Thursday, November 6, 2025
Home Blog

ಮತಗಳ್ಳತನ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಳ್ಳದ ಬ್ಲಾಕ್‌ ಕಾಂಗ್ರೆಸ್‌‍ ಅಧ್ಯಕ್ಷರ ವಜಾ: ಡಿಕೆಶಿ ಎಚ್ಚರಿಕೆ

ಬೆಂಗಳೂರು, ನ.6- ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಿ ಸಂಗ್ರಹ ಅಭಿಯಾನದಲ್ಲಿ ಕೆಲಸ ಮಾಡದೇ ಇರುವ ಬ್ಲಾಕ್‌ ಕಾಂಗ್ರೆಸ್‌‍ ಅಧ್ಯಕ್ಷರನ್ನು ನಿರ್ಧಾಕ್ಷಿಣ್ಯವಾಗಿ ವಜಾಗೊಳಿಸಲಾಗುವುದು ಹಾಗೂ ಶಾಸಕರ ವಿರುದ್ಧ ಕೂಡ ಹೈಕಮಾಂಡ್‌ಗೆ ವರದಿ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಸಿ ದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಗಂಭೀರವಾದ ವಿಚಾರ. ರಾಹುಲ್‌ ಗಾಂಧಿ ಅವರು ನಿನ್ನೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹರಿಯಾಣದ ಮತಗಳ್ಳತನವನ್ನು ದಾಖಲೆ ಸಹಿತ ಬಹಿರಂಗ ಪಡಿಸಿದ್ದಾರೆ. ಕರ್ನಾಟಕದಲ್ಲೂ ಮತಗಳ್ಳತನವಾಗಿರುವ ಉದಾಹರಣೆಗಳಿವೆ ಎಂದರು.

ಮತಗಳ್ಳತನದ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ರಾಜ್ಯ ಹಾಗೂ ದೇಶಾದ್ಯಂತ ಸಂಗ್ರಹಿಸಿರುವ ಸಹಿಗಳನ್ನು ಇದೇ 9 ರಂದು ದೆಹಲಿಗೆ ತರಲಾಗುವುದು. ಅದನ್ನು ಎಐಸಿಸಿ ಕ್ರೊಢೀಕರಿಸಿ ಪಕ್ಷದ ವರಿಷ್ಠರು ಚುನಾವಣಾ ಆಯೋಗಕ್ಕೆ ಸಲ್ಲಿಸಲಿದ್ದಾರೆ ಎಂದರು.
ಎಐಸಿಸಿಯ ಮುಖಂಡರು ನಿನ್ನೆ ರಾತ್ರಿ ಕೂಡ ಝೂಮ್‌ ಮೀಟಿಂಗ್‌ನಲ್ಲಿ ಸಭೆ ನಡೆಸಿ, ಮತಗಳ್ಳತನ ಪ್ರಕರಣದಲ್ಲಿ ಕೆಲಸ ಮಾಡದೇ ಇರುವವರನ್ನು ಮುಲಾಜಿಲ್ಲದೆ, ಸಮಯಕೊಡದೆ ವಜಾಗೊಳಿಸಿ ಎಂದಿದ್ದಾರೆ.

ಶಾಸಕರು, ಸಚಿವರ ಬಗ್ಗೆ ಪಕ್ಷಕ್ಕೆ ವರದಿ ನೀಡಿ ಎಂದು ಸೂಚಿಸಲಾಗಿದೆ. ಬ್ಲಾಕ್‌ ಕಾಂಗ್ರೆಸ್‌‍ ಅಧ್ಯಕ್ಷರನ್ನು ವಜಾಗೊಳಿಸಲು ನನಗೆ ಅಧಿಕಾರವಿದೆ, ಕ್ರಮತೆಗೆದುಕೊಳ್ಳುತ್ತೇನೆ. ಕೆಲವು ಶಾಸಕರು ಕೆಲಸ ಮಾಡಿಲ್ಲ, ಅವರ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಲಾಗುವುದು. ಅನಂತರವೂ ಎಚ್ಚೆತ್ತುಕೊಳ್ಳದೇ ಹೋದರೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

