Thursday, July 4, 2024
Homeರಾಜಕೀಯಏನು ನಡೆಯುತ್ತಿದೆ ರಾಜ್ಯ ಬಿಜೆಪಿಯಲ್ಲಿ..? ಆರ್‌ಎಸ್‌‍ಎಸ್‌‍ ಹಿಡಿತ ಕೈತಪ್ಪುತ್ತಿದೆಯಾ?

ಏನು ನಡೆಯುತ್ತಿದೆ ರಾಜ್ಯ ಬಿಜೆಪಿಯಲ್ಲಿ..? ಆರ್‌ಎಸ್‌‍ಎಸ್‌‍ ಹಿಡಿತ ಕೈತಪ್ಪುತ್ತಿದೆಯಾ?

ಬೆಂಗಳೂರು, ಮೇ 27- ಬಿಜೆಪಿಯಲ್ಲಿ ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಮತ್ತೊಂದು ಅನ್ಯಾಯ ಎನ್ನುವ ನಿಯಮ ಏನಾದರೂ ಇದೆಯಾ? ತಮವರ ಹಿತಾದೃಷ್ಟಿ ಕಾಪಾಡಿಕೊಳ್ಳಲು, ಪಕ್ಷದ ನಿಯತ್ತಿನ ಸಿಪಾಯಿಗಳನ್ನೇ ಮೂಲೆಗುಂಪು ಮಾಡಲಾಗುತ್ತಿದೆಯಾ? ಈ ರೀತಿಯ ಪ್ರಶ್ನೆಗಳು ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಕಾರ್ಯಕರ್ತರ ವಲಯದಲ್ಲಿ ಬಲವಾಗುತ್ತಿರುವ ಶಂಕೆ.

ಲೋಕಸಭಾ ಚುನಾವಣೆಯ ಪ್ರಕ್ರಿಯೆಯಿಂದ ಹಿಡಿದು ವಿಧಾನ ಪರಿಷತ್‌ ಚುನಾವಣೆ ಯವರೆಗಿನ ಸುಮಾರು ಒಂದು ತಿಂಗಳಲ್ಲಿ ಸಂಘ ಪರಿವಾರದ ಹಿನ್ನಲೆಯ ಇಬ್ಬರು ಹಿರಿಯ ನಾಯಕರನ್ನು ಬಿಜೆಪಿ ತನ್ನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದೆ. ಹಾಗಾದರೆ, ಕಾಂಗ್ರೆಸ್‌‍ ಸಚಿವರು ಹೇಳುತ್ತಿರುವ ಹಾಗೇ, ಬಿಜೆಪಿಯ ಮಾತೃ ಸಂಘಟನೆ ಆರ್‌ಎಸ್‌‍ಎಸ್‌‍ ( Rashtriya Swayamsevak Sangh ) ಹಿಡಿತ ಬಿಜೆಪಿ ಮೇಲೆ ತಪ್ಪುತ್ತಿದೆಯಾ?

ಮಾಜಿ ಸಚಿವ, ಹಿರಿಯ ಬಿಜೆಪಿ ಮುಖಂಡ ಕೆ.ಎಸ್‌‍.ಈಶ್ವರಪ್ಪ ಮತ್ತು ಮೂರು ಬಾರಿಯ ಶಾಸಕ ಕೆ.ರಘುಪತಿ ಭಟ್‌ ಅವರನ್ನು, ಬಿಜೆಪಿಯು ಪಕ್ಷದಿಂದ ಉಚ್ಚಾಟಿಸಿದೆ. ಇದಕ್ಕೆ ಕಾರಣ, ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ದ ಕಣದಲ್ಲಿದ್ದ ಆರೋಪ. ಈಶ್ವರಪ್ಪನವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮತ್ತು ರಘುಪತಿ ಭಟ್‌‍, ಪರಿಷತ್‌ ಚುನಾವಣೆಗೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಕಣದಲ್ಲಿದ್ದಾರೆ.

