ಮಂಡ್ಯ, ಜೂ.8: ಕಾವೇರಿ ಆರತಿಗೆ 100 ಕೋಟಿ ರೂ.ಯಾಕೆ ಬೇಕು? 100 ಕೋಟಿ ರೂ. ಖರ್ಚು ಮಾಡುವುದಕ್ಕೆ ನನ್ನ ವಿರೋಧವಿದೆ ಎಂದು ಕೇಂದ್ರ ಸಚಿವ ಹೆಚ್ .ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಮೈಶುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಅವರು ಕೆರೆತಣ್ಣೂರಿನಲ್ಲಿ ಕಾವೇರಿ ಆರತಿ ಮಾಡಿಸಿದಾಗ ಇಷ್ಟೊಂದು ಹಣ ವ್ಯಯವಾಗಿರಲಿಲ್ಲ. ಈಗ ಯಾಕೆ ಅಷ್ಟೊಂದು ಹಣ ಬೇಕು? ಆರತಿ ಕಾರ್ಯಕ್ರಮಕ್ಕೆ ತಗಲುವ ಖರ್ಚು-ವೆಚ್ಚಗಳ ಬಗ್ಗೆ ಒಮ್ಮೆ ಪುಟ್ಟರಾಜು ಅವರನ್ನು ಕೇಳಿ ತಿಳಿದುಕೊಳ್ಳಿ ಎಂದು ಹೇಳಿದರು.
ಈ ವರ್ಷ ದೇಶಾದ್ಯಂತ 14 ಸಾವಿರ ಎಲೆಕ್ಟಿಕ್ ಬಸ್ ಕೊಡಲು ತೀರ್ಮಾನಿಸಿದ್ದು, ಇದರಲ್ಲಿ ಬೆಂಗಳೂರಿಗೆ ನಾಲ್ಕೂವರೆ ಸಾವಿರ ಎಲೆಕ್ಟಿಕ್ ಬಸ್ಗಳನ್ನು ನೀಡುತ್ತೇವೆ. ಬೇರೆ ರಾಜ್ಯಕ್ಕೆ ಎರಡು ಸಾವಿರ ಬಸ್ಗಳನ್ನು ನೀಡುತ್ತೇವೆ ಎಂದು ಹೇಳಿದರು.
ಬೃಹತ್ ಕೈಗಾರಿಕಾ ಸಚಿವನಾದ ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದೀರಿ. ಮಂಡ್ಯ ಜಿಲ್ಲೆಗೆ ಕೈಗಾರಿಕೆ ತರಲು ನಿತ್ಯ ಪ್ರಯತ್ನ ಮಾಡುತ್ತಿದ್ದೇನೆ. ರಾಜ್ಯ ಸರ್ಕಾರದ ಸಹಕಾರ ಪಡೆಯುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಮೈಶುಗರ್ ಶಿಕ್ಷಣ ಸಂಸ್ಥೆ ಉಳಿಸಲು ನಾನು ಬದ್ಧ. ಅದಕ್ಕೆ ಬೇಕಾದ ನೀಲನಕ್ಷೆ ಸಿದ್ಧಪಡಿಸಿಕೊಡಿ. ಮಾದರಿ ಶಾಲೆ ಮಾಡಲು ಅಗತ್ಯ ನೆರವು ನೀಡುತ್ತೇನೆ. ಪ್ರತಿ ಪಂಚಾಯಿತಿ ಮಟ್ಟದಲ್ಲಿ ಉಚಿತ ಇಂಗ್ಲೀಷ್ ಶಾಲೆ ತೆರೆಯಬೇಕು.
ಹಿಂದೆ ಶಿಕ್ಷಣ ಅನ್ನೋದು ಮಠಗಳಿಂದ ನಡೆಯುತ್ತಿತ್ತು. ಸರ್ಕಾರದಿಂದ ಶಿಕ್ಷಣಕ್ಕೆ ದೊಡ್ಡ ಮಟ್ಟದ ಅವಕಾಶ ಇರಲಿಲ್ಲ. ಕೆ.ವಿ.ಶಂಕರಗೌಡ ಸೇರಿದಂತೆ ಅನೇಕ ಹಿರಿಯರು ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಅವರು ನುಡಿದರು.
ಮಿಮ್ಸ್ ವೈದ್ಯರ ನಿರ್ಲಕ್ಷ್ಯ ಮತ್ತು ಪೊಲೀಸರ ವರ್ತನೆಯಿಂದ ಮಕ್ಕಳು ಸಾವನ್ನಪ್ಪಿರುವುದು ತೀವ್ರ ನೋವು ತರುತ್ತದೆ. ಸರ್ಕಾರಿ ಅಧಿಕಾರಿಗಳು ಹಣದಾಸೆಗೆ ಜೀವ ತೆಗೆಯಬಾರದು ಎಂದು ಕಿವಮಾತು ಹೇಳಿದರು. ಹೆಚ್ ಎಮ್ಟಿ ಕಾರ್ಖಾನೆಯ ಉಳಿವಿಗಾಗಿ ಪಣತೊಟ್ಟಿದ್ದೇನೆ. ಆದರೆ, ರಾಜ್ಯ ಸರ್ಕಾರ ಭೂಮಿ ಕೊಡುತ್ತಿಲ್ಲ. ಮಂಡ್ಯ ಜನ ಸ್ವಲ್ಪ ಸಮಯ ಕೊಡಿ. ನಿಮ್ಮ ನಿರೀಕ್ಷೆಗಳನ್ನು ನಿರಾಸೆ ಮಾಡಲ್ಲ ಎಂದು ಭಾವುಕರಾದರು.