ಕರ್ನಾಟಕದಲ್ಲಿ ಇಲ್ಲಿವರೆಗೂ ಸುಮಾರು 80 ಲಕ್ಷ ಸಹಿ ಸಂಗ್ರಹವಾಗಿದೆ. ಚುನಾವಣಾ ಆಯೋಗ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರು ದೇವರಿದ್ದಂತೆ. ಅವರಿಗೆ ವಿಷಯ ತಿಳಿಸುತ್ತೇವೆ ಎಂದರು.ಬೆಂಗಳೂರು ಗ್ರಾಮಾಂತರ ಲೋಕಾಸಭಾ ಕ್ಷೇತ್ರಕ್ಕೆ ಒಳಪಡುವ ಕನಕಪುರ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಏನಾಗಿದೆ ಎಂದು ಗೊತ್ತಿದೆ. ಸೋಲಾಗಿರುವುದರಿಂದ ಆ ಕ್ಷೇತ್ರದ ಬಗ್ಗೆ ಚರ್ಚೆ ಮಾಡುವುದು ಸೂಕ್ತವಲ್ಲ, ಕೆಲವು ಕಡೆ ಬೂತ್‌ ಏಜೆಂಟರ್‌ಗಳೇ ಇರಲಿಲ್ಲ ಎಂದರು.
ಕರ್ನಾಟಕವಷ್ಟೇ ಅಲ್ಲ, ಮಹಾರಾಷ್ಟ್ರ, ಹರಿಯಾಣ ಬೇರೆ ಬೇರೆ ರಾಜ್ಯಗಳಲ್ಲೂ ಮತಗಳ್ಳತನವಾಗಿದೆ. ಒಂದೊಂದೇ ಕ್ಷೇತ್ರಗಳಿಂದಲೂ ಮಾಹಿತಿಯನ್ನು ತಂದುಕೊಡು ತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾವೇರಿ ನದಿ ವಿವಾದಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ಪೀಠ ಸ್ಥಾಪಿಸುವುದಾಗಿ ಸುಪ್ರೀಂಕೋರ್ಟ್‌ ಹೇಳಿದೆ. ಅದಕ್ಕಾಗಿ ಗುರುವಾರ ಸಮಯ ನೀಡಲಾಗಿದೆ. ಕರ್ನಾಟಕಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

ಸರಕಾರಿ ಸ್ವತ್ತುಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳ ಚಟವಟಿಕೆಗಳು ನಡೆಯಬೇಕಾದರೆ ಅನುಮತಿ ಪಡೆಯಬೇಕೆಂದು ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು. ಹಿಂದಿನ ಜಗದೀಶ್‌ಶೆಟ್ಟರ್‌ ಅವರ ಸರ್ಕಾರದ ಆದೇಶವನ್ನೇ ಪುನರ್‌ ಜಾರಿಗೊಳಿಸಿದ್ದೇವೆ. ಎಲ್ಲಿಯೂ ಆರ್‌ಎಸ್‌‍ಎಸ್‌‍ ಹೆಸರನ್ನು ಉಲ್ಲೇಖಿಸಿಲ್ಲ. ಈ ವಿಚಾರವಾಗಿ ಹೈಕೋರ್ಟ್‌ ತೀರ್ಪಿನಿಂದ ಸರ್ಕಾರಕ್ಕೆ ಹಿನ್ನೆಡೆಯಾಗಿದೆ ಎಂದು ಭಾವಿಸಬೇಕಿಲ್ಲ. ಕಾನೂನು ತಜ್ಞರ ತಂಡ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.

ಚಿಲ್ಲರೆ ಕೇಳುವ ಹಾಗೂ ಲಗ್ನ ಪತ್ರಿಕೆ ನೀಡುವ ನೆಪದಲ್ಲಿ ಎರಡು ಕಡೆ ದರೋಡೆ

ಬೆಂಗಳೂರು,ನ.6-ಚಿಲ್ಲರೆ ಕೇಳುವ ನೆಪದಲ್ಲಿ ಹಾಲಿನ ವ್ಯಾಪಾರಿಯ ಗಮನ ಸೆಳೆದು ಹಣ ಎಗರಿಸಿ ಪರಾರಿಯಾಗಿದ್ದ ಆರೋಪಿಯನ್ನು ಸುಬ್ರಹಣ್ಯನಗರ ಠಾಣೆ ಪೊಲೀಸರು ಬಂಧಿಸಿ 20 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ. ಮನೆಗಳಿಗೆ ಹಾಗೂ ಅಂಗಡಿಗಳಿಗೆ ಹಾಲನ್ನು ಮಾರಾಟ ಮಾಡುವ ವ್ಯಾಪಾರಿ ಹನುಮಂತಯ್ಯ ಎಂಬುವರು ಮಾರಾಟದಿಂದ ಬಂದಿದ್ದ 20 ಸಾವಿರ ಹಣವನ್ನು ಜೇಬಿನಲ್ಲಿಟ್ಟುಕೊಂಡು ಸುಬ್ರಹಣ್ಯನಗರದ ಬ್ಯಾಂಕ್‌ವೊಂದರ ಬಳಿ ಆಟೋಗಾಗಿ ಕಾಯುತ್ತಿದ್ದರು.

