ಬೆಂಗಳೂರು,ಜೂ.3- ಅತೀ ವೇಗದಿಂದಾಗಿ ಎರಡು ದ್ವಿಚಕ್ರ ವಾಹನಗಳ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ಕೆ.ಆರ್.ಮಾರುಕಟ್ಟೆಯ ಬಿಜಿಎಸ್ ಫ್ಲೈ ಓವರ್ ಮೇಲೆ ಇಂದು ಬೆಳಗಿನ ಜಾವ ಸಂಭವಿಸಿದೆ.
ಮೃತಪಟ್ಟವರನ್ನು ಮೂಲತಃ ಮಳವಳ್ಳಿಯ ಆಕಾಶ್(26) ಮತ್ತು ಬಂಟ್ವಾಳದ ಅಫ್ಜಲ್(26) ಎಂದು ಗುರುತಿಸಲಾಗಿದೆ.ಆಕಾಶ್ ಕೆ.ಪಿ.ಅಗ್ರಹಾರದಲ್ಲಿ ವಾಸವಾಗಿದ್ದುಕೊಂಡು ಗ್ರೈಂಡರ್ ರಿಪೇರಿ ಕೆಲಸ ಮಾಡುತ್ತಿದ್ದನು. ಅಫ್ಜಲ್ ವಿಜಯನಗರದಲ್ಲಿ ವಾಸವಾಗಿದ್ದುಕೊಂಡು ಫುಟ್ಪಾತ್ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದನು.
ಅಪಘಾತದಲ್ಲಿ ಮಣಿ ಹಾಗೂ ಕಾಸೀಂ ಎಂಬುವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಂದು ಬೆಳಗಿನ ಜಾವ 1.30ರ ಸುಮಾರಿನಲ್ಲಿ ಮಣಿ ಹಾಗೂ ಸ್ನೇಹಿತ ಆಕಾಶ್ ಇಬ್ಬರೂ ಬೈಕ್ನಲ್ಲಿ ಹೋಗುತ್ತಿದ್ದಾಗ ಬಿಜಿಎಪ್ ಫ್ಲೈ ಓವರ್ ಮೇಲ್ಭಾಗದ ಗಣೇಶ ದೇವಸ್ಥಾನದ ಬಳಿ ಅತೀ ವೇಗದಿಂದಾಗಿ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳಲ್ಲಿದ್ದ ನಾಲ್ವರು ಸವಾರರು ನೆಲಕ್ಕುರುಳಿದ್ದಾರೆ.
ಆಕಾಶ್ಗೆ ಮುಖ ಹಾಗೂ ತಲೆಗೆ ಗಂಭೀರ ಪೆಟ್ಟಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸವಾರ ಕಾಸಿಂ ಸಹ ಗಂಭೀರ ಗಾಯಗೊಂಡಿದ್ದರು. ತಕ್ಷಣ ಗೊರಗುಂಟೆಪಾಳ್ಯದ ಪೀಪಲ್ ಟ್ರೀ ಆಸ್ಪತ್ರೆಗೆ ಕರೆದ್ಯೊಯ್ದಾಗ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಗಾಯಗೊಂಡಿರುವ ಇಬ್ಬರ ಪೈಕಿ ಕಾಸಿಂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಗ್ಗೆ ಸಿಟಿ ಮಾರ್ಕೆಟ್ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.