Friday, July 5, 2024
Homeಬೆಂಗಳೂರುಬೆಂಗಳೂರಿನ ಇಂದಿನ ಕ್ರೈಂ ಸುದ್ದಿಗಳು

ಬೆಂಗಳೂರಿನ ಇಂದಿನ ಕ್ರೈಂ ಸುದ್ದಿಗಳು

ಸ್ಪಾ ಮೇಲೆ ದಾಳಿ: ವ್ಯಕ್ತಿ ಬಂಧನ
ಬೆಂಗಳೂರು, ಮೇ 31- ಹೊರರಾಜ್ಯದ ಮಹಿಳೆಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ಇಂದಿರಾನಗರ ಠಾಣೆ ಪೊಲೀಸರು ದಾಳಿ ಮಾಡಿ ವ್ಯಕ್ತಿಯನ್ನು ವಶಕ್ಕೆ ಪಡೆದು ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ದೊಮಲೂರಿನ 2ನೇ ಹಂತದಲ್ಲಿರುವ ಸ್ಪಾವೊಂದರಲ್ಲಿ ಅಕ್ರಮ ಚಟುವಟಿಕೆ ನಡೆಸಲಾಗುತ್ತದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಉತ್ತರ ಪ್ರದೇಶ ಮತ್ತು ನಾಗಲ್ಯಾಂಡ್‌ ಮೂಲದ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ದಾಳಿ ವೇಳೆ ಸ್ಪಾ ಮಾಲೀಕ ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರೆದಿದೆ.

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದವರ ಬಂಧನ
ಬೆಂಗಳೂರು, ಮೇ 31- ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ 19 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹನುಮಂತನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಬೇಕರಿ ಮಾಲಿಕನ ಜೊತೆ ಜಗಳವಾಡಿ ಅವರ ಮನೆಗೆ ನುಗ್ಗಿ ಅವರ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಹಾಸನ ಜಿಲ್ಲೆಯ ಆಲೂರು ತಾಲೂಕಿನ ನಿವಾಸಿ, ಆಟೋ ಚಾಲಕನನ್ನು ಬಂಧಿಸಲಾಗಿದೆ.

