ಬೆಂಗಳೂರು,ಜೂ.20- ರಾಜ್ಯಸರ್ಕಾರದಿಂದ ದ್ವೇಷ ರಾಜಕಾರಣ ಮಾಡುತ್ತಿದ್ದು, ಕಾಲವೇ ಉತ್ತರ ನೀಡಲಿದೆ ಎಂದು ಕೇಂದ್ರದ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರಸರ್ಕಾರ ರಾಜಕೀಯ ದ್ವೇಷ ಮಾಡುತ್ತಿದೆ ಎಂದು ಆರೋಪಿಸುತ್ತಾರೆ. ಆದರೆ ಇವರು ಮಾಡುತ್ತಿರುವುದು ಏನು? ಎಂದು ಖಾರವಾಗಿ ಪ್ರಶ್ನಿಸಿದರು.
ಬಿಡದಿ ಬಳಿಯ ಕೇತಗಾನಹಳ್ಳಿ ಗ್ರಾಮದ ಭೂಮಿ ಒತ್ತುವರಿ ತೆರವಿಗೆ ಸರ್ಕಾರ ರಚಿಸಿದ್ದ ಎಸ್ಐಟಿಗೆ ಹೈಕೋರ್ಟ್ ತಡೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 40 ವರ್ಷಗಳ ಹಿಂದೆ ಖರೀದಿಸಿದ ಜಮೀನು. ಅದರಲ್ಲಿ ಅತಿಕ್ರಮಣವಾಗಿಲ್ಲ. ಆದರೆ ರಾಜ್ಯಸರ್ಕಾರ ರಾಜಕೀಯ ದ್ವೇಷ ಮಾಡಿಕೊಂಡು ಹೊರಟಿದೆ. ಕಾನೂನು ವ್ಯಾಪ್ತಿಯಲ್ಲಿ ನ್ಯಾಯಾಲಯದಲ್ಲಿ ತೀರ್ಮಾನವಾಗಲಿದೆ ಎಂದರು.
ವಸತಿ ಇಲಾಖೆಗೆ ಸಂಬಂಧಿಸಿದ ಆಡಿಯೋ ವೈರಲ್ ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಿವೇಶನ ಕೊಡಬೇಕಾದರೆ ಕಮಿಷನ್ ನಡೆಯುತ್ತದೆ. ಇದು ನಿರಂತರವಾಗಿ ಎಲ್ಲಾ ಇಲಾಖೆಯಲ್ಲೂ ನಡೆಯುತ್ತಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ರೇಟ್ ಎಷ್ಟು ಫಿಕ್್ಸ ಮಾಡಿದ್ದೀರ ಎಂದು ಕೇಳಿದ್ದಾರೆ. ಈ ವಿಚಾರ ಮಂತ್ರಿಗಳಿಗೂ ಗೊತ್ತಿದ್ದು, ಅವರವರ ಇಲಾಖೆಗಳಲ್ಲಿ ಏನೇನು ನಡೆಯುತ್ತಿದೆ ಎಂಬುದರ ಮಾಹಿತಿಯೂ ಇದೆ ಎಂದರು.
ಶಾಸಕ ಬಿ.ಆರ್.ಪಾಟೀಲ್ ಅವರು ವಸತಿ ಇಲಾಖೆಯಲ್ಲಿ ಹಣ ನೀಡಿದರೆ ಮಾತ್ರ ಅನುದಾನ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ಇದನ್ನು ನಾನಾಗಲೀ, ವಿರೋಧಪಕ್ಷವಾಗಲೀ ಹೇಳುತ್ತಿಲ್ಲ. ಈಗ ಹಣ ಮಾಡಿದರೆ ಮುಂದೆ ಚುನಾವಣೆ ನಡೆಸಬಹುದು ಎಂಬುದು ಇದರ ಮರ್ಮ ಇರಬೇಕು ಎಂದು ಹೇಳಿದರು.
2028ಕ್ಕೆ ಜೆಡಿಎಸ್, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನಾನೇ ಬಟ್ಟೆಯನ್ನು ಒಲಿಸಿಕೊಡುತ್ತೇನೆಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವ್ಯಂಗ್ಯದ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅಂತಹ ದಾರಿದ್ರ್ಯ ನಮಗೆ ಬಂದಿಲ್ಲ. ಈ ನಾಡಿನ ಜನತೆ ನನಗೆ ದಾರಿದ್ರ್ಯವನ್ನು ಕೊಟ್ಟಿಲ್ಲ.
ದುಡ್ಡಿನ ದಾರಿದ್ರ್ಯ ಇರುವುದು ಅವರಿಗೆ. ಆ ಪಾಪದ ಹಣದಿಂದ ನಾನು ಬಟ್ಟೆ ತರಿಸಿಕೊಳ್ಳಬೇಕಾ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಬಮೂಲ್ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಮುಂದೆ ಕೆಎಂಎಫ್ ಅಧ್ಯಕ್ಷರನ್ನೂ ಮಾಡಿಕೊಳ್ಳುತ್ತಾರೆ. ಸರ್ಕಾರ ಅವರದ್ದಿದೆ. ಮುಂದೆ ಸಮಯ ಬರುತ್ತದೆ. ಸೂಕ್ತ ಉತ್ತರ ಕೊಡೋಣ ಎಂದು ಹೇಳಿದರು.