ಬೆಂಗಳೂರು, ಜೂ.10- ಕಾಂತರಾಜು ಆಯೋಗ ವರದಿ ತಿರಸ್ಕಾರ ಮಾಡಿ, ಎಲ್ಲ ವರ್ಗದ ಜನರಿಗೆ ನ್ಯಾಯ ಕೊಡಿಸಬೇಕು ಎಂದು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಆಗ್ರಹಿಸಿದೆ. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಡಾ. ಗಾ.ನಂ.ಶ್ರೀಕಂಠಯ್ಯ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ಕಾರ್ಯದರ್ಶಿ ಎಂ.ಎ.ಆನಂದ್, ಸಂಘದ ಪ್ರಧಾನ ಕಾರ್ಯದರ್ಶಿ ಅಡಿಟರ್ ನಾಗರಾಜ್ ಯಲಚವಾಡಿ, ಕಡಬಗೆರೆ ಒಕ್ಕಲಿಗರ ಕ್ರೀಯಾ ಸಮಿತಿ ಅಧ್ಯಕ್ಷ ಕೆ.ಸಿ.ಶಿವರಾಮು, ಒಕ್ಕಲಿಗ ಸಮಾಜದ ಮುಖಂಡರಾದ ರಂಗನರಸಿಂಹಯ್ಯ, ಮೇಲುಕೋಟೆ ಶಿವರಾಜು ಮತ್ತಿತರರು ಮಾತನಾಡಿದರು.
ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಮೀಸಲಾತಿಯನ್ನು ಶೇ.50ಕ್ಕೆ ಮಿತಿಗೊಳಿಸಲು ಆದೇಶಿಸಿರುವುದರಿಂದ ಕಾಂತರಾಜು ಹಾಗೂ ಜೆ.ಪಿ.ಹೆಗಡೆ ಆಯೋಗಗಳ ಮೀಸಲಾತಿ ವರದಿಯನ್ನು ಸರ್ಕಾರ ಅನುಷ್ಠಾನಗೊಳಿಸಬಾರದು ಎಂದು ಮುಖಂಡರುಗಳು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಆಡಳಿತ ಮಂಡಳಿಯು ತನ್ನ ಆದೇಶದಲ್ಲಿ ಕರ್ನಾಟಕ ಸರ್ಕಾರವು ನೇಮಕಾತಿಯಲ್ಲಿ ಶೇ.56 ಮೀಸಲಾತಿ ನೀಡಿರುವುದನ್ನು 9 ಜಡ್ಜ್ ಗಳ ಬೆಂಚ್ ಮೀಸಲಾತಿಯನ್ನು ಶೇ.50ಕ್ಕೆ ಮಿತಿಗೊಳಿಸಲು ಆದೇಶಿಸಿದೆ.ಆದ್ದರಿಂದ ಕರ್ನಾಟಕ ರಾಜ್ಯದಲ್ಲಿ ಮೀಸಲಾತಿಯನ್ನು ಶೇ.50ಕ್ಕೆ ಮಿತಿಗೊಳಿಸುವುದು ಕಡ್ಡಾಯವಾಗಿದೆ.
ಶೇ.75 ರಷ್ಟು ಮೀಸಲಾತಿ ನೀಡಲು ಶಿಫಾರಸು ಮಾಡಿದ್ದ ಕಾಂತರಾಜು ಮತ್ತು ಹೆಗಡೆ ವರದಿ ನೀಡಿದ್ದವು. ಈಗಾಗಲೇ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಮೀಸಲಾತಿಯನ್ನು ಶೇ. 50ಕ್ಕೆ ಮಿತಿಗೊಳಿಸಲು ಆದೇಶಿಸಿರುವುದರಿಂದ ಮೀಸಲಾತಿ ವರದಿಯನ್ನು ಅನುಷ್ಟಾನಗೊಳಿಸಲು ಸಾಧ್ಯವಿಲ್ಲ.
ಇಬ್ಬರ ವರದಿಯನ್ನು ಸರ್ಕಾರವು ತಿರಸ್ಕರಿಸಲು ನಾವು ಒತ್ತಾಯಿಸುತ್ತೇವೆ. ಬಹುತೇಕ ಎಲ್ಲಾ ವರ್ಗಗದ ಜನಾಂಗಗಳು ಕಾಂತರಾಜು ಆಯೋಗದ ವರದಿಯಲ್ಲಿ ತಪ್ಪುಗಳಿವೆ ಎಂದು ತಿಳಿಸಿವೆ. ಆದುದ್ದರಿಂದ ಸಂಶಯಾಸ್ಪದವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಸಿದ್ಧಪಡಿಸಿರುವುದನ್ನು ಕೈಬಿಟ್ಟು ಮತ್ತೊಮ್ಮೆ ವಿಶ್ವಾಸಯುತ ಸಮೀಕ್ಷೆ ನಡೆಸಲು ಸರ್ಕಾರವನ್ನು ಸಮಿತಿ ಒತ್ತಾಯಿಸಿದೆ.
