ಯಾದಗಿರಿ,28- ಜಿಲ್ಲೆಯ ವಡಗೇರಾ ತಾಲ್ಲೂಕಿನ ತಡಿಬಿಡಿ ಗ್ರಾಮದಿಂದ ಅನತಿ ದೂರದಲ್ಲಿ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತವಾಗಿ ಕಾರು ಚಾಲಕ ಬಸಲಿಂಗಪ್ಪ (ಸೂರಿ) (27) ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಸುಮಾರು 7 ಗಂಟೆಯ ಸಮಯದಲ್ಲಿ ಯಾದಗಿರಿ ಕಡೆಯಿಂದ ಸುರಪುರದ ಕಡೆಗೆ ಹೊರಟಿದ್ದ ಕಾರು ಖಾನಾಪೂರ ಗ್ರಾಮವನ್ನು ದಾಟಿ ತಡಿಬಿಡಿ ಗ್ರಾಮವು ಅನತಿ ದೂರದಲ್ಲಿರುವಾಗ ಎದುರಿಗೆ ಒಮ್ಮೆಲೆ ಕಾರಿಗೆ ಎಮ್ಮೆ ಅಡ್ಡ ಬಂದ ಕಾರಣ ಎಮ್ಮೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕಾರು ಚಾಲಕ ಕಾರನ್ನು ಬಲಕ್ಕೆ ತಿರುಗಿಸಿದಾಗ ಎದುರಿಗೆ ಬಂದ ಲಾರಿಗೆ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ಲಾರಿಯ ಒಳಗಡೆ ನುಗ್ಗಿ ನಜ್ಜುಗುಜ್ಜಾಗಿದೆ.
ಈ ಘಟನೆಯಲ್ಲಿ ಶಹಾಪುರ ತಾಲ್ಲೂಕಿನ ಕನ್ನೆಕೌಳುರ ಗ್ರಾಮದ ಬಸಲಿಂಗಪ್ಪ(ಸೂರಿ) ಮುಕುಂದಪ್ಪ ಪೂಜಾರಿ (27) ಎಂಬ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಮೆಹಬೂಬ ಅಲಿ ತನಿಖೆ ಕೈಗೊಂಡಿದ್ದಾರೆ.