ಚಿಕ್ಕಬಳ್ಳಾಪುರ, ಜೂ 30- ಜು.2ರಂದು ನಂದಿಗಿರಿಧಾಮದಲ್ಲಿ ನಡೆಯಲಿರುವ 14ನೇ ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಗಿರಿಧಾಮಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ರವೀಂದ್ರ ತಿಳಿಸಿದ್ದಾರೆ.
ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸಂಪುಟ ದರ್ಜೆಯ ಎಲ್ಲಾ ಮಂತ್ರಿಗಳು, ಶಾಸಕರು, ವಿಧಾನಸಭಾ ಸದಸ್ಯರು, ಇಲಾಖಾ ಮುಖ್ಯಸ್ಥರು ಹಾಗೂ ಪತ್ರಕರ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧ ಹೇರಲಾಗಿದೆ ಎಂದು ಹೇಳಿದರು.
ನಂದಿಗಿರಿಧಾಮಕ್ಕೆ ಹೋಗಲು ಮತ್ತು ಬರಲು ಒಂದೇ ರಸ್ತೆ ಇರುವುದರಿಂದ ವಾಹನ ದಟ್ಟಣೆ ಹೆಚ್ಚಾಗುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಇಂದಿನಿಂದ(ಜೂನ್ 30 ) ಜು.3 ಪ್ರವಾಸಿಗರಿಗೆ ಹಾಗೂ ವಾಹನಗಳ ಪ್ರವೇಶವನ್ನು ನಿರ್ಷೇಸಲಾಗಿದೆ ಎಂದು ಅವರು ತಿಳಿಸಿದರು.
ನಂದಿಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು
ಜು.2ರಂದು ನಂದಿಗಿರಿಧಾಮದಲ್ಲಿ ನಡೆಯಲಿರುವ ಸಚಿವ ಸಂಪುಟ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಸಾರ್ವಜನಿಕರಿಗೆ ಪ್ರವೇಶ ನಿಬರ್ಂಧ ಹೇರಲಾಗಿದ್ದು, ಈ ಹಿನ್ನಲೆಯಲ್ಲಿ ಭಾನುವಾರ ಗಿರಿಧಾಮಕ್ಕೆ ಪ್ರವಾಸಿಗರ ದಂಡೇ ಹರಿದುಬಂದಿತ್ತು.
ನಂದಿಬೆಟ್ಟದ ರಸ್ತೆ ಮತ್ತು ಪಾರ್ಕಿಂಗ್ ಸ್ಥಳಗಳಲ್ಲೆವೂ ಭರ್ತಿಯಾಗಿದ್ದು, ಸುಮಾರು 5 ಕಿ.ಮೀಟರ್ ದೂರದವರೆಗೂ ವಾಹನಗಳು ಸಾಲುಗಟ್ಟಿನಿಂತಿದ್ದವು. ಈ ಸಂಚಾರದಟ್ಟಣೆ
ನಿಯಂತ್ರಿಸಲು ನಂದಿಗಿರಿಧಾಮ ಪೊಲೀಸರು ಹಾಗೂ ಗಿರಿಧಾಮದ ಸಿಬ್ಬಂದಿಗಳು ಹರಸಾಹಸಪಟ್ಟರು.
ಈ ವೇಳೆ ಮಾತನಾಡಿದ ಕೆಲ ಪ್ರವಾಸಿಗರು, ಕಚೇರಿಗಳಿಗೆ ರಜೆ ಇದ್ದು, ಮಕ್ಕಳಿಗೂ ರಜೆ ಇರುವ ಕಾರಣ ಪ್ರಕೃತಿಯ ಆಹ್ಲಾದವನ್ನು ಅನುಭವಿಸಲು ಬಂದಿದ್ದೇವೆ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಬರುವ ಪ್ರವಾಸಿಗರಿಗಿಂತ ಇಂದು ಹೆಚ್ಚು ಜನ ಬಂದಿದ್ದಾರೆ ಎಂದರೆ. ಇನ್ನೂ ಕೆಲವರು ವಾರದ ದಿನಗಳಲ್ಲಿ ಬರಲು ರಜೆ ಇರುವುದಿಲ್ಲ ಹಾಗಾಗಿ ವಾರಾಂತ್ಯದಲ್ಲಿ ಅಗಾಗ್ಗೆ ಬರುತ್ತಿರುತ್ತೇವೆ ಎಂದು ತಮ್ಮ ಖುಷಿಯನ್ನು ಹಂಚಿಕೊಂಡರು.
ಇನ್ನೂ ಕೆಲವರು ಸಾಲುಗಟ್ಟಿ ನಿಂತಿರುವ ವಾಹನಗಳನ್ನು ಕಂಡು, ಬೆಂಗಳೂರಲ್ಲೇ ಟ್ರಾಫಿಕ್ ಜಾಮ್ ಎಂದುಕೊಂಡರೇ ಇಲ್ಲೂ ಅದೇ ಜಾಮ್ನಲ್ಲಿ ಸಿಲುಕಿದ್ದೇವೆ. ವಾಪಸ್ಸು ಹೋಗೋಣವೆಂದರೆ ಹಿಂದೆಯೂ ಹನುಮಂತನ ಬಾಲದಂತೆ ವಾಹನಗಳು ಸಾಲುಗಟ್ಟಿ ನಿಂತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ನಂದಿ ಬೆಟ್ಟದ ಪ್ರವೇಶದಲ್ಲೇ ಪೋಲಿಸರು ಸೀಮಿತ ವಾಹನಗಳನ್ನು ಮಾತ್ರ ಬಿಡುತ್ತಿದ್ದರು. ಕೆಲ ವಾಹನಗಳು ವಾಪಸ್ ಬಂದ ನಂತರ ವಾಹನಗಳನ್ನು ಬಿಡುತ್ತಿದ್ದರೆ. ಆದರೆ ಈ ಬಾರಿ ಸರಿಯಾದ ವ್ಯವಸ್ಥೆ ಮಾಡದೇ ಇರುವುದು ನಮಗೆಲ್ಲಾ ತೊಂದರೆ ಉಂಟುಮಾಡಿದೆ ಎಂದು ಪೊಲೀಸರ ಕಾರ್ಯವೈಖರಿಗೆ ಸಿಡಿಮಿಡಿಕೊಂಡರು.