ವಿಶ್ವಸಂಸ್ಥೆ,ಜೂ.1- ಪಾಕಿಸ್ತಾನದಿಂದ ನಿರಂತರ ಗಡಿಯಾಚೆಗಿನ ಭಯೋತ್ಪಾದನೆಯು, ಒಪ್ಪಂದದ ಅನುಷ್ಠಾನಕ್ಕೆ ಅಡ್ಡಿಯಾಗುತ್ತಿರುವುದರಿಂದ ಒಪ್ಪಂದದ ಉಲ್ಲಂಘನೆಗೆ ಭಾರತವನ್ನು ದೂಷಿಸುವುದನ್ನು ಇಸ್ಲಾಮಾಬಾದ್ ನಿಲ್ಲಿಸಬೇಕು ಎಂದು ಭಾರತ ತಿರುಗೇಟು ನೀಡಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಜಾಗತಿಕ ವೇದಿಕೆಯಲ್ಲಿ ಭಾರತ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿರುವುದನ್ನು ಟೀಕಿಸಿದ ಬೆನ್ನಲ್ಲೇ, ಇದಕ್ಕೆ ತಿರುಗೇಟು ನೀಡಿದ್ದು, ಇದನ್ನು ಅನಗತ್ಯ ಉಲ್ಲೇಖ ಎಂದು ಹೇಳಿದೆ.
ಹಿಮನದಿಗಳ ಕುರಿತ ವಿಶ್ವಸಂಸ್ಥೆಯ ಸಮೇಳನದ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಕೀರ್ತಿ ವರ್ಧನ್ಸಿಂಗ್, ಪಾಕಿಸ್ತಾನವೇ ಭಯೋತ್ಪಾದನೆಯ ಮೂಲಕ ಒಪ್ಪಂದವನ್ನು ಉಲ್ಲಂಘಿಸುತ್ತಿದೆ. ಪಾಕಿಸ್ತಾನವು ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಮತ್ತು ವೇದಿಕೆಯ ವ್ಯಾಪ್ತಿಗೆ ಬರದ ವಿಷಯಗಳ ಬಗ್ಗೆ ಅನಗತ್ಯ ಉಲ್ಲೇಖಗಳನ್ನು ತರುವ ಪ್ರಯತ್ನ ನಾವು ನೋಡಿದ್ದೇವೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶೀರದ ಪಹಲ್ಗಾಮ್ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು 26 ನಾಗರಿಕರನ್ನು ಕೊಂದ ನಂತರ ಭಾರತ ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ರಾಜತಾಂತ್ರಿಕ ಕ್ರಮಗಳ ಸರಣಿಯಲ್ಲಿ 1960ರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಲಾಗಿದೆ. ಭಾರತದ ವಿರುದ್ಧದ ಪ್ರಾಕ್ಸಿ ಯುದ್ಧದ ಭಾಗವಾಗಿ ಇಸ್ಲಾಮಾಬಾದ್ ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಮತ್ತು ಸುಗಮಗೊಳಿಸುತ್ತಿದೆ ಎಂದು ನವದೆಹಲಿ ನಿರಂತರವಾಗಿ ಆರೋಪಿಸಿದೆ.
