ಬೆಂಗಳೂರು, ಜೂ.4- ಹದಿನೇಳು ವರ್ಷಗಳ ಸತತ ಕಾಯುವಿಕೆಯ ನಂತರ ಚೊಚ್ಚಲ ಐಪಿಎಲ್ ಟೂರ್ನಿಯ ಅಧಿಪತಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಪ್ರತಿಮ ಸಾಧನೆಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಸೇರಿದಂತೆ ಹಲವು ದಿಗ್ಗಜರು ಶುಭಾಶಯ ಕೋರುವ ಮೂಲಕ ಕಿಂಗ್ ಕೊಹ್ಲಿಯ ತಾಳೆ ಹಾಗೂ ನಿಷ್ಠೆಯನ್ನು ಗುಣಗಾನ ಮಾಡಿದ್ದಾರೆ.
ಅಹಮದಾಬಾದ್ನ ಶ್ರೀ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ಮುಕ್ತಾಯಗೊಂಡ ಐಪಿಎಲ್ 18ನೇ ಸೀಸನ್ನ ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಸಾರಥ್ಯದ ಪಂಜಾಬ್ ಕಿಂಗ್್ಸ ತಂಡದ ವಿರುದ್ಧ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 6 ರನ್ ಗಳ ರೋಚಕ ಗೆಲುವು ಸಾಧಿಸಿ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದ ನಂತರ ವಿಶ್ವದೆಲ್ಲೆಡೆ ಅಭಿಮಾನಿಗಳು ಸಂಭ್ರಮಿಸಿದರೆ, ತಂಡಕ್ಕೆ ಶುಭಹಾರೈಕೆಗಳ ಸುರಿಮಳೆಯೇ ಹರಿದು ಬಂದಿದೆ.
ಕಪ್ ಗೆಲ್ಲಲು ಆರ್ಸಿಬಿ ಅರ್ಹ:
`ಐಪಿಎಲ್ ಇತಿಹಾಸದಲ್ಲಿ ಮೊದಲ ಟ್ರೋಫಿ ಗೆದ್ದಿರುವ ಆರ್ ಸಿಬಿ ತಂಡಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು. 18ನೇ ಆವೃತ್ತಿಯಲ್ಲಿ 18ನೇ ನಂಬರ್ ಜೆರ್ಸಿ ತೊಟ್ಟಿರುವ ವಿರಾಟ್ ಕೊಹ್ಲಿ ಹಾಗೂ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಲು ಅರ್ಹರಾಗಿದ್ದಾರೆ. ಪಂಜಾಬ್ ಕಿಂಗ್ಸ್ ತಂಡ ಸೋತರೂ ಉತ್ತಮ ಹೋರಾಟ ಪ್ರವೃತ್ತಿ ತೋರಿದೆ’ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಕೊಹ್ಲಿ ಖರೀದಿಸಿದ್ದು ಹೆಮ್ಮೆ ಮೂಡಿಸಿತ್ತು:
`ಐಪಿಎಲ್ ಟೂರ್ನಿಯ ಆರಂಭಿಕ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಖರೀದಿಸುವುದು ನನ್ನ ಕನಸಾಗಿತ್ತು.ಯುವ ಆಟಗಾರ ವಿರಾಟ್ ಕೊಹ್ಲಿ ಅವರನ್ನು ತಂಡದ ಭಾಗವಹಿಸಿದ್ದು ಕೂಡ ಹೆಮೆ ಮೂಡಿಸಿತ್ತು. ಆತ ಅಂದಿನಿಂದ 18 ವರ್ಷಗಳ ಕಾಲ ತಂಡಕ್ಕೆ ನಿಷ್ಠರಾಗಿ ಉಳಿದು ಟ್ರೋಫಿ ಗೆದ್ದಿರುವುದು ಇತಿಹಾಸವೇ ಸರಿ. ಅದೇ ರೀತಿ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಹಾಗೂ ಮಿಸ್ಟರ್ 360 ಖ್ಯಾತಿಯ ಎಬಿಡಿ ವಿಲಿಯರ್ಸ್ರನ್ನು ತಂಡದ ಸದಸ್ಯರಾಗಿಸಿದ್ದು ಕೂಡ ನನಗೆ ಹೆಮೆಯ ಸಂಗತಿ ಆಗಿದೆ’ ಎಂದು ಆರ್ ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ ಹೇಳಿದ್ದಾರೆ.
`ಸತತ ಕಾಯುವಿಕೆ ಹಾಗೂ ಪರಿಶ್ರಮದಿಂದ ಕೊನೆಗೂ ಬೆಂಗಳೂರು ತಂಡವು ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿ ನನ್ನ ಕನಸನ್ನು ನನಸು ಮಾಡಿದ ತಂಡದ ಆಟಗಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಆರ್ ಸಿಬಿ ಅಭಿಮಾನಿಗಳು ಕೂಡ ಈ ಬಾರಿ ಟ್ರೋಫಿಯನ್ನು ಬೆಂಗಳೂರು ತಂಡ ಗೆಲ್ಲುತ್ತದೆ ಎಂಬ ಅಪಾರ ಭರವಸೆ ಇಟ್ಟಿದ್ದರು. ಅವರ ನಂಬಿಕೆಗೆ ತಕ್ಕ ಪ್ರತಿಫಲ ಸಿಕ್ಕಿದೆ’ ಎಂದು ಮಲ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಖ್ಯಾತ ಫುಟ್ಬಾಲಿಗ, ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನಿ ಸೇರಿದಂತೆ ಹಲವು ದಿಗ್ಗಜ ಕ್ರೀಡಾಪಟುಗಳು ಕೂಡ ಆರ್ ಸಿಬಿ ತಂಡಕ್ಕೆ ಶುಭ ಹಾರೈಸಿದ್ದಾರೆ.