ಈಶ್ವರಪ್ಪನವರ ಉಚ್ಚಾಟನೆಯ ಹಿನ್ನಲೆಯನ್ನು ಒಮೆ ಅವಲೋಕನ ಮಾಡುವುದಾದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಅವರಿಗೆ ಟಿಕೆಟ್‌ ಕೊಡಲಿಲ್ಲ. ಬಿಜೆಪಿ ಹೈಕಮಾಂಡ್‌ ಮಾತಿಗೆ ಬೆಲೆಕೊಟ್ಟು, ಸ್ಪರ್ಧಾ ಕಣದಿಂದ ಈಶ್ವರಪ್ಪ ಹಿಂದಕ್ಕೆ ಸರಿದರು. ಶಿವಮೊಗ್ಗ ಅಸೆಂಬ್ಲಿಯಲ್ಲಿ ಬಿಜೆಪಿಯ ಎಸ್‌‍.ಎನ್‌.ಚನ್ನಬಸಪ್ಪ, 27, 674 ಮತಗಳ ಅಂತರದಿಂದ ಗೆದ್ದರು ಅಂದರೆ, ಅದರಲ್ಲಿ ಈಶ್ವರಪ್ಪನವರ ಪ್ರಚಾರದ ಕೊಡುಗೆಯನ್ನು ಕಡೆಗಣಿಸುವಂತಿಲ್ಲ.

ಬರೀ ಶಿವಮೊಗ್ಗ ಪ್ರಚಾರಕ್ಕೆ ಸೀಮಿತವಾಗದ ಈಶ್ವರಪ್ಪ, ರಾಜ್ಯವ್ಯಾಪಿ ಪ್ರವಾಸವನ್ನು ಮಾಡಿದ್ದರು. ಇದಾದ ನಂತರ, ಪುತ್ರ ಕಾಂತೇಶ್‌ಗಾಗಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟಿಗೆ ಪ್ರಯತ್ನಿಸಲಾರಂಭಿಸಿದರು. ಇವರ ಪ್ರಯತ್ನಕ್ಕೆ ಭರವಸೆಯ ಮೊಳಕೆ ಹಾಕಿದ್ದೇ ಯಡಿಯೂರಪ್ಪನವರು. ಇವರನ್ನೇ ನಂಬಿದ್ದ ಈಶ್ವರಪ್ಪ ಮತ್ತು ಕಾಂತೇಶ್‌ಗೆ, ಇಲ್ಲೂ ಬಯಸಿದ್ದು ಸಿಗಲಿಲ್ಲ. ಇವರಿಬ್ಬರು, ನೇರವಾಗಿ ಯಡಿಯೂರಪ್ಪನವರ ಮೇಲೆ ಬಹಿರಂಗವಾಗಿಯೇ ಆರೋಪ ಮಾಡಿದರು.

ಇನ್ನು, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಇದೇ ರೀತಿಯ ಪರಿಸ್ಥಿತಿ ಎದುರಿಸಿದವರು ಉಡುಪಿಯ ರಘುಪತಿ ಭಟ್‌‍. ಇವರಿಗೆ ಟಿಕೆಟ್‌ ನಿರಾಕರಿಸಿದ್ದಕ್ಕೆ ಸಕಾರಣ ಯಾವುದೂ ಇರಲಿಲ್ಲ. ಜಿಲ್ಲೆಯಲ್ಲಿ ಒಬ್ಬರು ಬ್ರಾಹಣ ( ಕುಂದಾಪುರ) ಸಮುದಾಯದವರಿಗೆ ಟಿಕೆಟ್‌ ಕೊಟ್ಟ ಹಿನ್ನಲೆಯಲ್ಲಿ ರಘುಪತಿ ಭಟ್‌ ಅವರಿಗೆ ಟಿಕೆಟ್‌ ಕೈತಪ್ಪಿತ್ತು. ಟಿಕೆಟ್‌ ಕೈ ತಪ್ಪಿದ್ದಕ್ಕೆ ಮೊದಮೊದಲು ಕಣ್ಣೀರು ಹಾಕಿದ್ದ ಭಟ್ರು, ನಂತರ ತನ್ನ ಎದುರೇ ಬೆಳೆದಿದ್ದ ಯಶಪಾಲ್‌ ಸುವರ್ಣ ಅವರ ಬೆನ್ನಿಗೆ ನಿಂತು ಅವರನ್ನು ದಡ ಸೇರಿಸಿದರು. (ಜಿಲ್ಲೆಯ ಎಲ್ಲಾ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ)

ಮೊನ್ನೆಮೊನ್ನೆಯವರೆಗೆ ಉಡುಪಿಯ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಿವಮೊಗ್ಗದ ರಾಘವೇಂದ್ರ ಪರ ಪ್ರಚಾರ ಮಾಡುತ್ತಿದ್ದ ರಘುಪತಿ ಭಟ್ರು, ಪರಿಷತ್‌ ಚುನಾವಣೆಯ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಎಂಎಲ್‌‍ಎ ಟಿಕೆಟ್‌ ಕೈತಪ್ಪಿದ್ದ ವೇಳೆ, ಪರಿಷತ್‌ ಟಿಕೆಟಿನ ಆರ್ ಇದ್ದಿರಬಹುದು. ಕೊಟ್ಟ ಮಾತು ನಡೆಯದೇ ಇದ್ದಾಗ, ಭಟ್ರು ಬಂಡಾಯ ಸಾರಿದರು.