ಹಿಮನದಿಗಳ ಸಂರಕ್ಷಣೆ ಕುರಿತ ಅಂತರರಾಷ್ಟ್ರೀಯ ಸಮೇಳನದಲ್ಲಿ ಮಾತನಾಡಿದ್ದ ಶೆಹಬಾಜ್ ಷರೀಫ್ , ನೀರಿನ ಆಯುಧೀಕರಣ ಮತ್ತು ಸಿಂಧೂ ಜಲಾನಯನ ಪ್ರದೇಶದ ನೀರಿನ ಹಂಚಿಕೆಯನ್ನು ನಿಯಂತ್ರಿಸುವ ಸಿಂಧೂ ಜಲ ಒಪ್ಪಂದವನ್ನು ತಡೆಹಿಡಿಯುವ ಭಾರತದ ಏಕಪಕ್ಷೀಯ ಮತ್ತು ಕಾನೂನುಬಾಹಿರ ನಿರ್ಧಾರವು ತೀವ್ರ ವಿಷಾದಕರ ಎಂದು ದೂರಿದ್ದರು.ರಾಜಕೀಯ ಲಾಭಕ್ಕಾಗಿ ಲಕ್ಷಾಂತರ ಜೀವಗಳನ್ನು ಒತ್ತೆಯಾಳುಗಳಾಗಿ ಇಡಬಾರದು ಮತ್ತು ಪಾಕಿಸ್ತಾನ ಇದಕ್ಕೆ ಅವಕಾಶ ನೀಡುವುದಿಲ್ಲ. ನಾವು ಎಂದಿಗೂ ಕೆಂಪು ರೇಖೆಯನ್ನು ದಾಟಲು ಬಿಡುವುದಿಲ್ಲ ಎಂದು ಅವರು ಹೇಳಿದ್ದರು.
ಹೇಳಿಕೆಗಳಿಗೆ ಕೇಂದ್ರ ಸಚಿವರು ಆಕ್ಷೇಪ ವ್ಯಕ್ತಪಡಿಸಿ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ಪರಿಸ್ಥಿತಿಯಲ್ಲಿ ಮೂಲಭೂತ ಬದಲಾವಣೆಗಳಾಗಿವೆ ಎಂಬುದು ನಿರಾಕರಿಸಲಾಗದ ಸತ್ಯ ಎಂದು ಹೇಳಿದ್ದರು. ಒಪ್ಪಂದದ ಬಾಧ್ಯತೆಗಳ ಮರುಮೌಲ್ಯಮಾಪನದ ಅಗತ್ಯವಿದೆ. ಈ ಬದಲಾವಣೆಗಳಲ್ಲಿ ತಾಂತ್ರಿಕ ಪ್ರಗತಿಗಳು, ಜನಸಂಖ್ಯಾ ಬದಲಾವಣೆಗಳು, ಹವಾಮಾನ ಬದಲಾವಣೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯ ನಿರಂತರ ಬೆದರಿಕೆ ಸೇರಿವೆ ಎಂದು ಅವರು ಹೇಳಿದರು.
ಆದಾಗ್ಯೂ ಪಾಕಿಸ್ತಾನದ ನಿರಂತರ ಗಡಿಯಾಚೆಗಿನ ಭಯೋತ್ಪಾದನೆಯು ಒಪ್ಪಂದದ ನಿಬಂಧನೆಗಳ ಪ್ರಕಾರ ಅದನ್ನು ಬಳಸಿಕೊಳ್ಳುವ ಸಾಮಥ್ರ್ಯಕ್ಕೆ ಅಡ್ಡಿಪಡಿಸುತ್ತದೆ. ಒಪ್ಪಂದವನ್ನು ಉಲ್ಲಂಘಿಸುತ್ತಿರುವ ಪಾಕಿಸ್ತಾನವು ಒಪ್ಪಂದದ ಉಲ್ಲಂಘನೆಯ ಹೊಣೆಯನ್ನು ಭಾರತದ ಮೇಲೆ ಹೊರಿಸುವುದನ್ನು ನಿಲ್ಲಿಸಬೇಕು ಎಂದರು.
ಒಪ್ಪಂದದ ಪೀಠಿಕೆಯಲ್ಲಿ ಇದನ್ನು ಸದ್ಭಾವನೆ ಮತ್ತು ಸ್ನೇಹದ ಮನೋಭಾವದಿಂದ ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದ್ದು, ಒಪ್ಪಂದವನ್ನು ಉತ್ತಮ ನಂಬಿಕೆಯಿಂದ ಗೌರವಿಸುವುದು ಅತ್ಯಗತ್ಯ ಎಂದು ವರ್ಧನ್ ಸಿಂಗ್ ಹೇಳಿದರು.