ಆ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ದರೋಡೆಕೋರ ಬಂದು 500 ರೂ.ಗೆ ಚಿಲ್ಲರೆ ಕೊಡಿ ಎಂದು ಕೇಳಿದ್ದಾನೆ. ಆಗ ಹಾಲಿನ ವ್ಯಾಪಾರಿ ಜೈಲಿನಲ್ಲಿದ್ದ 20 ಸಾವಿರ ಹಣವಿದ್ದ ಕಂತೆಯನ್ನು ತೆಗೆದು ಚಿಲ್ಲರೆ ಕೊಡುತ್ತಿದ್ದಾಗ, ದುಡ್ಡನ್ನು ಹೀಗೆ ಇಟ್ಟಿದ್ದೀರಲಾ ಸರಿಯಾಗಿ ಜೋಡಿಸಿಕೊಡುತ್ತೇನೆ ಎಂದು ಹೇಳಿ ನೋಟಿನ ಕಂತೆಯನ್ನು ಪಡೆದುಕೊಂಡು ಜೋಡಿಸುವ ರೀತಿ ನಟಿಸಿ ಅವರ ಗಮನ ಬೇರೆಡೆ ಸೆಳೆದು ಹಣದೊಂದಿಗೆ ಪರಾರಿಯಾಗಿದ್ದಾನೆ.
ಸಹಾಯಕ್ಕಾಗಿ ಹಾಲಿನ ವ್ಯಾಪಾರಿ ಕೂಗಿಕೊಳ್ಳುವಷ್ಟರಲ್ಲಿ ದರೋಡೆಕೋರ ಕಣರೆಯಾಗಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಘಟನಾ ಸ್ಥಳದಲ್ಲಿನ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿ ದ್ವಿಚಕ್ರ ವಾಹನದ ನಂಬರ್‌ ಪತ್ತೆಹಚ್ಚಿ ಆರೋಪಿ ಮೊಹಮದ್‌ ಸಿಖಂದರ್‌(52) ಎಂಬಾತನನ್ನು ಪಾದರಾಯನಪುರದಲ್ಲಿ ಬಂಧಿಸಿ 20 ಸಾವಿರ ಹಣವನ್ನು ವಶಕ್ಕೆ ಪಡೆದುಕೊಂಡು, ಠಾಣೆಗೆ ಕರೆದೊಯ್ದು ನೋಟೀಸ್‌‍ ಜಾರಿ ಮಾಡಿ ಕಳುಹಿಸಿದ್ದಾರೆ. ಈ ಪ್ರಕರಣವನ್ನು ಇನ್‌ಸ್ಪೆಕ್ಟರ್‌ ಸುರೇಶ್‌ ಹಾಗೂ ಸಿಬ್ಬಂದಿ ತಂಡ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.


ಲಗ್ನಪತ್ರಿಕೆ ನೀಡುವ ನೆಪದಲ್ಲಿ ಬಂದು ಚಿನ್ನಾಭರಣ ದರೋಡೆ..
ಆನೇಕಲ್‌,ನ.6- ಲಗ್ನಪತ್ರಿಕೆ ನೀಡುವ ನೆಪದಲ್ಲಿ ಬಂದ ಮಹಿಳೆಯೊಬ್ಬಳು ಒಂಟಿ ಮನೆ ಒಡತಿಗೆ ಕತ್ತಿ ಹಿಡಿದು ಬೆದರಿಸಿ, ಮತ್ತೊಬ್ಬನೊಂದಿಗೆ ಸೇರಿಕೊಂಡು ಚಿನ್ನಾಭರಣ ದರೋಡೆ ಮಾಡಿರುವ ಘಟನೆ ತಾಲ್ಲೂಕಿನ ನೆರಳೂರು ಗ್ರಾಮದಲ್ಲಿ ನಡೆದಿದೆ.

