ಬೆಂಗಳೂರು, ಅ.7- ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ವಕೀಲನನ್ನು ತಕ್ಷಣವೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಆತನನ್ನು ಬಿಟ್ಟು ಕಳುಹಿಸಿರುವುದೇಕೆ? ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟಿನಲ್ಲಿ ಅದರಲ್ಲೂ ಮುಖ್ಯನ್ಯಾಯ ಮೂರ್ತಿಗಳ ಮೇಲೆಯೇ ಚಪ್ಪಲಿ ಎಸೆಯುತ್ತಾರೆ ಎಂದರೆ, ಅಲ್ಲಿ ಗಂಭೀರವಾದ ಭದ್ರತಾ ಲೋಪವಾಗಿದೆ. ಈ ಘಟನೆ ಅಕ್ಷಮ್ಯ ಎಂದರು.ಇಲ್ಲಿ ಗವಾಯಿ ಅವರ ವೈಯಕ್ತಿಕ ಪ್ರಶ್ನೆ ಬರುವುದಿಲ್ಲ. ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಹುದ್ದೆಯ ಗೌರವದ ಪ್ರಶ್ನೆ ಇದೆ. ಸಂವಿಧಾನಕ್ಕೆ ಮಾಡಿದ ಅಪಮಾನ ಎಂದು ವ್ಯಾಖ್ಯಾನಿಸಿದರು.
ಸುಪ್ರೀಂಕೋರ್ಟಿನಲ್ಲೇ ಈ ಘಟನೆ ನಡೆಯುತ್ತದೆ ಎಂದರೆ ಸದರಿ ವಕೀಲರನ್ನು ತಕ್ಷಣವೇ ಬಂಧಿಸಿ ಕ್ರಮ ಕೈಗೊಳ್ಳಬೇಕು. ಬಿಟ್ಟು ಕಳುಹಿಸಿದ್ದೇಕೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಸನಾತನ ಧರ್ಮಕ್ಕೆ ಸಂಬಂಧಪಟ್ಟಂತೆ ಆತ ಆಡಿರುವ ಮಾತುಗಳು ಆಕ್ಷೇಪಾರ್ಹವಾಗಿದೆ. ಯಾವುದೇ ನ್ಯಾಯಮೂರ್ತಿಗಳು ಪ್ರಚಲಿತಲಿರುವ ಕಾನೂನುಗಳ ಆಧಾರದ ಮೇಲೆಯೇ ತೀರ್ಪು ನೀಡುತ್ತಾರೆ. ಅದನ್ನು ಮುಂದಿಟ್ಟುಕೊಂಡು ಚಪ್ಪಲಿ ಎಸೆಯುವುದು ಖಂಡನೀಯ ಎಂದರು.
ಮುಖ್ಯನ್ಯಾಯಮೂರ್ತಿಯವರು ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ. ಆ ಸ್ಥಾನಕ್ಕೆ ಬರಬೇಕಾದರೆ ಸಾಕಷ್ಟು ಶ್ರಮ ಪಟ್ಟಿರುತ್ತಾರೆ. ಅದು ದೊಡ್ಡ ಸಾಧನೆಯೂ ಹೌದು. ಇಡೀ ಸಮುದಾಯದ ಪ್ರತೀಕವಾಗಿರುತ್ತಾರೆ. ಈ ಘಟನೆಯನ್ನು ದೇಶ ಖಂಡಿಸಬೇಕು, ತಕ್ಕ ಪ್ರತಿಕ್ರಿಯೆ ನೀಡಬೇಕು. ಮುಂದೆ ಈ ರೀತಿ ಆಗದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಂಬಂಧ ಪಟ್ಟ ವ್ಯವಸ್ಥೆಗೆ ತಾವು ಆಗ್ರಹಿಸುವುದಾಗಿ ಹೇಳಿದರು.
ರಾಜ್ಯದಲ್ಲಿ ರಾಜಕೀಯ ಬದಲಾವಣೆ ಮಾಡುವುದಾದರೆ ಬಿಹಾರದ ವಿಧಾನಸಭಾ ಚುನಾವಣೆವರೆಗೂ ಕಾಯುವುದಿಲ್ಲ. ಹೈಕಮಾಂಡ್ ಬಯಸಿದರೆ, ತಕ್ಷಣವೇ ನಿರ್ಧಾರ ತೆಗೆದುಕೊಳ್ಳುತ್ತದೆ. ರಾಜ್ಯದಲ್ಲಿ ನೆರೆಯ ಪರಿಸ್ಥಿತಿ ಇದೆ. ಅದಕ್ಕೆ ತಕ್ಷಣ ಸ್ಪಂದಿಸಬೇಕಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಭಾಗದಲ್ಲೂ ಅನೇಕ ಸಮಸ್ಯೆಗಳಿವೆ. ಅದರತ್ತ ಗಮನ ಹರಿಸಬೇಕು. ಅದನ್ನು ಬಿಟ್ಟು ರಾಜಕೀಯ ಬದಲಾವಣೆ ಚರ್ಚೆ ಬಗ್ಗೆ ಅನಗತ್ಯ ಎಂದು ಹೇಳಿದರು.