ಮೂರು ವಾರದ ಕೆಳಗೆ ಬಿಜೆಪಿ ಲೋಕಸಭಾ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದ ರಘುಪತಿ ಭಟ್‌ ಈಗ ಪಕ್ಷದಿಂದಲೇ ಉಚ್ಚಾಟನೆಗೊಂಡಿದ್ದಾರೆ. ಈಶ್ವರಪ್ಪನವರನ್ನಾಗಲಿ ರಘುಪತಿ ಭಟ್ರನ್ನಾಗಲಿ ಬಿಜೆಪಿಯಲ್ಲಿ ಉಳಿಸಿಕೊಳ್ಳಬೇಕು ಎನ್ನುವ ಆತಸಾಕ್ಷಿ ಪಕ್ಷದ ನಾಯಕರಿಗೆ ಇತ್ತೋ, ಇಲ್ಲವೋ, ಈಶ್ವರಪ್ಪನವರನ್ನು ದೆಹಲಿಗೆ ಕರೆಸಿಕೊಂಡು ಅಮಿತ್‌ ಶಾ ಭೇಟಿಯಾಗದೇ ಅವಮಾನಿಸಿ ಕಳುಹಿಸಿದರು.

ಅಮಿತ್‌ ಶಾ ಅಂದು ದೆಹಲಿಯಲ್ಲಿ ಈಶ್ವರಪ್ಪನವರನ್ನು ಮನವೊಲಿಸಿದ್ದರೆ ಅವರು ಕಣದಿಂದ ಹಿಂದಕ್ಕೆ ಸರಿಯುವ ತೀರ್ಮಾನ ಮಾಡುತ್ತಿದ್ದರೇನೋ? ಅದೇ ರೀತಿ, ರಘುಪತಿ ಭಟ್ರನ್ನು ಅವರು ಬಹಳವಾಗಿ ಗೌರವಿಸುವ ಯಡಿಯೂರಪ್ಪ ಕರೆಸಿ ಮಾತನಾಡಿದ್ದರೆ, ಬಂಡಾಯವಾಗಿ ಕಣದಿಂದ ವಾಪಸ್‌‍ ಪಡೆಯುತ್ತಿದ್ದರೇನೋ?

ಆದರೆ, ನಿಜವಾದ ಯಾವ ಬಿಜೆಪಿಯ ಮನಸ್ಸುಗಳೂ ಇಬ್ಬರು ಈ ಕಟ್ಟಾ ಸಂಘ ಪರಿವಾರದ ಹಿನ್ನಲೆಯ ನಾಯಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಕೆಲಸವನ್ನು ಮಾಡಲಿಲ್ಲ. ತನ್ನ ಸ್ಥಾನಮಾನ, ಸ್ವಾಭಿಮಾನಕ್ಕ ಧಕ್ಕೆಯಾದಾಗ ಯಡಿಯೂರಪ್ಪ ಹೊಸ ಪಕ್ಷವನ್ನು ಹುಟ್ಟು ಹಾಕಿ, ಬಿಜೆಪಿಗೆ ಸಡ್ಡು ಹೊಡೆದಿದ್ದರು. ಆದರೆ, ಪಕ್ಷವೇ ಸರ್ವಸ್ವ ಎನ್ನುತ್ತಿದ್ದ ಈಶ್ವರಪ್ಪ, ರಘುಪತಿ ಭಟ್‌‍, 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದಾರೆ. ಹಾಗಾಗಿ, ಸಾಮಾನ್ಯ ಬಿಜೆಪಿ ಕಾರ್ಯಕರ್ತರಲ್ಲಿ ಕಾಡುತ್ತಿರುವ ಪ್ರಶ್ನೆ, ಕರ್ನಾಟಕ ಬಿಜೆಪಿಯಲ್ಲಿ ಏನಾಗುತ್ತಿದೆ…

RELATED ARTICLES

Latest News