ಮುಂಬೈ, ಮಾ. 9: ಮಹಿಳೆಯರು ತಮ್ಮ ಬ್ಯಾಗ್ನಲ್ಲಿ ಲಿಪ್ಸ್ಟಿಕ್ ಜತೆಗೆ ಆತ್ಮರಕ್ಷಣೆಗೆಂದು ಚಾಕು ಹಾಗೂ ಮೆಣಸಿನ ಪುಡಿ ಇಟ್ಟುಕೊಂಡಿರಬೇಕು ಎಂದು ಮಹಾರಾಷ್ಟ್ರ ಸಚಿವ ಗುಲಾಬ್ರಾವ್ ಪಾಟೀಲ್ ಮಹಿಳೆಯರಿಗೆ ಕರೆ ನೀಡಿದ್ದಾರೆ.
ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಈ ಸಲಹೆ ನೀಡಿದ್ದಾರೆ. ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳಾದ ಎಂಎಸ್ಆರ್ಟಿಸಿ ಬಸ್ ದರವನ್ನು ಅರ್ಧದಷ್ಟು ಕಡಿತಗೊಳಿಸುವುದು.
ಲಡ್ಡಿ ಬಹಿನ್ ಯೋಜನೆ ಮತ್ತು ಬಾಲಕಿಯರಿಗೆ ಉಚಿತ ಶಿಕ್ಷಣವನ್ನು ನೀಡುವ ಬಗ್ಗೆಯೂ ಅವರು ಮಾತನಾಡಿದರು. ನಾವು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದರೂ ಸಹ, ಇಂದು ಕೆಟ್ಟ ಘಟನೆಗಳು ನಡೆಯುತ್ತಿವೆ ಎಂದು ಅವರು ಇದೇ ಸಂದರ್ಭದಲ್ಲಿ ಆತಂಕ ವ್ಯಕ್ತಪಡಿಸಿದರು.
ಬಾಳಾಠಾಕ್ರೆ ಅಂದು ಮಹಿಳೆಯರು ಲಿಪ್ಸ್ಟಿಕ್ ಜೊತೆಗೆ ಮೆಣಸಿನ ಪುಡಿ ಮತ್ತು ರಾಮಪುರಿ ಚಾಕುವನ್ನು ಒಯ್ಯಬೇಕು ಎಂದು ಹೇಳಿದ್ದಕ್ಕಾಗಿ ಪತ್ರಕರ್ತರು ಅವರನ್ನು ತೀವ್ರವಾಗಿ ಟೀಕಿಸಿದ್ದರು ಎಂದು ಅವರು ಹೇಳಿದರು.
ಆದರೆ ಇಂದಿನ ಪರಿಸ್ಥಿತಿಯೂ ಹಾಗೆಯೇ ಇದೆ. ಇಂದಿನ ಯುವತಿಯರು ತಮ್ಮ ಆತ್ಮ ರಕ್ಷಣೆಗಾಗಿ ಇದನ್ನು ಮಾಡಲೇ ಬೇಕಿದೆ ಎಂದು ಪಾಟೀಲ್ ಹೇಳಿದರು. ಫೆಬ್ರವರಿ 25 ರಂದು ಪುಣೆಯ ಎಂಎಸ್ಆರ್ಟಿಸಿ ಡಿಪೋದಲ್ಲಿ 26 ವರ್ಷದ ಯುವತಿ ಮೇಲಿನ ಅತ್ಯಾಚಾರ ಸೇರಿದಂತೆ ಮಹಿಳೆಯರ ವಿರುದ್ಧದ ಇತ್ತೀಚಿನ ಅಪರಾಧ ಪ್ರಕರಣಗಳನ್ನು ಅವರು ಉಲ್ಲೇಖಿಸಿದರು.