ನೆರಳೂರು ಗ್ರಾಮದ ಹೊರವಲಯದಲ್ಲಿ ವಾಸವಾಗಿರುವ ನಾಗವೇಣಿ ರವಿಕುಮಾರ್‌ ಎಂಬುವರ ಮನೆಗೆ ನಿನ್ನೆ ಮಧ್ಯಾಹ್ನ 2.30ರ ಸುಮಾರಿನಲ್ಲಿ ಅಪರಿಚಿತ ಮಹಿಳೆಯೊಬ್ಬಳು ಆಗಮಿಸಿ ಬಾಗಿಲು ಬಡಿದು, ಲಗ್ನಪತ್ರಿಕೆ ನೀಡಬೇಕು ಎಂದು ಹೇಳಿದ್ದಾಳೆ.

ದೂರದ ಸಂಬಂಧಿಗಳಿರಬಹುದು ಎಂದು ಭಾವಿಸಿದ ಮನೆಯೊಡತಿ ನಾಗವೇಣಿ ಬಾಗಿಲು ತೆರೆದು ಆಕೆಯನ್ನು ಒಳಗೆ ಆಹ್ವಾನಿಸಿದ್ದಾರೆ. ಮನೆಯೊಳಗೆ ಬಂದ ಆಕೆ ಕುರ್ಚಿಯ ಮೇಲೆ ಕುಳಿತುಕೊಂಡು ಕುಡಿಯಲು ನೀರು ಕೇಳಿದ್ದಾಳೆ. ನಾಗವೇಣಿ ಅವರು ನೀರು ತರಲು ಅಡುಗೆ ಮನೆಗೆ ತೆರಳುತ್ತಿದ್ದಾಗಲೇ, ಆಕೆ ದಿಢೀರನೆ ಎದ್ದು ಹಿಂಬಾಲಿಸಿಕೊಂಡು ಹೋಗಿ ನಾಗವೇಣಿಯ ಬಾಯಿಯನ್ನು ಭದ್ರವಾಗಿ ಮುಚ್ಚಿ ಕಿರುಚದಂತೆ ಕುತ್ತಿಗೆಗೆ ಕತ್ತಿ ಹಿಡಿದು ಬೆದರಿಸಿದ್ದಾಳೆ.

ಬಳಿಕ ಕೆಲವೇ ನಿಮಿಷಗಳಲ್ಲಿ ಮುಸುಕುಧಾರಿಯೊಬ್ಬ ಮನೆಯೊಳಗೆ ಪ್ರವೇಶಿಸಿದ್ದಾನೆ. ಆನಂತರ ಇಬ್ಬರೂ ಸೇರಿಕೊಂಡು ಮನೆಯ ಒಡತಿಯನ್ನು ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ, ಕುರ್ಚಿಯಲ್ಲಿ ಕೂರಿಸಿ ಅವರ ಕೈಗಳನ್ನು ವೇಲಿನಿಂದ ಬಿಗಿದು ಕಟ್ಟಿಹಾಕಿದ್ದಾರೆ.
ಮನೆಯಲ್ಲಿರುವ ಚಿನ್ನಾಭರಣಗಳು ಎಲ್ಲೆಲ್ಲಿವೆ ಹೇಳು. ಇಲ್ಲದಿದ್ದರೆ ನಿನ್ನನ್ನು ಕೊಲ್ಲುತ್ತೇವೆ ಎಂದು ಕುತ್ತಿಗೆಗೆ ಚಾಕು ಒತ್ತಿ ಹಿಡಿದು ಬೆದರಿಕೆ ಹಾಕಿದ್ದಾರೆ. ಜೀವಭಯದಿಂದ ಹೆದರಿದ ನಾಗವೇಣಿ ಅವರು ಆಭರಣಗಳಿರುವ ಬೀರುಗಳ (ಅಲ್ಮೇರಾಗಳ) ಸ್ಥಳ ಮತ್ತು ಬೀಗದ ಕೀಗಳಿರುವ ಜಾಗವನ್ನು ತಿಳಿಸಿದ್ದಾರೆ.