ಗಿರಿನಗರ:
ಪೋಕ್ಸೋ ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ 2016ರಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ತಮಿಳುನಾಡಿನ ತಿರುನಲ್ಲೂರಿನ ಹೇಮಾಪುರ ಗ್ರಾಮದಲ್ಲಿ ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೆಂಪೇಗೌಡ ನಗರ:
ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿ ಜಾಮೀನು ಪಡೆದು ಬಿಡುಗಡೆಯಾದ ನಂತರ ನ್ಯಾಯಾಲಯಕ್ಕೆ ಹಾಜರಾಗದೇ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ರೌಡಿಯನ್ನು ಕೆಂಪಾಂಬುದಿಕೆರೆಯ ಬಳಿ ಕೆಂಪೇಗೌಡ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹನುಮಂತನಗರ:
ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ ಜಾಮೀನು ಪಡೆದು ಬಿಡುಗಡೆಯಾದ ನಂತರ 2014ರಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿಕೆ ಅಚ್ಚುಕಟ್ಟು, ಗೌಡರಪಾಳ್ಯದ ದುರ್ಗಾಂಭ ದೇವಾಲಯದ ಬಳಿ ಹನುಮಂತನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಬ್ಬರ ಬಂಧನ:
ಹಲ್ಲೆ ಮಾಡಿ ಪರಾರಿಯಾಗಿದ್ದ ಇಬ್ಬರನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿ ಎರಡು ಮೊಬೈಲ್‌ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಮೈಸೂರು ಬ್ಯಾಂಕ್‌ ಕಾಲೋನಿಯ ಗಾರ್ಮೆಂಟ್ಸ್ ವೊಂದರ ಮುಂಭಾಗ ವ್ಯಕ್ತಿಗೆ ಹಲ್ಲೆ ಮಾಡಿ ಪರಾರಿಯಾಗಿದ್ದ ಪ್ರಕರಣದಲ್ಲಿ ಸುಂಕದ ಕಟ್ಟೆಯ ಟೀ ಅಂಗಡಿಯೊಂದರ ಬಳಿ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಸೆಕ್ಯುರಿಟಿ ಗಾರ್ಡ್‌ ಸೆರೆ : 2 ಲಕ್ಷ ಮೌಲ್ಯದ 18 ಮೊಬೈಲ್‌ ಫೋನ್‌ಗಳು ವಶ
ಬೆಂಗಳೂರು, ಮೇ 31- ಉದ್ಯೋಗ ಹರಸಿ ನಗರಕ್ಕೆ ಬಂದು ಸೆಕ್ಯುರಿಟಿ ಕೆಲಸ ಮಾಡುತ್ತಾ ಮನೆಯ ಕಿಟಕಿ ಬಳಿಯಿಟ್ಟಿದ್ದ ಹಾಗೂ ಜನಜಂಗುಳಿ ಪ್ರದೇಶಗಳಲ್ಲಿ ಸಾರ್ವಜನಿಕರ ಮೊಬೈಲ್‌ ಫೋನ್‌ ಎಗರಿಸುತ್ತಿದ್ದ ನೇಪಾಳ ಮೂಲದ ಸೆಕ್ಯುರಿಟಿ ಗಾರ್ಡ್‌ನನ್ನು ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿ ಎರಡು ಲಕ್ಷ ಮೌಲ್ಯದ ವಿವಿಧ ಕಂಪೆನಿಯ 18 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಗ್ಗದಾಸಪುರದ ಬಾಲಾಜಿ ಲೇಔಟ್‌ನಲ್ಲಿ ನಿರ್ಮಾಣವಾಗುತ್ತಿದ್ದ ಕಟ್ಟಡವೊಂದರ ಲೇಬರ್‌ ಶೆಡ್‌ನಲ್ಲಿ ರಾತ್ರಿ ಮಲಗಿದ್ದ ಕಾರ್ಮಿಕನ ಮೊಬೈಲ್‌ ಫೋನ್‌ ಕಳವಾಗಿರುವ ಬಗ್ಗೆ ದೂರು ದಾಖಲಾಗಿತ್ತು.ಆರೋಪಿಯು ಕದ್ದ ಮೊಬೈಲ್‌ಗಳನ್ನು ಮಾರುವ ಸಲುವಾಗಿ ಬೆನ್ನಿಗಾನಹಳ್ಳಿಗೆ ಬಂದು ಗ್ರಾಹಕರನ್ನು ಹುಡುಕುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೊಬೈಲ್‌ ಕಳವು ಮಾಡಿರುವುದಾಗಿ ತಿಳಿಸಿದ್ದಾನೆ.

ಆರೋಪಿಯು ಮೂಲತಃ ನೇಪಾಳದವನಾಗಿದ್ದು, ಉದ್ಯೋಗ ಅರಸಿ ತನ್ನ ತಂದೆಯೊಂದಿಗೆ ನಗರಕ್ಕೆ ಬಂದು ಮಹದೇವಪುರದಲ್ಲಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದು, ಮನೆಯ ಕಿಟಕಿ ಬಳಿಯಿಟ್ಟಿದ್ದ ಹಾಗೂ ಜನ ಜಂಗುಳಿ ಹೆಚ್ಚಿರುವ ಪ್ರದೇಶಗಳಲ್ಲಿ ಸಾರ್ವಜನಿಕರ ಜೇಬುಗಳಿಂದ ಮೊಬೈಲ್‌ ಫೋನ್‌ ಕದ್ದು ಬೇರೆಯವರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದುದು ತನಿಖೆಯಿಂದ ತಿಳಿದು ಬಂದಿರುತ್ತದೆ. ಆರೋಪಿಯ ಬಂಧನದಿಂದ ಹೆಚ್‌.ಎ.ಎಲ್‌ ಪೊಲೀಸ್‌‍ ಠಾಣೆಯ ಮೊಬೈಲ್‌ ಕಳವು ಪ್ರಕರಣವೊಂದು ಪತ್ತೆಯಾಗಿದೆ.ಇನ್‌್ಸಪೆಕ್ಟರ್‌ ಸುದರ್ಶನ್‌ ಮತ್ತು ಸಿಬ್ಬಂದಿ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

