Monday, October 28, 2024
Homeರಾಜಕೀಯ | Politicsಕಾಂಗ್ರೆಸ್ಸಿಗರ ಹೇಳಿಕೆಗಳಿಗೆ ಕಾಲವೇ ಉತ್ತರ ನೀಡಲಿದೆ : ಹೆಚ್ಡಿಕೆ

ಕಾಂಗ್ರೆಸ್ಸಿಗರ ಹೇಳಿಕೆಗಳಿಗೆ ಕಾಲವೇ ಉತ್ತರ ನೀಡಲಿದೆ : ಹೆಚ್ಡಿಕೆ

Time will reply to Congress leader's statements: HDK

ಬೆಂಗಳೂರು,ಅ.28– ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಯಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಮೈಸೂರು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಾಲ್ಕು ದಿನಗಳ ಕಾಲ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ಭಾರಿ ಮತ್ತು ಉಕ್ಕು ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಯದುವೀರ್ ಅರೊಂದಿಗೆ ಜಂಟಿ ಚುನಾವಣಾ ಪ್ರಚಾರವನ್ನು ಚನ್ನಪಟ್ಟಣ ಕ್ಷೇತ್ರದ ಎಂಟು-ಹತ್ತು ಹಳ್ಳಿಗಳಲ್ಲಿ ಮಾಡುತ್ತೇವೆ ಎಂದರು.

ಕ್ಷೇತ್ರದಲ್ಲಿ ಯದುವೀರ್ ಅವರ ಅಭಿಮಾನಿಗಳಿದ್ದಾರೆ. ಹೀಗಾಗಿ ಅವರನ್ನು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿತ್ತು. ನಾಲ್ಕು ದಿನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಸಮಯ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಕಾಲವೇ ಉತ್ತರ :
ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ನವರು ಏನೇನು ಹೇಳಿಕೆ ಕೊಡುತ್ತಿದ್ದಾರೆ ಎಂಬುದನ್ನು ಗಮನಿಸಿದ್ದೇನೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ ಎಂದು ಮಾರ್ಮಿಕವಾಗಿ ಅವರು ತಿಳಿಸಿದರು.ಚನ್ನಪಟ್ಟಣ ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಆಗಿದೆಯೋ, ಇಲ್ಲವೋ ಎಂಬುದನ್ನು ಜನರೇ ತೀರ್ಮಾನ ಮಾಡುತ್ತಾರೆ ಎಂದರು.

ನಿನ್ನೆ ಕಾಂಗ್ರೆಸ್ನ ಮಾಜಿ ಶಾಸಕರು, ನಾಯಕರು ಆಡಿರುವ ಮಾತುಗಳನ್ನು ಗಮನಿಸಿದ್ದೇನೆ. ಈ ಹಿಂದೆ ನನ್ನ ಜೊತೆಯಲ್ಲಿ ಇದ್ದವರೇ ಈಗ ನನ್ನನ್ನು ಕೆರಳಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. 2010 ರ ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದವರು ಈಗ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಮಾಜಿ ಶಾಸಕ ಎಂ.ಸಿ.ಅಶ್ವಥ್ ಅವರನ್ನು ಆಗ ಅಭ್ಯರ್ಥಿ ಮಾಡಿ ಸಂಪೂರ್ಣ ಚುನಾವಣಾ ವೆಚ್ಚವನ್ನು ಇದೇ ಕುಮಾರಸ್ವಾಮಿ ವಹಿಸಿಕೊಂಡಿರಲಿಲ್ಲವೇ ಎಂದು ಪ್ರಶ್ನಿಸಿದರು.