ಆಗ ಇವರಿಬ್ಬರೂ ಕೈಗೆ ಸಿಕ್ಕ ಎಲ್ಲಾ ಚಿನ್ನಾಭರಣಗಳನ್ನು ದೋಚಿ ಹೊರಬಾಗಿಲಿನ ಚಿಲುಕ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಕೆಲ ನಿಮಿಷದ ಬಳಿಕ ಕೈಗಳನ್ನು ಬಿಡಿಸಿಕೊಂಡು ಹೊರಗೆ ಹೋಗಿ ಸಹಾಯಕ್ಕೆ ಕೂಗಿಕೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಮೋಹನ್‌ಕುಮಾರ್‌ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಅತ್ತಿಬೆಲೆ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ತಂಡ ರಚನೆ:
ಆರೋಪಿಗಳ ಬಂಧನಕ್ಕಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡು ಹಲವು ಮಾಹಿತಿಗಳನ್ನು ಕಲೆ ಹಾಕುತ್ತಿವೆ.

ಪೊಲೀಸರಿಗೆ ಸವಾಲಾಗಿದ್ದ ನಟೋರಿಯಸ್‌‍ ಕಳ್ಳನ ರೋಚಕ ಕಥೆ

ಬೆಂಗಳೂರು,ನ.6- ಐಷಾರಾಮಿ ಮನೆಗಳಲ್ಲಿ ಕಳ್ಳತನ ಮಾಡಿದ ಹಣ, ಆಭರಣಗಳಲ್ಲಿ ಸ್ವಲ್ಪ ಹುಂಡಿಗೂ ಹಾಕಿ, ಮನೆಗೂ ಕೊಟ್ಟು ಉಳಿದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ ನಟೋರಿಯಸ್‌‍ ಕಳ್ಳನ ಕಥೆಯೇ ರೋಚಕ.

ಐದು ಜಿಲ್ಲೆಗಳ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್‌‍ ಕಳ್ಳ ಅಸ್ಲಾಂ ಪಾಷ 20 ವರ್ಷಗಳಿಂದಲೂ ಈ ವೃತ್ತಿಯಲ್ಲೇ ತೊಡಗಿದ್ದು, ಇದುವರೆಗೂ ಮಾಡಿರುವುದು 150ಕ್ಕೂ ಹೆಚ್ಚು ಕಳ್ಳತನ.

ಈತನ ತಂದೆತಾಯಿಗೆ 7 ಮಂದಿ ಮಕ್ಕಳು. ಆ ಪೈಕಿ ಮೂವರು ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಆರೋಪಿ ಅಸ್ಲಾಂ ಕಳ್ಳತನ ಮಾಡಿದ ಹಣ ವನ್ನು ಕುಟುಂಬಕ್ಕೂ ಸ್ವಲ್ಪ ಕೊಡುತ್ತಿದ್ದನಂತೆ. ಆರೋಪಿ ಹಗಲಿನ ಸಮಯದಲ್ಲಿ ಬೀಗ ಹಾಕಿರುವ ಮನೆಗಳನ್ನು ಹಾಗೂ ಐಷಾರಾಮಿ ಮನೆಗಳನ್ನು ಗುರುತಿಸುತ್ತಿದ್ದನು. ರಾತ್ರಿಯಾಗುತ್ತಿದ್ದಂತೆ ಆ ಮನೆಗಳಲ್ಲಿ ಕೈಚಳಕ ತೋರಿಸಿ ಹಣ, ಆಭರಣಗಳನ್ನು ಕಳ್ಳತನ ಮಾಡಿಕೊಂಡು ಬೇರೆ ಜಿಲ್ಲೆಗಳಿಗೆ ಪರಾರಿಯಾಗುತ್ತಿದ್ದನು.

