Monday, June 30, 2025
Homeಬೆಂಗಳೂರುಮಹಿಳೆಯನ್ನು ಕೊಂದು ಕಸದ ಲಾರಿಗೆ ಎಸೆದಿದ್ದ ಪ್ರಕರಣ : 20 ಗಂಟೆಯೊಳಗೆ ಆರೋಪಿ ಅರೆಸ್ಟ್

ಮಹಿಳೆಯನ್ನು ಕೊಂದು ಕಸದ ಲಾರಿಗೆ ಎಸೆದಿದ್ದ ಪ್ರಕರಣ : 20 ಗಂಟೆಯೊಳಗೆ ಆರೋಪಿ ಅರೆಸ್ಟ್

Woman killed and thrown into garbage truck case: Accused arrested within 20 hours

ಬೆಂಗಳೂರು,ಜೂ.30-ಕಸದ ಲಾರಿಯಲ್ಲಿ ಮಹಿಳೆಯ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ಕೈಗೊಂಡ ಸಿಕೆ ಅಚ್ಚುಕಟ್ಟು ಠಾಣೆ ಪೊಲೀಸರು ಪ್ರಕರಣ ದಾಖಲಾದ 20 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಸಂಶುದ್ದೀನ್ (32) ಬಂಧಿತ ಆರೋಪಿ. ಕೊಲೆಯಾದ ಮಹಿಳೆಯನ್ನು ಪುಷ್ಪಾ ಅಲಿಯಾಸ್ ಆಶಾ ಎಂದು ಗುರುತಿಸಲಾಗಿದೆ.ಹುಳಿಮಾವುವಿನ ಕಂಪನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಪುಷ್ಪ ಅಲಿಯಾಸ್ ಆಶಾ (40) ಗೆ ಈ ಹಿಂದೆ ಮದುವೆಯಾಗಿದ್ದು, ಆಕೆಯ ಪತಿ ಮೃತಪಟ್ಟಿದ್ದು, ಅವರ ಮಕ್ಕಳು ಸಂಬಂಧಿಕರ ಮನೆಯಲ್ಲದ್ದಾರೆ.

ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಸಂಶುದ್ದೀನ್‌ಗೆ ಮದುವೆಯಾಗಿದ್ದು ಅಸ್ಸಾಂನಲ್ಲಿ ಪತ್ನಿ ಮತ್ತು ಮಕ್ಕಳು ನೆಲೆಸಿದ್ದಾರೆ.ಒಂದೂವರೆ ವರ್ಷದ ಹಿಂದೆ ಸಂಶುದ್ದೀನ್‌ಗೆ ಅಶಾ ಪರಿಚಯವಾಗಿದೆ. ನಂತರ ಇವರಿಬ್ಬರ ಸ್ನೇಹ ಆತ್ಮೀಯವಾಗಿದೆ. ಕಳೆದ 6 ತಿಂಗಳಿನಿಂದ ಇವರಿಬ್ಬರು ಹುಳಿಮಾವುವಿನಲ್ಲಿ ಒಂದೇ ಮನೆಯಲ್ಲಿ ಲಿವಿಂಗ್‌ ಟುಗೆದರ್‌ನಲ್ಲಿದ್ದರು.

ಇವರು ವಾಸವಾಗಿದ್ದ ಮನೆ ಮಾಲೀಕರು ಹಾಗೂ ಅಕ್ಕಪಕ್ಕದವರಿಗೆ ನಾವು ಗಂಡ-ಹೆಂಡತಿಯೆಂದು ಹೇಳಿ ಕೊಂಡಿದ್ದರು.ಸಂಶುದ್ದೀನ್ ಹಾಗೂ ಪುಷ್ಪಾ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಪುಷ್ಪಾ ಪ್ರತಿನಿತ್ಯ ಮನೆಗೆ ಕುಡಿದು ಬಂದು ರಂಪಾಟ ಮಾಡುತ್ತಿದ್ದಳು. ಅಲ್ಲದೇ ತಡರಾತ್ರಿವರೆಗೂ ಫೋನ್‌ನಲ್ಲಿ ಯಾರೊಂದಿಗೋ ಮಾತನಾಡುತ್ತಿದ್ದಳು. ಇದನ್ನು ಸಂಶುದ್ದೀನ್ ಸಹಿಸುತ್ತಿರಲಿಲ್ಲ.

ಮೊನ್ನೆ ರಾತ್ರಿ ಇದೇ ವಿಚಾರಕ್ಕೆ ಇವರಿಬ್ಬರ ಮಧ್ಯೆ ಗಲಾಟೆಯಾಗಿ ಹೊಡೆದಾಡಿಕೊಂಡಿದ್ದಾರೆ. ಆ ವೇಳೆ ತಾಳ್ಮೆ ಕಳೆದುಕೊಂಡ ಸಂಶುದ್ದೀನ್ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ.
ನಂತರ ಶವವನ್ನು ಏನು ಮಾಡುವುದೆಂದು ಯೋಚಿಸಿ,ಬಳಿಕ ಆಶಾಳ ಮೃತದೇಹವನ್ನು ಮೂಟೆಕಟ್ಟಿ ಅದನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯ ಸ್ಟೇಟಿಂಗ್ ಗೌಂಡ್ ಬಳಿಗೆ ಬಂದು ರಸ್ತೆಬದಿ ನಿಲ್ಲಿಸಿದ್ದ ಬಿಬಿಎಂಪಿ ಕಸದ ಲಾರಿಗೆ ಎಸೆದು ಪರಾರಿಯಾಗಿದ್ದ.

ನಿನ್ನೆ ಬೆಳಗಿನ ಜಾವ ಕಸ ಹಾಕಲು ಬಂದಿದ್ದ ವ್ಯಕ್ತಿಯೊಬ್ಬರು ಮೂಟೆಯನ್ನು ಗಮನಿಸಿ ಕುತೂಹಲದಿಂದ ಬಿಚ್ಚಿ ನೋಡಿದಾಗ ಶವಕಂಡು ಗಾಬರಿಯಾಗಿ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿ ಪೊಲೀಸರು ಮೂಟೆ ಪರಿಶೀಲಿಸಿದಾಗ ಮಹಿಳೆಯ ಶವವಿರುವುದು ಕಂಡು ಬಂದಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸ್ಥಳದ ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ, ಕೊಲೆ ಆರೋಪಿಗಳ ಪತ್ತೆಗೆ ಎರಡು ತಂಡ ರಚಿಸಿದ್ದರು.
ಈ ತಂಡಗಳು ಕಾರ್ಯಾಚರಣೆ ಕೈಗೊಂಡು ಮೊದಲು ಮಹಿಳೆ ಯಾರೆಂಬುವುದರ ಬಗ್ಗೆ ತನಿಖೆ ನಡೆಸಿದಾಗ ಹುಳಿಮಾವಿನಲ್ಲಿ ವಾಸವಾಗಿದ್ದ ಪುಷ್ಪಾ ಎಂಬುವುದು ಗೊತ್ತಾಗಿದೆ.

ನಂತರ ಶವ ಸಾಗಿಸಲು ಬಳಸಿದ್ದ ದ್ವಿಚಕ್ರವಾಹನದ ನಂಬರ್ ಪ್ಲೇಟ್ ಆಧಾರದ ಮೇಲೆ ಆರೋಪಿಯನ್ನು ಬಂಧಿಸುವಲ್ಲಿ ಇನ್ಸ್‌ಪೆಕ್ಟರ್ ಗಿರೀಶ್‌ ನಾಯ್ಕ ಅವರ ನೇತೃತ್ವದ ತಂಡ ಯಶಸ್ವಿಯಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News