ಮೈಸೂರು,ಜೂ.30- ಹಾಸನ ಜಿಲ್ಲೆಯಲ್ಲಿ ಕಳೆದ 40 ದಿನಗಳಲ್ಲಿ 23ಕ್ಕೂ ಹೆಚ್ಚು ಮಂದಿ ಚಿಕ್ಕವಯಸ್ಸಿನವರು ಹೃದಯಾಘಾತದಿಂದ ಮೃತಪಟ್ಟಿರುವ ಕುರಿತು ಸಮಸ್ಯೆ ಹಾಗೂ ಪರಿಹಾರಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಇಲ್ಲಿನ ವಿಮಾನನಿಲ್ದಾಣ ದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಣಿ ಹೃದಯಾಘಾತ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೃದಯಾಘಾತಕ್ಕೆ ಕಾರಣಗಳನ್ನು ಪತ್ತೆಹಚ್ಚಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.ಸಾವಿನ ಪ್ರಕರಣಗಳನ್ನೆಲ್ಲಾ ತನಿಖೆ ಮಾಡಿಸಲು ಸಾಧ್ಯವಿಲ್ಲ. ಆದರೆ ಸಮಸ್ಯೆ ಮತ್ತು ಪರಿಹಾರದ ಕುರಿತು ಸರ್ಕಾರ ಚರ್ಚಿಸಲಿದೆ ಎಂದರು.
ದ್ವಿಭಾಷಾ ಸೂತ್ರಕ್ಕೆ ಬೆಂಬಲ :
ಮಹಾರಾಷ್ಟ್ರ ಸಕ್ರಾ ದ್ವಿಭಾಷಾ ಸೂತ್ರವನ್ನು ಜಾರಿಗೊಳಿಸಿದೆ. ನಮ ಸರ್ಕಾರ ಕೂಡ ದ್ವಿಭಾಷಾ ಸೂತ್ರದ ಪರವಾಗಿದೆ ಎಂದು ಅವರು ಹೇಳಿದರು.
ಕಾವೇರಿ ನೀರು ಸಂಪೂರ್ಣ ಬಳಕೆ :
ಕಾವೇರಿ ನ್ಯಾಯಾಧಿಕರಣ-2018ರ ತೀರ್ಪಿನ ಅನುಸಾರ ತಮಿಳುನಾಡಿಗೆ 177.25 ಟಿಎಂಸಿ ನೀರು ಬಿಡಲು ನಮ ತಕರಾರಿಲ್ಲ. ಈಗಿನ ಸಂದರ್ಭಗಳಲ್ಲಿ ಉತ್ತಮ ಮಳೆಯಾಗಿದ್ದು, ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರನ್ನು ಬಿಡಲಾಗಿದೆ ಎಂದರು.2023-24 ರಲ್ಲಿ ನೀರು ಕಡಿಮೆ ಹರಿದಿತ್ತು. ಕಳೆದ ವರ್ಷ 177.25 ಟಿಎಂಸಿ ಬದಲಾಗಿ 305 ಟಿಎಂಸಿ ಬಿಡಲಾಗಿದೆ. ಈ ತಿಂಗಳು 9 ಟಿಎಂಸಿ ಬದಲಾಗಿ 22 ಟಿಎಂಸಿ ಹರಿಸಲಾಗಿದೆ ಎಂದು ವಿವರಿಸಿದರು.
ಸಂಕಷ್ಟ ಸಂದರ್ಭದಲ್ಲಿ ತಮಿಳುನಾಡು ಕೂಡ ಸಮಸ್ಯೆಯನ್ನು ಹಂಚಿಕೊಳ್ಳಬೇಕು. ನ್ಯಾಯಾಧಿಕರಣದ ತೀರ್ಪಿನಂತೆ ನಿಗದಿತ ನೀರು ಹರಿಸಲು ನಮ ತಕರಾರಿಲ್ಲ. ಹೆಚ್ಚುವರಿ ನೀರನ್ನು ಸಂಗ್ರಹಿಸಲು ಮೇಕೆದಾಟು ಸಮತೋಲಿತ ಅಣೆಕಟ್ಟನ್ನು ನಿರ್ಮಿಸಲು ತಮಿಳುನಾಡು ಸಹಕರಿಸಬೇಕು ಎಂದರು.
ಇದೇ ವೇಳೆ ಜಲಸಂಪನೂಲ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಮಧ್ಯಪ್ರವೇಶಿಸಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಕನಕಪುರದಲ್ಲಿ ಕಚೇರಿ ಆರಂಭಿಸಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ, ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ಹಂಚಿಕೆ ಸೇರಿದಂತೆ ವಿವಿಧ ಪ್ರಕ್ರಿಯೆಗಳು ಚಾಲನೆಯಲ್ಲಿವೆ. ನ್ಯಾಯಾಲಯದ ಮೇಲೂ ನಾವು ಒತ್ತಡ ಹಾಕಿದ್ದೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಮೇಕೆದಾಟಿಗೆ ಅನುಮತಿ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. ತಮಿಳುನಾಡು ಸರ್ಕಾರ ಶೇ.14 ರಷ್ಟು ನೀರಾವರಿ ಪ್ರದೇಶವನ್ನು ವಿಸ್ತರಣೆ ಮಾಡಿಕೊಂಡಿದೆ. ಕರ್ನಾಕಟ ರಾಜ್ಯ ನ್ಯಾಯಾಧಿಕರಣದ ತೀರ್ಪಿನಲ್ಲಿ ಹಂಚಿಕೆಯಾಗಿರುವ ನೀರನ್ನು ಪೂರ್ಣಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಕ್ರಮ ಕೈಗೊಂಡಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ನಾವು ನೀರಾವರಿ ಪ್ರದೇಶವನ್ನು ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆ ಎಂದರು.
ಇದೇ ವೇಳೆ ಡಿ.ಕೆ.ಶಿವಕುಮಾರ್, ಮಂಡ್ಯ ಸೇರಿದಂತೆ ಕೆಆರ್ಎಸ್ ವ್ಯಾಪ್ತಿಯಲ್ಲಿ ನೀರಾವರಿ ವಿಸ್ತರಣೆಗೆ 1 ಸಾವಿರ ಕೋಟಿ, ವರುಣ ವ್ಯಾಪ್ತಿಗೆ 400 ಕೋಟಿ ರೂ.ಗಳ ಅನುದಾನವನ್ನು ಬಜೆಟ್ನಲ್ಲಿ ಮೀಸಲಿರಿಸಲಾಗಿದೆ. ಕೊನೆಯ ಭಾಗಕ್ಕೂ ನೀರು ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.