ತಮಿಳುನಾಡಿನ ನಾಲ್ವರ ಬಂಧನ: 45 ಲಕ್ಷ ಮೌಲ್ಯದ 31 ದ್ವಿಚಕ್ರ ವಾಹನಗಳು- ಚಿನ್ನದ ಸರ ಜಪ್ತಿ
ಬೆಂಗಳೂರು, ಮೇ 31- ಈ ಹಿಂದೆ ದರೋಡೆ, ಪೋಕ್ಸೋ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನಿನ ಮೇಲೆ ಹೊರ ಬಂದ ನಂತರವೂ ದುಶ್ಚಟಗಳಿಗೆ ದಾಸರಾಗಿ ದ್ವಿಚಕ್ರ ವಾಹನ ಕಳ್ಳತನ ಹಾಗೂ ಸುಲಿಗೆ ಮಾಡುತ್ತಿದ್ದ ತಮಿಳುನಾಡಿನ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧಿತರಿಂದ 45 ಲಕ್ಷ ಬೆಲೆಬಾಳುವ 31 ದ್ವಿಚಕ್ರ ವಾಹನಗಳು, 10 ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ತವೇರಾ ಕಾರನ್ನು ವಶಪಡಿಸಿಕೊಂಡಿದ್ದಾರೆ.

ದ್ವಿಚಕ್ರ ವಾಹನ ಕಳ್ಳತನವಾಗಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮೊದಲು ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಕಾಲ ತಮ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಇನ್ನಿಬ್ಬರ ಬಗ್ಗೆ ಮಾಹಿತಿ ಪಡೆದು ಆ ಇಬ್ಬರನ್ನು ಎಲೆಕ್ಟ್ರಾನಿಕ್‌ ಸಿಟಿ 2ನೇ ಹಂತದ ಜೈನ್‌ ಕಾಲೇಜ್‌ ಹತ್ತಿರ, ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಈ ಆರೋಪಿಗಳು ತಮಿಳುನಾಡಿನ ವೇಲೂರು ಜಿಲ್ಲೆಯವರಾಗಿದ್ದು, ಈ ಹಿಂದೆ ರಾಬರಿ, ಪೋಕ್ಸೋ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಬಿಡುಗಡೆಯಾದ ನಂತರ ತಮ್ಮ ದುಶ್ಚಟಗಳಿಗೆ ಹಣ ಸಾಕಾಗದ ಕಾರಣ ಕಳ್ಳತನ ಮಾಡುವುದನ್ನು ಮುಂದುವರೆಸಿದ್ದರು.

