ಬೆಂಗಳೂರು, ಜೂ.2- ಕ್ಷಮೆ ಕೇಳುವವರೆಗೂ ನಟ ಕಮಲ್ ಹಾಸನ್ ಅವರ ಥಗ್ ಲೈಫ್ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ ನೀಡದಿರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ.
ಇಂದು ನಡೆದ ಮಹತ್ತರದ ಸಭೆಯಲ್ಲಿ ಪದಾಧಿಕಾರಿಗಳು ಮತ್ತು ಚಿತ್ರರಂಗದ ಗಣ್ಯ ಅಭಿಪ್ರಾಯದಂತೆ ಯಾವುದೇ ಕಾರ್ಣಕ್ಕೂ ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದೆಂಬ ಗಟ್ಟಿ ಧ್ವನಿ ಕೇಳಿ ಬಂದಿದೆ. ಈ ನಡುವೆ ವಿತರಕರ ಸಂಘದ ವೆಂಕಟೇಶ್ ಅವರ ಕೋರಿಕೆಯ ಮೇಲೆ ಕಮಲ್ಹಾಸನ್ ಅವರಿಗೆ ಕ್ಷಮೆ ಕೇಳಲು 24 ಗಂಟೆಗಳ ಕಾಲ ಗಡುವು ನೀಡುತ್ತಿದ್ದು, ಅವರು ಯಾವು ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.
ಹಲವಾರು ಕನ್ನಡಪರ ಸಂಘಟನೆಗಳು ನಟ ನಟಿಯರು, ಸಾಹಿತಿಗಳು ಕಮಲ್ ಹಾಸನ್ ಅವರ ಉದ್ಧತಟನದ ಹೇಳಿಕೆಗಳನ್ನು ಕಟುವಾಗಿ ಖಂಡಿಸಿದ್ದಾರೆ. ಇನ್ನೂ ಯಾವುದೇ ಕಾರಣಕ್ಕೂ ಕಮಲ್ ಹಾಸನ್ ಚಿತ್ರಗಳು ರಾಜ್ಯದಲ್ಲಿ ಪ್ರದರ್ಶನ ಬೇಡ. ಕೇವಲ ಚಿತ್ರಮಂದಿರಗಳಲ್ಲಿ ಅಲ್ಲದೇ ಸಾಮಾಜಿಕ ಮಾಧ್ಯಮಗಳಲ್ಲೂ ಬಹಿಷ್ಕಾರ ಹಾಕಲು ಕೆಲವರು ಒತ್ತಾಯಿಸಿದ್ದಾರೆ.
ಈಗಾಗಲೇ ನಾವು ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದೇವೆ, ಆದರೆ ಇನ್ನೂ ಅವರು ಕ್ಷಮೆ ಕೋರಿಲ್ಲ. ಕೊನೆಯದಾಗಿ 24 ಗಂಟೆ ಗಡುವು ನೀಡಿದ್ದೇವೆ. ಏಕೋ ಆತ ಕ್ಷಮೆ ಕೇಳಲ್ಲ ಅನಿಸುತ್ತಿದೆ. ಆತ ಸದ್ಯ ದುಬೈನಲ್ಲಿದ್ದು, ನಾಳೆ 12 ಗಂಟೆಯವರೆಗೆ ಸಮಯ ಕೊಡಿ ಎಂದು ಕೇಳಿ ಕೊಂಡಿದ್ದಾರೆಂದು ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಹೇಳಿದ್ದಾರೆ. ಸಾ.ರಾ.ಗೋವಿಂದು ಮಾತನಾಡಿ ಇಂದು ನಮ ಸ್ವಾಬಿಮಾನದ ಪ್ರಶ್ನೆ ಕನ್ನಡ ಭಾಷೆಯ ಬಗ್ಗೆ ಲಘುವಾಗಿ ಮಾತನಾಡುವವರ ಬಗ್ಗೆ ಎಲ್ಲರೂ ಒಗ್ಗಟ್ಟಾಗಿ ಖಂಡಿಸಬೇಕು ಮತ್ತು ಶಿಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ.
ಇದೆಲ್ಲದರ ನಡುವೆ ನಾಳೆ ಬಹುನಿರೀಕ್ಷಿತ ಚಿತ್ರ ರಾಜ್ಯದಲ್ಲಿ ಬಿಡುಗಡೆ ಅನುಮಾನವಾಗಿದೆ. ಕರ್ನಾಟಕ ದಕ್ಷಿಣ ಭಾರತದಲ್ಲಿ ಪರಭಾಷಾ ಚಿತ್ರಗಳಿಗೆ ದೊಡ್ಡ ಕೊಡುಗೆ ನೀಡುತ್ತದೆ. ಹಲವಾರು ವಿತರಕರು ಕೋಟ್ಯಾಂತರ ರೂ. ಹೂಡಿಕೆ ಮಾಡುತ್ತಾರೆ. ಪ್ರಸ್ತುತ ಕಮಲ್ಹಾಸನ್ ಅವರ ಉದ್ಧಟತನದ ಹೇಳಿಕೆ ಕೆಲವರಿಗೆ ಸಂಕಷ್ಟ ತಂದೊಡ್ಡಿದೆ. ಇನ್ನು ಕಮಲ್ಹಾಸನ್ ಬಗ್ಗೆ ಮೃದು ಧೋರಣೆ ತಳೆದಿರುವ ಕೆಲವರಿಗೆ ಮುಂದೇನು ಎಂಬ ಚಿಂತೆ ಕಾಡಿದೆ.