ಅಹಮದಾಬಾದ್, ಜೂನ್.15-ಏರ್ ಇಂಡಿಯಾ ವಿಮಾನ ಅಪಘಾತದ ತನಿಖೆ ತೀವ್ರಗೊಂಡಂತೆ, ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಮೃತದೇಹಗಳನ್ನು ಡಿಎನ್ಎ ಪರೀಕ್ಷೆಯ ಮೂಲಕ ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಅಪಘಾತ ತನಿಖಾ ಮಂಡಳಿಯ (ಎಎಐಬಿ) ನೇತೃತ್ವದ ವಿವಿಧ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳು ಮೂರು ದಶಕಗಳಲ್ಲಿ ದೇಶದ ಅತ್ಯಂತ ಭೀಕರ ವಾಯು ದುರಂತದ ಕಾರಣಗಳ ತನಿಖೆ ನಡೆಸುತ್ತಿದೆ.
ಪ್ರಸುತ್ತ 32 ಶವ ಗುರುತಿಸಲಾಗಿದೆ ಮತ್ತು 14 ಜನರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಹೆಚ್ಚುವರಿ ನಾಗರಿಕ ಸೂಪರಿಂಟೆಂಡೆಂಟ್ ಡಾ. ರಜನೀಶ್ ಪಟೇಲ್ ತಿಳಿಸಿದರು,
ದುರಂತದ ಮೂರು ದಿನಗಳ ನಂತರ ಡಿಎನ್ಎ ಪರೀಕ್ಷೆಗಳ ಮೂಲಕ ಮೃತರನ್ನು ಗುರುತಿಸುವ ಪ್ರಕ್ರಿಯೆಯು ವೇಗಗೊಂಡಿದೆ. ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಡಿಎನ್ಎ ಮಾದರಿ ಇಂದು ಬೆಳಿಗ್ಗೆ 11.10 ಕ್ಕೆ (ಅವರ ಕುಟುಂಬ ಸದಸ್ಯರ ಡಿಎನ್ಎ ಮಾದರಿಯೊಂದಿಗೆ) ಹೊಂದಿಕೆಯಾಯಿತು ಎಂದು ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಗಾಂಧಿನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ರೂಪಾನಿ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಡಿಎನ್ಎ ಹೊಂದಾಣಿಕೆಯ ಬಗ್ಗೆ ಮಾಹಿತಿ ನೀಡಿದರು ಎಂದು ರಾಜ್ಯ ಆರೋಗ್ಯ ಸಚಿವ ರುಷಿಕೇಶ್ ಪಟೇಲ್ ಹೇಳಿದರು.
ಇದುವರೆಗೆ ಮೂವತ್ತೆರಡು ಡಿಎನ್ಎ ಮಾದರಿಗಳು ಹೊಂದಿಕೆಯಾಗಿವೆ ಮತ್ತು 14 ಶವಗಳನ್ನು ಈಗಾಗಲೇ ಆಯಾ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಈ ಮೃತರು ಉದಯಪುರ, ವಡೋದರಾ, ಖೇಡಾ, ಮೆಹ್ಸಾನಾ, ಅಹಮದಾಬಾದ್ ಮತ್ತು ಬೋಟಾಡ್ ಜಿಲ್ಲೆಗಳವರು ಎಂದು ಸರ್ಕಾರಿ ಸ್ವಾಮ್ಯದ ಬಿಜೆ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸಾ ಪ್ರಾಧ್ಯಾಪಕ ರಜನೀಶ್ ಪಟೇಲ್ ಹೇಳಿದ್ದಾರೆ.