ತದನಂತರದಲ್ಲಿ ಆ ಜಿಲ್ಲೆಗಳಲ್ಲಿ ಕಳ್ಳತನ ಮಾಡಿ ಮತ್ತೆ ವಾಪಸ್‌‍ ಬೆಂಗಳೂರು ಹಾಗೂ ಇನ್ನಿತರ ಕಡೆಗಳಲ್ಲಿ ತಲೆಮರೆಸಿಕೊಳ್ಳುತ್ತಿದ್ದನು. ಹಾಗಾಗಿಯೇ ಆರೋಪಿ ಜಾಗ ಬದಲಿಸುತ್ತಿದ್ದರಿಂದ ಪೊಲೀಸರಿಗೆ ಆತನನ್ನು ಬಂಧಿಸುವುದು ಸವಾಲಾಗಿತ್ತು. ಆರೋಪಿಯು ಕಳ್ಳತನ ಮಾಡಿದ ಜಿಲ್ಲೆಗಳಿಗೆ ಒಂದು ವರ್ಷ ಸುಳಿಯುತ್ತಿರಲಿಲ್ಲ. ಆರೋಪಿಯ ಮತ್ತೊಂದು ವಿಶೇಷವೆಂದರೆ ಕಳ್ಳತನ ಮಾಡಿದ ನಂತರ ಪ್ರತಿ ಬಾರಿ ಅಜೀರ್‌ ದರ್ಗಾಕ್ಕೆ ಹೋಗಿ ಸ್ವಲ್ಪ ಹಣ, ಆಭರಣಗಳನ್ನು ಹುಂಡಿಗೆ ಹಾಕಿ ಪ್ರಾರ್ಥನೆ ಸಲ್ಲಿಸಿ ಉಳಿದ ಹಣದಲ್ಲಿ ಮೋಜು-ಮಸ್ತಿಗಾಗಿ ಗೋವಾಗೆ ಹೋಗುತ್ತಿದ್ದನಂತೆ.

ವಿದ್ಯಾರಣ್ಯಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಮನೆಯ ಕಿಟಕಿಯಲ್ಲಿ ಕೈ ತೂರಿಸಿ ಮಹಿಳೆಯ ಸರ ಅಪಹರಣ ಮಾಡಿದ್ದ ಪ್ರಕರಣದಲ್ಲಿ ಆರೋಪಿ ಸಿಕ್ಕಿಬಿದ್ದಿದ್ದು, ಈತನ ವಿಚಾರಣೆ ವೇಳೆ ಹಲವು ಮಾಹಿತಿಗಳು ಬೆಳಕಿಗೆ ಬಂದಿವೆ. ಆರೋಪಿಯು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳ ಪೊಲೀಸರಿಗೆ ಬೇಕಾಗಿದ್ದನು. ಇದೀಗ ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.

ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ವಿದೇಶಿ ಡ್ರಗ್ಸ್ ಜಾಲ..!

ಬೆಂಗಳೂರು, ನ.6- ಪೊಲೀಸರು ಎಷ್ಟೇ ಹದ್ದಿನ ಕಣ್ಣಿಟ್ಟರೂ ಸಹ ಮಾದಕ ವಸ್ತುಗಳ ಸಾಗಣೆ ಮತ್ತು ಮಾರಾಟ ನಿರಂತರವಾಗಿ ರಾಜಧಾನಿ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ನಡೆಯುತ್ತಲೇ ಇದೆ. ಕರ್ನಾಟಕ ರಾಜ್ಯವನ್ನು ಮಾದಕ ವಸ್ತುಗಳಿಂದ ಮುಕ್ತ ಮಾಡಲು ಬೆಂಗಳೂರು ನಗರ ಪೊಲೀಸರು ಸೇರಿದಂತೆ ರಾಜ್ಯ ಪೊಲೀಸರು ಪಣ ತೊಟ್ಟಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್‌‍ ಮಹಾ ನಿರ್ದೇಶಕರ ದರ್ಜೆಯ ಅಧಿಕಾರಿಗಳ ನೇತೃತ್ವದಲ್ಲಿ ಮಾದಕ ವಸ್ತು ನಿಗ್ರಹ ಪಡೆಯನ್ನು ಸಹ ಸರ್ಕಾರ ರಚಿಸಿ ದಂಧೆಕೋರರ ವಿರುದ್ಧ
ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ವಿವಿಧ ಮಾದರಿಯ ಮಾದಕ ವಸ್ತುಗಳು ಬೆಂಗಳೂರು ನಗರಕ್ಕೆ ನೆರೆಯ ರಾಜ್ಯಗಳಲ್ಲದೆ ವಿದೇಶಗಳಿಂದಲೂ ಬರುತ್ತಿವೆ. ಇವುಗಳ ಸಾಗಾಟ ಮತ್ತು ಮಾರಾಟ ಬಹಳ ಗೌಪ್ಯವಾಗಿರುತ್ತದೆ.