ತಮಿಳುನಾಡಿನಲ್ಲಿಯೇ ಒಂದು ತವೇರಾ ಕಾರನ್ನು ಬಾಡಿಗೆ ಪಡೆದು, ಆ ಕಾರಿನಲ್ಲಿ ರಾತ್ರಿ ವೇಳೆಯಲ್ಲಿ ಬೆಂಗಳೂರಿಗೆ ಬಂದು ಒದೊಂದು ಏರಿಯಾದಲ್ಲಿ ಒಬ್ಬೊಬ್ಬರು ಇಳಿದುಕೊಂಡು, ನಗರದ ವಿವಿಧ ಏರಿಯಾಗಳಲ್ಲಿ ಮನೆಗಳ ಮುಂದೆ ಹಾಗೂ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ದುಬಾರಿ ಬೆಲೆ ಬಾಳುವಂತಹ ದ್ವಿಚಕ್ರ ವಾಹನಗಳ ಹ್ಯಾಂಡ್‌ ಲಾಕ್‌ ಮುರಿದು ಕಳ್ಳತನ ಮಾಡಿಕೊಂಡು ಹೋಗಿ ಕೆಲವು ದ್ವಿ-ಚಕ್ರ ವಾಹನಗಳನ್ನು ವೇಲೂರು ಜಿಲ್ಲೆಯ ಗುಡಿಯಾತ್ತಂ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅವರ ಪರಿಚಯದವರಿಗೆ ಮಾರಾಟ ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ಹೆಬ್ಬಗೋಡಿ ಠಾಣಾ ಸರಹದಿನಲ್ಲಿ ವ್ಯಕ್ತಿಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿರುವುದು ತನಿಖೆಯಿಂದ ಗೊತ್ತಾಗಿದೆ.ಆರೋಪಿಗಳು ಕಳ್ಳತನ ಮಾಡಿದ್ದ ದ್ವಿ-ಚಕ್ರ ವಾಹನಗಳನ್ನು ತಮಿಳುನಾಡಿನ ಗುಡಿಯತ್ತಂ, ಮಾದನೂರು, ವಡ್ಡರೆಡ್ಡಿಪಾಳ್ಯಂ, ಸೇಂಗೊಂಡ್ರಂ ಗ್ರಾಮಗಳಲ್ಲಿ ಮಾರಾಟ ಮಾಡಿದ್ದವರ ಕಡೆಯಿಂದ ವಾಹನಗಳನ್ನು ಸ್ಥಳೀಯ ಪೊಲೀಸರ ಸಹಕಾರದಿಂದ ವಶಪಡಿಸಿಕೊಂಡಿದ್ದಾರೆ.ಇನ್ಸ್ ಪೆಕ್ಟರ್‌ ಸತೀಶ್‌ ಹಾಗೂ ಸಿಬ್ಬಂದಿ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಮೊಬೈಲ್‌ ಸುಲಿಗೆ: ಇಬ್ಬರ ಬಂಧನ
ಬೆಂಗಳೂರು, ಮೇ 31- ಸ್ಕೂಟರ್‌ನಲ್ಲಿ ಸುತ್ತಾಡುತ್ತಾ ಮೊಬೈಲ್‌ ಎಗರಿಸುತ್ತಿದ್ದ ಇಬ್ಬರು ಸುಲಿಗೆಕೋರರನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ ಒಂದು ಲಕ್ಷ ಮೌಲ್ಯದ ಮೊಬೈಲ್‌ ಹಾಗೂ ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ.ರಾಮಮೂರ್ತಿ ನಗರದ ವಿವೇಕಾನಂದ ರಸ್ತೆ ನಿವಾಸಿ ಮೌಲಾಲಿ ಅಲಿಯಾಸ್‌‍ ಮೊಹಮದ್‌ ಅಲಿ(19) ಮತ್ತು ಮುತ್ತಮ ಲೇಔಟ್‌ನ 1ನೇ ಕ್ರಾಸ್‌‍ ನಿವಾಸಿ ಮೊಹಮದ್‌ ಜೂನೈದ(19) ಬಂಧಿತ ಆರೋಪಿಗಳು.

ಮೊಹಮದ್‌ ಅಲಿ ಚಿಕನ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ಮೊಹಮದ್‌ ಜುನೈದ ರಾಯಲ್‌ ಎನ್ಫೀೕಲ್‌್ಡ ಷೋ ರೂಂ ನಲ್ಲಿ ಕೆಲಸ ಮಾಡುತ್ತಿದ್ದನು. ಬಾಣಸವಾಡಿಯ 100 ಅಡಿ ರಸ್ತೆ, ಕಾಫಿ ಬ್ರೆವರಿ ಹತ್ತಿರ ವ್ಯಕ್ತಿಯೊಬ್ಬರು ಹೋಗುತ್ತಿದ್ದಾಗ ಇಬ್ಬರು ಸುಲಿಗೆಕೋರರು ಕಪ್ಪು ಬಣ್ಣದ ಸ್ಕೂಟರ್‌ನಲ್ಲಿ ಸುತ್ತಾಡುತ್ತಾ ಅವರ ಕೈಯಲ್ಲಿದ್ದ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಇಬ್ಬರನ್ನು ಬಂಧಿಸಿ ಮೊಬೈಲ್‌ ಪೋನ್‌ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ. ಬಾಣಸವಾಡಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.

RELATED ARTICLES

Latest News