Tuesday, September 17, 2024
Homeರಾಜ್ಯಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಶ್ರದ್ಧಾಂಜಲಿ

ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಶ್ರದ್ಧಾಂಜಲಿ

ಬೆಂಗಳೂರು,ಜು.15- ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷರಾಗಿದ್ದ ನಾಗಮ ಕೇಶವಮೂರ್ತಿ, ಕೇಂದ್ರ ಹಾಗೂ ರಾಜ್ಯದ ಮಾಜಿ ಸಚಿವರಾಗಿದ್ದ ವಿ.ಶ್ರೀನಿವಾಸ ಪ್ರಸಾದ್‌, ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ನಿರೂಪಕಿ ಅಪರ್ಣಾ ಸೇರಿದಂತೆ ಇತ್ತೀಚೆಗೆ ನಿಧನರಾದ ಗಣ್ಯರಿಗೆ ವಿಧಾನಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇಂದು ಬೆಳಿಗ್ಗೆ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿದರು.

ಸಭಾಧ್ಯಕ್ಷರು ಮಂಡಿಸಿದ ಸಂತಾಪ ಸೂಚನೆಯನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ನಾಗಮ ಕೇಶವಮೂರ್ತಿಯವರು ಸಾಮಾಜಿಕ ಸೇವೆಯಲ್ಲಿ ಮದರ್‌ ಥೆರೇಸಾ, ರಾಜಕಾರಣದಲ್ಲಿ ದಾವಣಗೆರೆ ಇಂದಿರಾಗಾಂಧಿ ಎಂದೇ ಖ್ಯಾತಿ ಪಡೆದಿದ್ದರು. ಶ್ರೀನಿವಾಸ್‌‍ ಪ್ರಸಾದ್‌ ಅವರು, ಆರು ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿ ಶೋಷಿತರ, ದೀನ ದಲಿತರ ಹಿಂದುಳಿದವರ ಧ್ವನಿಯಾಗಿದ್ದರು ಎಂದು ಗುಣಗಾನ ಮಾಡಿದರು.

ದ್ವಾರಕೀಶ್‌ ಅವರು ಖ್ಯಾತ ಹಾಸ್ಯನಟರಾಗಿದ್ದು, ನಿರ್ಮಾಪಕ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಸಿಂಗಾಪುರದಲ್ಲಿ ರಾಜಾ ಕುಳ್ಳ ಎಂಬುದು ವಿದೇಶದಲ್ಲೇ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು ಎಂದು ಸರಿಸಿದರು.ಸಾಹಿತಿ ಕಮಲಾ ಹಂಪನಾ ಅವರು ಜೈನ ಧರ್ಮ, ಹಳಗನ್ನಡ ಗ್ರಂಥ ಸಂಪಾದನೆ ಮಾಡಿದ್ದರು. ದಾನ ಚಿಂತಾಮಣಿ, ಅತ್ತಿಮಬ್ಬೆ ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು. ನಾಡೋಜ ಗೌರವವೂ ಅವರಿಗೆ ಸಂದಿತ್ತು ಎಂದು ಹೇಳಿದರು.

ನಿರೂಪಕಿ ಅಪರ್ಣಾ ಅವರು ಶುದ್ಧಕನ್ನಡದಲ್ಲಿ ನಿರೂಪಣೆ ಮಾಡುವ ಕಲೆ ಮೈಗೂಡಿಸಿಕೊಂಡಿದ್ದರು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು ಎಂದರು. ಖ್ಯಾತ ಧರ್ಮಗುರುವಾಗಿದ್ದ ಖಾಝಿ ಅಸ್ಸಯ್ಯದ್ ಫಝಲ್‌ ಕೋಯಮ ತಂಙಳ್‌ ಅಲ್ಬುಖಾರಿ ಅವರು ಜಾತಿ, ಧರ್ಮ, ಮತ ಭೇದವಿಲ್ಲದೆ ಮಾನವೀಯತೆಯಿಂದ ಕೂಡಿದ ವ್ಯಕ್ತಿ ಎಂದು ಸರಿಸಿದ ಅವರು, ಇತ್ತೀಚೆಗೆ ಅಗಲಿದ ಎಲ್ಲಾ ಗಣ್ಯರಿಗೂ ಶಾಂತಿ ದೊರೆಯಲಿ, ಸಾವಿನ ದುಃಖ ಭರಿಸುವ ಶಕ್ತಿ ಅವರ ಕುಟುಂಬ ವರ್ಗದವರಿಗೆ, ಹಿತೈಷಿಗಳಿಗೆ ಹಾಗೂ ಬಂಧುಗಳಿಗೆ ದೊರೆಯಲಿ ಎಂದು ಕೋರಿದರು.

ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ನಾನು ಶಾಸಕನಾಗಿದ್ದಾಗ ಮತ್ತು ಶಾಸಕನಾಗುವ ಮೊದಲು ಸದಸ್ಯರಾಗಿದ್ದವರು ನಿಧನರಾಗಿದ್ದಾರೆ. ಅವರು ಈ ಸದನಕ್ಕೆ ಗೌರವ ತರುವ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಸಾಹಿತ್ಯ, ಚಿತ್ರರಂಗಕ್ಕೂ ಗೌರವ ತರುವ ರೀತಿಯಲ್ಲಿ ಕೆಲಸ ಮಾಡಿದ ಗಣ್ಯರೂ ಅಗಲಿದ್ದಾರೆ. ಇವರೆಲ್ಲರಿಗೂ ಸಂತಾಪವನ್ನು ಸೂಚಿಸುವುದಾಗಿ ತಿಳಿಸಿದರು.

ನಾಗಮ ಕೇಶವಮೂರ್ತಿಯವರು ಮಹಿಳೆಯರಿಗೆ ದಾರಿದೀಪವಾಗಿದ್ದವರು ಎಂದು ಸರಿಸಿದರು. ಶ್ರೀನಿವಾಸ್‌‍ ಪ್ರಸಾದ್‌ ಅವರು ಯಾವುದೇ ಪಕ್ಷದಲ್ಲಿದ್ದರೂ ತಮ್ಮ ತನವನ್ನು ಬಿಟ್ಟುಕೊಟ್ಟಿರಲಿಲ್ಲ. ತುಳಿತಕ್ಕೆ ಒಳಗಾದವರ ಧ್ವನಿಯಾಗಿ ಕೆಲಸ ಮಾಡಿದ್ದರು. ಅಪರ್ಣಾ ಅವರ ಧ್ವನಿ ಮೆಟ್ರೋದಲ್ಲಿ ಉಳಿದಿದೆ. ದ್ವಾರಕೀಶ್‌ ಅವರು ಹಾಸ್ಯನಟರಾಗಿ ಹೆಚ್ಚು ಚಿರಪರಿಚಿತರಾದವರು ಎಂದು ಮೃತರ ಗುಣಗಾನ ಮಾಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ಶ್ರೀನಿವಾಸ್‌‍ ಪ್ರಸಾದ್‌ ಸ್ನೇಹಮಯಿಯಾಗಿದ್ದರು. ದ್ವಾರಕೀಶ್‌ ಅವರು ಆತೀಯರಾಗಿದ್ದರೂ ಅವರ ಸಿನಿಮಾವನ್ನು ಕ್ಯೂನಲ್ಲಿ ನಿಂತು ಟಿಕೆಟ್‌ ಪಡೆದು ವೀಕ್ಷಿಸಲಾಗುತ್ತಿತ್ತು. ಕಮಲಾ ಹಂಪನಾ ಅವರ ಪುತ್ರನ ಜೊತೆ ತಾವೂ ವ್ಯಾಸಂಗ ಮಾಡುವಾಗ ರಾಜಾಜಿನಗರದಲ್ಲಿ ಸಮಯ ಕಳೆದಿದ್ದೆವು ಎಂದು ಮೃತರ, ಗಣ್ಯರ ನಡುವಿನ ಒಡನಾಟವನ್ನು ಮೆಲುಕು ಹಾಕಿದರು.

ಸಚಿವ ಡಾ.ಎಚ್‌.ಸಿಮಹದೇವಪ್ಪ ಮಾತನಾಡಿ, 14 ಜನ ಮಹನೀಯರು ನಮ್ಮನ್ನು ಅಗಲಿದ್ದಾರೆ. ಹುಟ್ಟು ಸ್ವಾಭಾವಿಕ, ಸಾವು ಖಚಿತ. ಬದುಕಿನ ಪ್ರಯಾಣ ಅಂತ್ಯಗೊಳಿಸಿದವರಿಗೆ ನಾವು ಸಂತಾಪವನ್ನು ಸಲ್ಲಿಸುತ್ತಿದ್ದೇವೆ ಎಂದು ಹೇಳಿ ಮೃತರ ಗುಣಗಾನ ಮಾಡಿದರು.
ಜೆಡಿಎಸ್‌‍ನ ಶಾಸಕರಾದ ಶಾರದಾ ಪೂರ್ಯ ನಾಯಕ್‌, ತರೀಕೆರೆ ಶ್ರೀನಿವಾಸ್‌‍, ಹರೀಶ್‌ ಪೂಂಜಾ, ದರ್ಶನ್‌ ಧ್ರುವನಾರಾಯಣ, ಕೂಡ್ಲಗಿ ಶ್ರೀನಿವಾಸ್‌‍, ಶೈಲೇಂದ್ರ, ಹರೀಶ್‌, ಕೆ.ಆರ್‌.ಕೃಷ್ಣಮೂರ್ತಿ, ಬಿ.ವೈ.ವಿಜಯೇಂದ್ರ, ಬಸಂತಪ್ಪ, ಕೃಷ್ಣಪ್ಪ ಮತ್ತಿತರರು ಮೃತರ ಗುಣಗಾನ ಮಾಡಿ ತೀವ್ರ ಸಂತಾಪ ಸೂಚಿಸಿದರು.ನಂತರ ಸದನದಲ್ಲಿ ಸದಸ್ಯರೆಲ್ಲರೂ ಎದ್ದು ನಿಂತು ಮೌನಾಚರಣೆ ಮಾಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

RELATED ARTICLES

Latest News