ಬೆಂಗಳೂರು ನಗರ ಪೊಲೀಸರು ಈ ವರ್ಷದ ಜನವರಿಯಿಂದ ಅಕ್ಟೋಬರ್‌ ಮೊದಲನೆ ವಾರದವರೆಗೂ 711 ಪ್ರಕರಣಗಳಲ್ಲಿ ಒಟ್ಟು 1048 ಮಂದಿ ಆರೋಪಿಗಳನ್ನು ಬಂಧಿಸಿ 81.21 ಕೋಟಿ ರೂ. ಬೆಲೆಯ 1486.58 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳಲ್ಲಿ 35 ಮಂದಿ ವಿದೇಶಿಯರು ಸೇರಿದ್ದಾರೆ. ಇವರುಗಳಲ್ಲಿ ನೈಜೀರಿಯಾ ಪ್ರಜೆಗಳು ಹೆಚ್ಚು ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ವಿದ್ಯಾಭ್ಯಾಸ, ಪ್ರವಾಸ, ವೈದ್ಯಕೀಯ ಹೀಗೆ ಮುಂತಾದ ವೀಸಾಗಳ ಮೇಲೆ ಬೆಂಗಳೂರು ನಗರಕ್ಕೆ ಬಂದ ಕೆಲವು ವಿದೇಶಿಗರು ವೀಸಾ ಅವಧಿ ಮುಗಿದಿದ್ದರೂ ಸಹ ತಮ ತಮ ದೇಶಗಳಿಗೆ ತೆರಳದೆ ಇಲ್ಲಿ ಉಳಿದುಕೊಳ್ಳುತ್ತಾರೆ. ಈ ರೀತಿ ಅಕ್ರಮವಾಗಿ ನಗರದಲ್ಲಿ ನೆಲೆಸಿರುವ ಕೆಲವು ವಿದೇಶಿಗರು ಮಾದಕ ವಸ್ತು ಸಾಗಾಟ ಮತ್ತು ಮಾರಾಟ ದಂಧೆಯಲ್ಲಿ ತೊಡಗಿಕೊಂಡು ಸುಲಭವಾಗಿ ಹಣ ಸಂಪಾದಿಸಿ ವಿಲಾಸಿ ಜೀವನ ನಡೆಸುತ್ತಿದ್ದಾರೆ.

ಇಂತಹ ಬಹುತೇಕ ಆರೋಪಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲೇ ಬಾಡಿಗೆ ಮನೆಗಳನ್ನು ಮಾಡಿಕೊಂಡು ವಾಸಿಸುತ್ತಿದ್ದಾರೆ. ಬೆಂಗಳೂರು ನಗರ ಪೊಲೀಸರು ಮಾಹಿತಿ ಸಂಗ್ರಹಿಸಿ ಆಗಾಗ್ಗೆ ಇಂತಹವರುಗಳ ಮನೆಗಳ ಮೇಲೆ ದಾಳಿ ಮಾಡಿ ಬಂಧಿಸುತ್ತಿದ್ದಾರೆ. ಪಾಸ್‌‍ಪೋರ್ಟ್‌, ವೀಸಾ ಹಾಗೂ ಇನ್ನಿತರ ದಾಖಲೆಗಳ ಪರಿಶೀಲನೆ, ವೀಸಾ ಅವಧಿ ಮುಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಆದರೂ ಸಹ ವಿದೇಶಿ ಡ್ರಗ್‌್ಸ ದಂಧೆಕೋರರ ಸಂಖ್ಯೆ ಕಡಿಮೆಯಾಗುತ್ತಿಲ್ಲ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿಗೆ ವಿದೇಶಗಳಿಂದ ನಗರ ಮತ್ತು ರಾಜ್ಯಕ್ಕೆ ಬರುವ ಎಲ್ಲಾ ಪಾರ್ಸಲ್‌ಗಳ ಮೇಲೂ ಸಹ ಬೆಂಗಳೂರು ನಗರ ಪೊಲೀಸರು ನಿಗಾ ವಹಿಸುತ್ತಿದ್ದಾರೆ.