ರಾಮನಗರ ಕ್ಷೇತ್ರದ ಉಪಚುನಾವಣೆಯಲ್ಲಿ ರಾಜು ಅವರನ್ನು ಪಕ್ಷದ ವತಿಯಿಂದ ಸ್ಪರ್ಧೆಗಿಳಿಸಿ ಗೆಲ್ಲಿಸಲಿಲ್ಲವೇ?, ಅವರು ಜಿ.ಪಂ. ಚುನಾವಣೆಯಲ್ಲಿ ಸೋತಿದ್ದವರು. ಕೇವಲ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರವರ ಕುಟುಂಬವಷ್ಟೇ ರಾಜಕಾರಣ ಮಾಡಿದ್ದೇವೆಯೇ ಎಂದು ಕೇಳಿದರು.

ಮಧುಗಿರಿ ಕ್ಷೇತ್ರಕ್ಕೆ ಉಪಚುನಾವಣೆ ಎದುರಾದಾಗ ಅಭ್ಯರ್ಥಿಗಳು ಇಲ್ಲದಿದ್ದ ಕಾರಣಕ್ಕೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿಯವರನ್ನು ಸ್ಪರ್ಧೆಗಿಳಿಸಬೇಕಾಗಿತ್ತು. ಅದೇ ರೀತಿ ಮತ್ತೊಮೆ ಚನ್ನಪಟ್ಟಣ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾದಾಗ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಅನಿತಾ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಬೇಕಾಗಿತ್ತು ಎಂದು ಅವರು ತಿಳಿಸಿದರು.

ಮದ್ದೂರಿನ ಮಾಜಿ ಶಾಸಕ ಸಿದ್ದರಾಜು ಅವರ ಕುಟುಂಬದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅವರ ಕುಟುಂಬದವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ ಮೇಲೆ ಕ್ಷೇತ್ರ ಉಳಿಸಿಕೊಳ್ಳುವುದು ಅವರ ಜವಾಬ್ದಾರಿಯಲ್ಲವೇ?, ಕ್ಷೇತ್ರ ಉಳಿಸಿಕೊಳ್ಳುವ ಶಕ್ತಿ ಇಲ್ಲವೆಂದ ಮೇಲೆ ನಾನು ಏನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆ್ಯಂಬುಲೆನ್ಸ್ ನಲ್ಲಿ ಬಂದು ಮೊಮಗನ ಪರ ಪ್ರಚಾರ ಮಾಡುತ್ತಾರೆ ಎಂದು ಹೇಳಿದ್ದಾರೆ. ಅಶ್ವತ್‌್ಥ ಹೇಳಿರುವುದನ್ನೇ ಮಾಜಿ ಸಂಸದ ಡಿ.ಕೆ.ಸುರೇಶ್ ಕೂಡ ಹೇಳಿದ್ದಾರೆ. ಅಂದರೆ ದೇವೇಗೌಡರ ಆರೋಗ್ಯದ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ.

ಅಶ್ವತ್‌್ಥ ಅವರು ಸ್ಪರ್ಧಿಸಿದಾಗ ಹಳ್ಳಿಹಳ್ಳಿಗೆ ಹೋಗಿ ಅವರ ಪರ ಪ್ರಚಾರ ಮಾಡಿದ್ದರು. ಆಗಲೂ ವ್ಯಾಮೋಹಕ್ಕೆ ಪ್ರಚಾರ ಮಾಡಿದ್ದರೇ?, ಮೊಮಗನ ಪಟ್ಟಾಭಿಷೇಕಕ್ಕಾಗಿ ಪ್ರಚಾರಕ್ಕೆ ದೇವೇಗೌಡರು ಬರುತ್ತಾರೆ ಎನ್ನುತ್ತಾರಲ್ಲಾ ಎಂದು ಬೇಸರ ವ್ಯಕ್ತಪಡಿಸಿದರು. ಈ ರೀತಿಯ ಸಣ್ಣತನದ ಮಾತುಗಳು ಸರಿಯಲ್ಲ. ಇದಕ್ಕೆಲ್ಲಾ ಕಾಲವೇ ಉತ್ತರ ನೀಡುತ್ತದೆ ಎಂದು ಅವರು ಹೇಳಿದರು.

RELATED ARTICLES

Latest News