ಬೆಂಗಳೂರು, ಜೂ. 4- ಐಪಿಎಲ್ ಟೂರ್ನಿಯ ಆರಂಭಿಕ ದಿನಗಳಿಂದಲೂ ಟೀಕೆಗಳನ್ನೇ ಎದುರಿಸಿದ್ದ ದಿಗ್ಗಜ ಆಟಗಾರ ಕೊನೆಗೂ ಟ್ರೋಫಿಯನ್ನು ಗೆದ್ದು ಸಂಭ್ರಮಿಸಿ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಕಿಂಗ್ ಕೊಹ್ಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
2008ರಿಂದಲೂ ಆರ್ಸಿಬಿ ತಂಡಕ್ಕೆ ನಿಷ್ಠೆಯಾಗಿದ್ದರೂ ಕೂಡ 36 ವರ್ಷದ ಆಟಗಾರ ಹಾಗೂ ನಾಯಕತ್ವವನ್ನು ಟೀಕಿಸಿದ್ದ ಕ್ರಿಕೆಟ್ ಪಂಡಿತರಿಗೆ ರಾಜೀವ್ ಶುಕ್ಲಾ ಅವರು ತಿರುಗೇಟು ನೀಡಿದ್ದಾರೆ.`ಹದಿನೆಂಟು ವರ್ಷಗಳಿಂದ ವಿರಾಟ್ ಕೊಹ್ಲಿ ಅವರು ಐಪಿಎಲ್ ಟೂರ್ನಿಯಲ್ಲಿ ಏಕೈಕ ತಂಡಕ್ಕೆ ಆಡಿರುವ ಏಕೈಕ ಆಟಗಾರರಾಗಿ ಸ್ಥಿರ ಪ್ರದರ್ಶನ ನೀಡಿದ್ದಾರೆ.ಆತ ಹಲವು ಸಲ ಆರ್ ಸಿಬಿ ತಂಡಕ್ಕೆ ಚಾಂಪಿಯನ್ ಪಟ್ಟ ದಕ್ಕಿಸಿಕೊಡಲು ಸಾಕಷ್ಟು ಪ್ರಯತ್ನಿಸಿದ್ದಾನೆ.
ಆದರೆ ಟ್ರೋಫಿ ಗೆಲ್ಲುವುದು ಸಾಧ್ಯವಾಗಿರಲಿಲ್ಲ. ವಿರಾಟ್ ಕೊಹ್ಲಿ ಒಬ್ಬ ಸಮರ್ಥ ನಾಯಕನಲ್ಲ ಎಂದು ಕ್ರಿಕೆಟ್ ಪಂಡಿತರಲ್ಲದೆ, ಜನರು ಕೂಡ ಟೀಕಿಸಿದ್ದರು. ಆದರೆ ಇಂದು ಅವರು ತಂಡಕ್ಕೆ ಕೊನೆಗೂ ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟು ತಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ’ ಎಂದು ಶುಕ್ಲಾ ಹೇಳಿದ್ದಾರೆ.