ಕಾಂತರಾಜು, ಜೆ.ಪಿ. ಹೆಗಡೆ ಮಾಡಿರುವ ಸಮೀಕ್ಷೆಯು 2014-15 ರಲ್ಲಿ ನಡೆದಿದ್ದು. ಈಗಾಗಲೇ 10 ವರ್ಷ ಪೂರ್ಣಗೊಂಡಿದೆ. ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದದಂತೆ ಪ್ರತಿ 10 ವರ್ಷಕ್ಕೊಮ್ಮೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ ಅದರ ಆಧಾರದ ಮೇಲೆ ಮೀಸಲಾತಿ ನೀಡಬೇಕಾಗಿರುತ್ತದೆ. ಆದರೆ ಈಗಿನ ಕರ್ನಾಟಕ ಸರ್ಕಾರವು ಕಾನೂನಿಗೆ ಯಾವುದೇ ಮಾನ್ಯತೆ ಕೊಡದೆ ಕಾಂತರಾಜು ಮತ್ತು ಜೆ.ಪಿ.ಹೆಗಡೆ ವರದಿಯನ್ನು ಅನುಷ್ಟಾನಗೊಳಿಸಲು ಹೊರಟಿರುವುದು ವಿಪರ್ಯಾಸವೇ ಸರಿ. ಸರ್ಕಾರವೇ ಕಾನೂನನ್ನು ಪಾಲಿಸದಿದ್ದಲ್ಲಿ ಇನ್ಯಾರು ಕಾನೂನನ್ನು ಪಾಲಿಸಬೇಕು. ಈಗ ಬಿಡುಗಡೆ ಮಾಡಿರುವ ಸಮೀಕ್ಷೆಯ ವರದಿಯು ಸಮಾಜದ ನಾಗರಿಕರ ವಿಶ್ವಾಸ ಕಳೆದುಕೊಂಡಿದೆ.
ಕರ್ನಾಟಕ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲು 2014ರಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಿತ್ತು. ಅದರಂತೆ ಕಾಂತರಾಜು ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಸದರಿ ಆಯೋಗವು 2014-15 ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿದ್ದು. ಸವೀಕ್ಷೆ ಕೈಗೊಳ್ಳುವಾಗ ರಾಜ್ಯದ ಎಲ್ಲಾ ನಾಗರೀಕರ ಮಾಹಿತಿಯನ್ನು ಸಂಗ್ರಹಿಸಿರುವುದಿಲ್ಲವೆಂದು ಸಮಾಜದ ಸಂಘದ ಕಚೇರಿಗೆ ಮಾಹಿತಿ ನೀಡಿರುತ್ತಾರೆ. ಈ ರೀತಿ ಮಾಡಿದ ಸಮೀಕ್ಷೆಯನ್ನು ಸದರಿ ಆಯೋಗವು ಸಕಾಲದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ವಿಫಲವಾಯಿತು.
2014-2015 ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.90 ರಷ್ಟು ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ನಡೆಸಿದ್ದು. ಪೂರ್ಣ ಪ್ರಮಾಣದ ಕಾರ್ಯ ಮಾಡಿರುವುದಿಲ್ಲ. ಹಿಂದಿನ 10 ವರ್ಷಗಳಲ್ಲಿ ರಾಜ್ಯದಲ್ಲಿ ಜನಸಂಖ್ಯೆ ಗಣನೀಯ ಏರಿಕೆ ಕಂಡಿದೆ ಹಾಗೂ ಇತರೆ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯಲ್ಲಿ ಬಹಳಷ್ಟು ಬದಲಾವಣೆ ಆಗಿದೆ.
ಈ ಹಿನ್ನಲೆಯಲ್ಲಿ 10 ವರ್ಷಗಳ ಹಿಂದಿನ ವರದಿ ಸ್ವೀಕರಿಸಿ ಮಾಡುವ ತೀರ್ಮಾನಗಳು ವಾಸ್ತವತೆಗೆ ದೂರವಿದ್ದು ಅಪ್ರಸ್ತುತವಾಗುತ್ತವೆ. ಮುಂದುವರೆದು ಸಮೀಕ್ಷೆಯಲ್ಲಿ ನಿಖರತೆ ಕಾಪಾಡಲು ಸಮೀಕ್ಷೆ ವೇಳೆಕಾಂತರಾಜು ಸಮೀಕ್ಷೆಯಲ್ಲಿ ಕೈಗೊಂಡಿರುವ ಎಲ್ಲಾ ಮಾಹಿತಿಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿ ಎಲ್ಲಾ ಸಂಘಟನೆಗಳಿಂದ ಬರುವ ಅಹವಾಲುಗಳನ್ನು ಸ್ವೀಕರಿಸಿ ಸರಿಪಡಿಸುವುದು ಸೂಕ್ತವಾಗಿದೆ.
ಕಳೆದ 30 ವರ್ಷಗಳಿಂದ ವಿವಿಧ ಜನಾಂಗಗಳು ಮೀಸಲಾತಿಯಿಂದ ವಿದ್ಯಾಭ್ಯಾಸ, ನೌಕರಿ ಮತ್ತು ಇತರೆ ಸೌಲಭ್ಯಪಡೆದಿರುವ ವಿವರಗಳು ಮತ್ತು ಅದರಿಂದ ಆಗಿರುವ ಪರಿಣಾಮಗಳನ್ನು ಪ್ರಕಟಿಸುವುದು ಸೂಕ್ತ ಎಂದು ಅವರು ಆಗ್ರಹಿಸಿದ್ದಾರೆ.