಮಂಜುನಾಥ (17) ಎಂಬಾತನನ್ನು ಕೊಲೆ ಮಾಡಿರುವ ಘಟನೆ ಗಂಗಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುನಾಥನಿಗೆ ತಂದೆ-ತಾಯಿ ಇಲ್ಲ. ಹಾಗಾಗಿ ಅಬ್ಬಿಗೆರೆಯ ಚಿಕ್ಕಪ್ಪ, ಚಿಕ್ಕಮನ ಜೊತೆ ವಾಸವಾಗಿದ್ದನು. ಚಿಕ್ಕಪ್ಪ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದು, ಎಸ್ಎಸ್ಎಲ್ಸಿ ಓದಿದ್ದ ಈತ ಆಗಾಗ ಅವರ ಜೊತೆ ಕೆಲಸಕ್ಕೆ ಹೋಗುತ್ತಿದ್ದನು.

ಶನಿವಾರ ರಾತ್ರಿ ಮದ್ಯ ಸೇವಿಸಿ ಮಂಜುನಾಥ ಮನೆಗೆ ಬಂದಾಗ ಚಿಕ್ಕಪ್ಪ ಆತನಿಗೆ ಬೈದು ಹೊಡೆದು ಬುದ್ದಿ ಮಾತು ಹೇಳಿದ್ದಾರೆ. ನಿನ್ನೆ ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ಮನೆಯಿಂದ ಹೊರಗೆ ಹೋಗಿದ್ದು, ವಾಪಸ್ ಬಂದಿಲ್ಲ.ಈತನಿಗಾಗಿ ಚಿಕ್ಕಪ್ಪ, ಚಿಕ್ಕಮ ಹುಡುಕಿದರೂ ಪತ್ತೆಯಾಗದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ನಡುವೆ ಬೆಳಗ್ಗೆ 11 ಗಂಟೆ ಸುಮಾರಿಗೆ ವೈ ಮ್ಯಾಕ್‌್ಸ ಸರ್ಕಲ್ ಬಳಿ ಖಾಲಿ ಜಾಗದ ಕಸದ ಸಮೀಪ ಯುವಕನ ಶವ ಗಮನಿಸಿ ದಾರಿಹೋಕರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹ ಪರಿಶೀಲಿಸಿದಾಗ ಈ ಯುವಕ ಮಂಜುನಾಥ ಎಂಬುವುದು ಗೊತ್ತಾಗಿದೆ. ಈತನ ತಲೆಯಲ್ಲಿ ಗಾಯವಾಗಿರುವುದು ಮತ್ತು ದೇಹದ ಮೇಲೆ ತರಚಿದ ಗುರುತುಗಳು ಕಂಡು ಬಂದಿದೆ.

ಮಂಜುನಾಥನನ್ನು ಯಾರು ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂಬುವುದು ಸಧ್ಯಕ್ಕೆ ತಿಳಿದು ಬಂದಿಲ್ಲ. ಈತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಈ ವಿಚಾರಕ್ಕೆ ಕೊಲೆ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ಯುವಕನ ಮೃತದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮಲ್ಲೇಶ್ವರಂ :
ತಾಯಿಗೆ ಬೈದನೆಂಬ ಕಾರಣಕ್ಕೆ ನಿನ್ನೆ ಸಂಜೆ ಗಾರೆ ಕೆಲಸಗಾರನ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.ಕೊಲೆಯಾದ ವ್ಯಕ್ತಿಯನ್ನು ಮಲ್ಲೇಶ್ವರಂ ವಳ್ಳಿಪುರಂ ನಿವಾಸಿ ಪನ್ನೀರ್ ಸೆಲ್ವಂ (38)ಎಂದು ಗುರುತಿಸಲಾಗಿದೆ.ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆ ಸಮೀಪದ ಪಾರ್ಕ್ನಲ್ಲಿ ಪನ್ನೀರ್ ಸೆಲ್ವಂ ನಿನ್ನೆ ಸಂಜೆ 4.30ರ ಸುಮಾರಿನಲ್ಲಿ ಸ್ನೇಹಿತರ ಜೊತೆ ಕುಳಿತು ಮಾತನಾಡುತ್ತಿದ್ದಾಗ ವಳ್ಳಿಪುರಂ ನಿವಾಸಿಯಾದ ಆರೋಪಿ ಪ್ರೇಮ್ ಸಹಚರನೊಂದಿಗೆ ಈ ಸ್ಥಳಕ್ಕೆ ಬಂದು ನನ್ನ ತಾಯಿಗೆ ಏಕೆ ಬೈದೆ? ಎಂದು ಸೆಲ್ವಂ ಜೊತೆ ಜಗಳವಾಡಿದ್ದಾನೆ.

ಆ ವೇಳೆ ಸೆಲ್ವಂ ಕೆಳಗೆ ಬಿದ್ದಾಗ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಆರೋಪಿ ಪ್ರೇಮ್ ತನ್ನ ಸಹಚರನೊಂದಿಗೆ ಪರಾರಿಯಾಗಿದ್ದಾನೆ.ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜ್ಞಾನಭಾರತಿ:
ಮನೆ ಬಾಡಿಗೆ ಕಟ್ಟುವ ವಿಚಾರಕ್ಕೆ ಸಾಕುಮಗನೊಂದಿಗೆ ತಂದೆ ಜಗಳವಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜ್ಞಾನಭಾರತಿ ಪೊಲೀಸ್ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ಜ್ಞಾನಭಾರತಿಯ ದೊಡ್ಡಗೊಲ್ಲರಹಟ್ಟಿ ನಿವಾಸಿ ಪೇಂಟಿಂಗ್ ವೃತ್ತಿ ಮಾಡುತ್ತಿದ್ದ ಆನಂದ್ (37) ಕೊಲೆಯಾದ ದುರ್ದೈವಿ.

ದಿನಾ ಕುಡಿದು ಬರುತ್ತಿದ್ದ ತಂದೆ ಪುಟ್ಟಸ್ವಾಮಿ ಕೌಟುಂಬಿಕ ವಿಚಾರಕ್ಕೆ ಸಾಕು ಮಗ ಆನಂದ್ ಜತೆ ಆಗಾಗ್ಗೆ ಜಗಳ ಮಾಡುತ್ತಿದ್ದರು.
ನಿನ್ನೆ ರಾತ್ರಿ 10.20ರ ಸುಮಾರಿನಲ್ಲಿ ಮನೆಯ ಬಾಡಿಗೆ ಕಟ್ಟುವ ವಿಚಾರಕ್ಕೆ ಅಪ್ಪ ಮಗನ ನಡುವೆ ಜಗಳವಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ತಂದೆ ಪುಟ್ಟಸ್ವಾಮಿ ಮಗನ ಹೊಟ್ಟೆಗೆ ಇರಿದಿದ್ದಾನೆ.

ತೀವ್ರ ರಕ್ತಸ್ರಾವದಿಂದ ಆನಂದ್ ಕುಸಿದುಬಿದ್ದಿದ್ದಾರೆ. ನೆರೆಹೊರೆಯವರು ಇವರ ಮನೆಯಿಂದ ಕೂಗಾಟ, ಕಿರುಚಾಟ ಕೇಳಿ ಮನೆ ಬಳಿ ಬಂದು ನೋಡಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆನಂದ್ನನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಠಾಣೆ ಪೊಲೀಸರು ಪುಟ್ಟಸ್ವಾಮಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News