Friday, September 20, 2024
Homeರಾಜ್ಯಒಟ್ಟು 231 ಸಾಕ್ಷಿದಾರರನ್ನೊಳಗೊಂಡ ವಾಟರ್ ಟೈಟ್ ಚಾರ್ಜ್ ಶೀಟ್ : ದಯಾನಂದ

ಒಟ್ಟು 231 ಸಾಕ್ಷಿದಾರರನ್ನೊಳಗೊಂಡ ವಾಟರ್ ಟೈಟ್ ಚಾರ್ಜ್ ಶೀಟ್ : ದಯಾನಂದ

Water tight charge sheet with total 231 witnesses : Dayananda

ಬೆಂಗಳೂರು, ಸೆ.4– ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಸಂಪೂರ್ಣ ಮುಗಿದಿದ್ದು, ಇಂದು ನ್ಯಾಯಾಲಯಕ್ಕೆ ವಾಟರ್ ಟೈಟ್ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆದಿದೆ. ಸಾಕಷ್ಟು ತಾಂತ್ರಿಕ ಸಾಕ್ಷ್ಯಗಳು ದೊರೆತಿದ್ದು, ಅದನ್ನು ತನಿಖೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ವೈದ್ಯರು, ಎಂಜಿನಿಯರ್, ಆರ್ಟಿಓಗಳು, ತಹಸೀಲ್ದಾರರು ಹಾಗೂ 56 ಪೊಲೀಸರನ್ನು ಸಾಕ್ಷಿಯನ್ನಾಗಿ ಮಾಡಲಾಗಿದೆ. ಒಟ್ಟು 231 ಒಟ್ಟು ಸಾಕ್ಷಿದಾರರನ್ನು ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಪ್ರಕರಣ ಸಂಬಂಧ ಈಗಾಗಲೇ 17 ಮಂದಿಯನ್ನು ಬಂಧಿಸಲಾಗಿದೆ. ಬೆಂಗಳೂರಿನ ಎಫ್ಎಸ್ಎಲ್ನಿಂದ ಎಲ್ಲಾ ವರದಿಗಳು ಬಂದಿವೆ. ತಾಂತ್ರಿಕ ವಿಶ್ಲೇಷಣೆಗಾಗಿ ಕೆಲವು ಎಲೆಕ್ಟ್ರಾನಿಕ್ ಸಲಕರಣೆಗಳನ್ನು ಹೈದರಾಬಾದ್ನ ಸಿಎಫ್ಎಸ್ಎಲ್ ಕಳುಹಿಸಲಾಗಿತ್ತು. ಅಲ್ಲಿನ ವರದಿ ಭಾಗಶಃ ಬಂದಿದ್ದು, ಸಂಪೂರ್ಣ ಬಂದಿರಲಿಲ್ಲ, ಲಭ್ಯ ಇರುವ ಮಾಹಿತಿ ಆಧರಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ನ್ಯಾಯಾಲಯದಲ್ಲಿ ಈ ಪ್ರಕರಣದ ಬಗ್ಗೆ ಸರ್ಕಾರದ ಪರವಾಗಿ ವಾದಿಸಲು ವಿಶೇಷ ಅಭಿಯೋಜಕರನ್ನು ನೇಮಿಸಲಾಗಿದೆ. ಅವರ ಅಣತಿಯಂತೆ ದೋಷಾರೋಪಣ ಪಟ್ಟಿ ಸಿದ್ಧಪಡಿಸಲಾಗಿದೆ. ಸಾಮಾಜಿಕ ಜಾಲತಾಣದಿಂದಲೂ ಸಾಕಷ್ಟು ತಾಂತ್ರಿಕ ಸಾಕ್ಷ್ಯಗಳು ಲಭ್ಯವಾಗಿದ್ದು, ಅವನ್ನು ತನಿಖೆಯಲ್ಲಿ ಬಳಸಿಕೊಳ್ಳಲಾಗಿದೆ.

ತನಿಖೆ ಉತ್ತಮವಾಗಿ ನಡೆದಿದೆ, ಎಲ್ಲ ರೀತಿಯ ಸಾಕ್ಷ್ಯ ಆಧಾರಗಳನ್ನು ಬಳಸಿಕೊಂಡು ಆರೋಪಿಗಳು ನುಣಚಿಕೊಳ್ಳಲು ಅವಕಾಶವೇ ಇಲ್ಲದಂತೆ ವಾಟರ್ಟೈಟ್ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಇದಾದ ಬಳಿಕ ತ್ವರಿತ ವಿಲೇವಾರಿ ಅಥವಾ ವಿಶೇಷ ನ್ಯಾಯಾಲಯದ ವಿಚಾರಣೆಗೆ ಮನವಿ ಸಲ್ಲಿಸುವ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.

ರೇಣುಕಾಸ್ವಾಮಿಯ ಅಪಹರಣ, ಹಲ್ಲೆ, ಕೊಲೆ ಹಾಗೂ ಈ ಕೇಸ್ ಮುಚ್ಚಿ ಹಾಕಲು ಹಣ ನೀಡಿದ್ದು, ಈ ಪ್ರಕರಣದಲ್ಲಿ ದರ್ಶನ್ ಪಾತ್ರದ ಇಂಚಿಂಚೂ ಮಾಹಿತಿಯನ್ನು ಸಂಗ್ರಹಿಸಿ ಚಾರ್ಜ್ಶೀಟ್ನಲ್ಲಿ ದಾಖಲಿಸಲಾಗಿದೆ ಎಂದರು.

ಪಟ್ಟಣಗೆರೆ ಶೆಡ್ನಲ್ಲಿ ದರ್ಶನ್ ಓಡಾಟದ ದೃಶ್ಯಗಳು, ತಹಸೀಲ್ದಾರ್ ಸ್ಥಳ ಮಹಜರು ಮಾಡಿರುವ ಮಾಹಿತಿಗಳು, ಶವ ಸಾಗಿಸಿರುವ ವಾಹನ, ಪಂಚನಾಮೆ ವೇಳೆಯಲ್ಲಿ ಲಭ್ಯವಾಗಿರುವ ಸಾಕ್ಷ್ಯಗಳನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

RELATED ARTICLES

Latest News