–ರಮೇಶ್ ಎಂ.ಪಾಳ್ಯ
ಬೆಂಗಳೂರು, ಮೇ 29- ಮಳೆ ಬಂದು ತಮ ಮನೆಗಳು ನೀರಿನಲ್ಲಿ ಮುಳುಗಿ ಹೋದರೆ ಏನಪ್ಪಾ ಮಾಡೋದು ಅಂತಾ ಚಿಂತೆ ಕಾಡುತ್ತಿದೆಯೇ? ಇನ್ನು ಮುಂದೆ ಅಂತಹ ಚಿಂತೆನೆ ಮಾಡಬೇಡಿ ಯಾಕೆಂದರೆ ನಿಮನ್ನು ನೀರಿನಿಂದ ಸುರಕ್ಷಿತವಾಗಿ ಹೊರ ತರಲು ಬರಲಿವೆ ಬಿಬಿಎಂಪಿ ಬೋಟ್ಗಳು.
ಹೌದು.. ನಗರದಲ್ಲಿ ಮಳೆಗಾಲದಲ್ಲಿ ಸಾಮಾನ್ಯವಾಗಿರುವ ಅನಾಹುತಗಳ ಸಂದರ್ಭದಲ್ಲಿ ಬಳಸಲು ಅನುಕೂಲವಾಗುವಂತಹ ವಾಟರ್ ಬೋಟರ್ಗಳನ್ನು ಖರೀದಿಸಲು ಬಿಬಿಎಂಪಿ ತೀರ್ಮಾನಿಸಿದೆ.
ಕಳೆದ ವಾರ ಬಿದ್ದ ಮಳೆರಾಯನ ಅರ್ಭಟಕ್ಕೆ ನಗರದ ಬಹುತೇಕ ರಸ್ತೆಗಳು ನದಿಗಳಂತಾಗಿದ್ದವು. ಜನ ಮನೆಯಿಂದ ಹೊರ ಬರಲಾಗದೆ ಎರಡು ದಿನ ಮನೆಯಲ್ಲೇ ಕಾಲಕಳೆಯುವಂತಹ ಸನ್ನಿವೇಶ ನಿರ್ಮಾಣವಾಗಿತ್ತು.
ಅದರಲ್ಲೂ ಮೂರು ದಿನಗಳ ಕಾಲ ನೀರಿನಲ್ಲೇ ಮುಳುಗಿ ಹೋಗಿದ್ದ ಸಾಯಿ ಲೇಔಟ್ನಲ್ಲಿ ಸಿಲುಕಿಕೊಂಡಿದ್ದ ಸಾರ್ವಜನಿಕರನ್ನು ಹೊರ ತರಲು ಬೋಟ್ ಬಳಸುವ ಸನ್ನಿವೇಶ ನಿರ್ಮಾಣವಾಗಿತ್ತು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಮಳೆ ಅನಾಹುತದಂತಹ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಬೋಟ್ಗಳ ಖರೀದಿಗೆ ಟೆಂಡರ್ ಕರೆಯಲು ನಿರ್ಧರಿಸಿದೆ.
ಬಿಬಿಎಂಪಿ ಎಂಟು ವಲಯಗಳಲ್ಲೂ ತಲಾ ಒಂದೊಂದು ಬೋಟ್ ಖರೀದಿ ಗೆ ಟೆಂಡರ್ ಕರೆಯಲಾಗಿದೆ. ಆರಂಭದಲ್ಲಿ ಒಟ್ಟು 7 ಬೋಟ್ಗಳ ಜೊತೆಗೆ ಲೈಫ್ಜಾಕೆಟ್ಗಳನ್ನು ಕೂಡ ಖರೀದಿಸಲಾಗುತ್ತಿದೆ.
ಈ ಹಿಂದೆ ಮಳೆ ಅನಾಹುತಗಳು ಸಂಭವಿಸಿದಾಗ ಹಾಗೂ ಉಕ್ಕಿ ಹರಿದ ಕಾಲುವೆಯಲ್ಲಿ ಮಗುವೊಂದು ಕೊಚ್ಚಿ ಹೋಗಿದಂತಹ ಸಂದರ್ಭದಲ್ಲಿ ವಾಟರ್ ಬೋಟರ್ಗಳನ್ನು ಬಾಡಿಗೆಗೆ ತಂದು ಶೋಧ ನಡೆಸಲಾಗಿತ್ತು. ಇದೀಗ ಮತ್ತೆ ಸಾಯಿ ಲೇಔಟ್ನಲ್ಲಿ ಬೋಟ್ ಬಳಕೆ ಮಾಡುವ ಅನಿವಾರ್ಯತೆ ಎದುರಾಗಿರುವ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಬೋಟ್ ಬಳಕೆ ಅನಿವಾರ್ಯವಾದರೆ ಇರಲಿ ಎಂದು ಬಿಬಿಎಂಪಿ ಬೋಟ್ ಖರೀದಿಗೆ ಮುಂದಾಗಿದೆ ಎಂದು ತಿಳಿದುಬಂದಿದೆ.
ನಗರದಲ್ಲಿ ಹಾಳಾಗಿರುವ ರಸ್ತೆಗುಂಡಿಗಳನ್ನು ದುರಸ್ತಿಪಡಿಸಿ ಮಳೆ ಅನಾಹುತ ತಪ್ಪಿಸಲು ಶಾಶ್ವತ ಕ್ರಮಗಳನ್ನು ಕೈಗೊಳ್ಳುವ ಬದಲು ಜನರ ಜೀವ ರಕ್ಷಣೆಗಾಗಿ ಬೋಟ್ ಖರೀದಿಗೆ ಮುಂದಾಗಿರುವ ಬಿಬಿಎಂಪಿ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಬೋಟ್ ಖರೀದಿ ಮಾಡಿ ನಾವೇನೂ ಬೇಡ ಅನ್ನೋಲ್ಲ. ಆದರೆ, ಅದಕ್ಕೂ ಮುನ್ನ ಮಳೆ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಪ್ರಜ್ಞಾವಂತರು ಬಿಬಿಎಂಪಿಗೆ ಸಲಹೆ ನೀಡಿದ್ದಾರೆ. ಗ್ರೇಟರ್ ಬೆಂಗಳೂರು ಮಾಡುತ್ತೇವೆ ಎಂದು ಹೊರಟಿರುವ ಈ ಸರ್ಕಾರ ಬೋಟ್ ಖರೀದಿ ಮಾಡುವ ಮೂಲಕ ವಾಟರ್ ಬೆಂಗಳೂರು ಮಾಡಲು ಮುಂದಾಗಿದೆಯೇ ಎಂದು ಜನ ಕುಹಕವಾಡುತ್ತಿದ್ದಾರೆ.