ಮುಲ್ಲಾನ್ಪುರ, ಮೇ 29– ಆಟಗಾರರ ಗಾಯದ ಸಮಸ್ಯೆಗೆ ಸಿಲುಕಿರುವ ಆರ್ಸಿಬಿ ತಂಡ ಇಂದು ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಜಯಗಳಿಸಿ ಫೈನಲ್ಗೆ ಆರ್ಹತೆ ಪಡೆಯುವುದೇ ಎಂದು ಕ್ರಿಕೆಟ್ ಅಭಿಮಾನಿಗಳೂ ಕಾದು ಕುಳಿತಿದ್ದಾರೆ.
ಈ ಪಂದ್ಯದಲ್ಲಿ ಜಯಗಳಿಸಿದವರು ನೇರವಾಗಿ ಫೈನಲ್ ಪ್ರವೇಶಿಸಿದರೆ ಸೋತವರು ಭಾನುವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಆಡಬೇಕಾಗುತ್ತದೆ. ಆರ್ಸಿಬಿ ಈ ಬಾರಿ ಲೀಗ್ 14 ಪಂದ್ಯಗಳ ಪೈಕಿ 9 ರಲ್ಲಿ ಗೆದ್ದಿದೆ. ಮಳೆಯಿಂದ ಬೆಂಗಳೂರಿನ ಪಂದ್ಯ ರದ್ದಾಗಿದ್ದರಿಂದ ಒಟ್ಟು 19 ಅಂಕ ಸಂಪಾದಿಸಿ 2ನೇ ಸ್ಥಾನ ಪಡೆದಿದೆ.
ಪಂಜಾಬ್ ಸಮಾನ 19 ಅಂಕ ಪಡೆದರೂ ರನ್ರೇಟ್ ಆಧಾರದಲ್ಲಿ ಮೊದಲ ಸ್ಥಾನ ಪಡೆದಿದೆ.
ಈ ಬಾರಿ ಮೂರನೇ ಬಾರಿ ಇತ್ತಂಡಗಳು ಮುಖಾಮುಖಿಯಾಗುತ್ತಿವೆ. ಲೀಗ್ ಮುಖಾಮುಖಿಯಲ್ಲಿ ಎರಡು ತಂಡಗಳು ಒಂದೊಂದು ಪಂದ್ಯವನ್ನು ಗೆದ್ದಿವೆ. ಇಂತಹ ಸಮಯದಲ್ಲಿ ಮತ್ತೆ ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಆರ್ಸಿಬಿಗೆ ಗಾಯದ ಚಿಂತೆ ಶುರುವಾಗಿದೆ.
ವೇಗಿ ಜೋಶ್ ಹೇಜಲ್ವುಡ್ ಫಿಟ್ ಆಗಿದ್ದು, ಈ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಟಿಮ್ ಡೇವಿಡ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಗೈರಾಗಲಿದ್ದಾರೆ ಎನ್ನಲಾಗುತ್ತಿದೆ. ನಾಯಕ ರಜತ್ ಪಾಟೀದಾರ್ ಗಾಯದ ಸಮಸ್ಯೆ ಜೊತೆಗೆ ಲಯದ ಸಮಸ್ಯೆ ಎದುರಿಸುತ್ತಿದ್ದಾರೆ.
ಕಳೆದ ಬಾರಿ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಕೋಲ್ಕತ್ತಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿಯೂ ಶ್ರೇಯಸ್ ಅಯ್ಯರ್ ತಂಡವನ್ನು ಪ್ಲೇ ಆಫ್ವರೆಗೆ ತಲುಪಿಸಿದ್ದಾರೆ. ತಂಡ ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು ತವರಿನಲ್ಲಿ ಆರ್ಸಿಬಿಯನ್ನು ಮಣಿಸುವ ಲೆಕ್ಕಾಚಾರದಲ್ಲಿದೆ.
ಈ ಬಾರಿಯ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಒಟ್ಟು 602 ರನ್ ಹೊಡೆದು ಅತಿ ಹೆಚ್ಚು ರನ್ ಹೊಡೆದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದರೆ, 514 ರನ್ ಹೊಡೆದಿರುವ ಶ್ರೇಯಸ್ ಅಯ್ಯರ್ 10ನೇ ಸ್ಥಾನದಲ್ಲಿದ್ದಾರೆ.
ಆರ್ಸಿಬಿಯ ಪ್ರತಿ ಪಂದ್ಯದಲ್ಲೂ ಕೊಹ್ಲಿ ಅಪದ್ಭಾಂದವರಾಗಿ ಹೊರ ಹೊಮುತ್ತಿದ್ದು, ಈ ಪಂದ್ಯದಲ್ಲೂ ಅವರ ಬ್ಯಾಟ್ನಿಂದ ರನ್ ಗಳ ಸುರಿಮಳೆಯಾದರೆ ಫೈನಲ್ ಖಚಿತ ಎನ್ನಲಾಗುತ್ತಿದೆ. ಇವರ ಜೊತೆಗೆ ಕನ್ನಡಿಗ ಮಯಾಂಕ್ ಅರ್ಗವಾಲ್, ಜಿತೇಶ್ ಶರ್ಮಾ ಕೂಡ ಮಿಂಚುತ್ತಿರುವುದು ಆರ್ಸಿಬಿ ವರದಾನವಾಗಲಿದೆ. ಆದರೂ ಆಟಗಾರರ ಗಾಯದ ಸಮಸ್ಯೆ ತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.