ಅಧಿಕಾರ ಹಂಚಿಕೆಯ ಗೊಂದಲಗಳನ್ನು ಬಗೆಹರಿಸಿ ಎಂದು ಸಚಿವ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಸರಿಯಿದೆ. ಈ ಬಗ್ಗೆ ದಿನನಿತ್ಯ ಒಂದೊಂದು ರೀತಿಯ ಚರ್ಚೆಗಳು ನಡೆಯುತ್ತಿವೆ. ಹೈಕಮಾಂಡ್ ಮಧ್ಯೆ ಪ್ರವೇಶಿಸಿ ಬಗೆಹರಿಸಿದರೆ ಗೊಂದಲಗಳು ನಿವಾರಣೆಯಾಗುತ್ತವೆ ಎಂದರು.
ಲಿಂಗಾಯತ, ವೀರಶೈವ ಪ್ರತ್ಯೇಕ ಎಂದು ಆ ಸಮುದಾಯದ ನಾಯಕರೇ ಹೇಳುತ್ತಿದ್ದಾರೆ. ಮೊದಲು ಆ ಬಗ್ಗೆ ಚರ್ಚೆ ಮಾಡಿ, ಒಮತದ ಅಭಿಪ್ರಾಯ ರೂಢಿಗೊಳ್ಳಬೇಕು. ನಂತರ ಧರ್ಮದ ಪ್ರತ್ಯೇಕದ ಸ್ಥಾನಮಾನಗಳ ಬಗ್ಗೆ ನಿರ್ಧಾರಗಳಾಗಬಹುದು ಎಂದರು.
ಲಿಂಗಾಯತ ಸಮುದಾಯ ಬಸವ ಸಾಂಸ್ಕೃತಿಕ ಅಭಿಯಾನ ನಡೆಸಿ, ಸಮಾರೋಪ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದಾಗ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಭಾಗವಹಿಸಿದ್ದಾರೆ. ಅಲ್ಲಿ ಪ್ರತ್ಯೇಕ ಧರ್ಮದ ಬಗ್ಗೆ ಯಾವುದೇ ರೀತಿಯ ಹೇಳಿಕೆಗಳನ್ನು ಸಿದ್ದರಾಮಯ್ಯ ನೀಡಿಲ್ಲ. ಆ ಸಮುದಾಯದವರೇ ಪ್ರಸ್ತಾಪ ಮಾಡಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಅವರ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಮೆಟ್ರೋಗೆ ಬಸವಣ್ಣ ಅವರ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ. ಅನಂತರ ಅಂತಿಮ ನಿರ್ಧಾರ ತೆಗೆದುಕೊಳುತ್ತೇವೆ ಎಂದರು.
ಪೊಲೀಸ್ ಇಲಾಖೆಯಲ್ಲಿ ತೆರವಾಗುವ ಹುದ್ದೆಗಳಿಗೆ ನೇಮಕಾತಿ ಮಾಡಲು ಉನ್ನತ ಅಧಿಕಾರಿಗಳ ಸಮಿತಿ ಇದೆ. ಇನ್್ಸಪೆಕ್ಟರ್ಗಳ ಮೇಲ್ಪಟ್ಟ ಹುದ್ದೆಗಳ ವರ್ಗಾವಣೆಯನ್ನು ಸದರಿ ಸಮಿತಿ ನಿರ್ವಹಿಸುತ್ತದೆ. ಕಾನ್್ಸಟೆಬಲ್ಗಳು, ಪಿಎಸ್ಐಗಳ ವರ್ಗಾವಣೆಗಳನ್ನು ಐಜಿ ಹಂತದಲ್ಲೇ ನಿಭಾಯಿಸಲಾಗುತ್ತದೆ. ಇಂತಹ ವಿಚಾರಗಳು ಹೈಕಮಾಂಡ್ ಗಮನಕ್ಕೆ ಹೋಗುವುದಿಲ್ಲ ಎಂದರು.
ನಿನ್ನೆ ನಾನೇ 130 ಇನ್್ಸಪೆಕ್ಟರ್ಸ್ ಹಾಗೂ 30ಕ್ಕೂ ಹೆಚ್ಚು ಡಿವೈಎಸ್ಪಿ ಗಳನ್ನುವರ್ಗಾವಣೆ ಮಾಡಿದ್ದೇನೆ. ಈ ಸಂದರ್ಭದಲ್ಲಿ ಕೆಲವರು ಹೇಳಿದ ರೀತಿ ವರ್ಗಾವಣೆಗಳು ಸಾಧ್ಯವಾಗದೇ ಇರಬಹುದು, ಆದರೆ ಆಡಳಿತ ದೃಷ್ಟಿಯಿಂದ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.