ಬಸ್‌‍, ರೈಲ್ವೆ ಹಾಗೂ ವಿಮಾನ ನಿಲ್ದಾಣಗಳಲ್ಲೂ ಸಹ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಸಹ ವಿದೇಶಗಳಿಂದ ನಗರಕ್ಕೆ ಮಾದಕ ವಸ್ತುಗಳು ಬರುತ್ತಿರುವುದು ನಿಂತಿಲ್ಲ. ರಾಜ್ಯ ಸರ್ಕಾರದ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಕೇಂದ್ರ ಗೃಹ ಮತ್ತು ವಿದೇಶಾಂಗ ಖಾತೆ ಸಚಿವರುಗಳನ್ನು ಭೇಟಿ ಮಾಡಿ ವಿದೇಶಗಳಿಂದ ಭಾರತ ದೇಶಕ್ಕೆ ನಿರಂತರವಾಗಿ ಬರುತ್ತಿರುವ ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ತಡೆಗಟ್ಟುವಂತೆ ಮನವಿ ಮಾಡಿ ಒತ್ತಾಯಿಸಬೇಕು.

ವೀಸಾ ಅವಧಿ ಮುಗಿದು ಅಕ್ರಮವಾಗಿ ನಗರದಲ್ಲಿ ನೆಲೆಸಿರುವ ವಿದೇಶಿಗರನ್ನು ಎಫ್‌ಆರ್‌ಆರ್‌ಒ ಅಧಿಕಾರಿಗಳು ಜತೆ ಸೇರಿ ಬೆಂಗಳೂರು ನಗರ ಪೊಲೀಸರು ಪತ್ತೆ ಹಚ್ಚಿ ಹೊರಹಾಕದಿದ್ದರೆ ರಾಜಧಾನಿ ಬೆಂಗಳೂರು ಮಾದಕ ವಸ್ತು ರಾಜಧಾನಿಯಾಗುತ್ತದೆ. ಎಚ್ಚರ..! ಎಚ್ಚರ..!

ಮತ್ತಷ್ಟು ತೀವ್ರಗೊಂಡ ರೈತರ ಪ್ರತಿಭಟನೆ, 8ನೇ ದಿನಕ್ಕೆ ಕಾಲಿಟ್ಟ ಕಿಚ್ಚು

ಬೆಂಗಳೂರು,ನ.6-ಅತ್ತ ಹಾವು ಸಾಯಲಿಲ್ಲ, ಇತ್ತ ಕೋಲು ಮುರಿಯಲಿಲ್ಲ ಎಂಬಂತಾಗಿದೆ ಕಬ್ಬುಬೆಳೆಗಾರರ ಹೋರಾಟ. ಸರ್ಕಾರ ತಮ ಬೆಳೆಗೆ ಸೂಕ್ತವಾದ ಬೆಲೆ ನಿಗಧಿ ಮಾಡುವಂತೆ ನಡೆಸುತ್ತಿರುವ ರೈತರ ಹೋರಾಟ 8ನೇ ದಿನಕ್ಕೆ ಕಾಲಿಟ್ಟಿದ್ದರೂ, ಸರ್ಕಾರ ಮಾತ್ರ ಕೇಂದ್ರದ ಕಡೆ ಕೈ ತೋರಿಸಿ ತನ್ನ ಜವಬ್ದಾರಿಯಿಂದ ನುಣಿಚಿಕೊಳ್ಳುವ ಚಾಣಕ್ಷತನ ಮೆರದಿದೆ.

ಪ್ರತಿ ಟನ್‌ ಕಬ್ಬಿಗೆ 3,500 ರೂ. ನಿಗಧಿ ಮಾಡಬೇಕೆಂದು ಪಟ್ಟು ಹಿಡಿದಿರುವ ಕಬ್ಬು ಬೆಳೆಗಾರರು, ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದು, 8ನೇ ದಿನಕ್ಕೆ ಕಾಲಿಟ್ಟಿದೆ.

ಇದರ ನಡುವೆಯೇ ಸಚಿವ ಸಂಪುಟ ಸಭೆ ಇಂದು ನಡೆಯಲಿದ್ದು, ಸರ್ಕಾರ ಬೆಲೆ ನಿಗಧಿ ಮಾಡುವ ಸಾಧ್ಯತೆ ಇದೆ. ಸಂಜೆಯೊಳಗೆ ರೈತರ ಬೇಡಿಕೆಗೆ ಸರ್ಕಾರ ಒಪ್ಪಿಕೊಳ್ಳದಿದ್ದರೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.

ರೈತರ ಕಿಚ್ಚು ಹೆಚ್ಚಾಗುತ್ತಿದ್ದಂತೆಯೇ ಸರ್ಕಾರ ಹಿರಿಯ ಸಚಿವ ಹೆಚ್‌.ಕೆ.ಪಾಟೀಲ್‌ರನ್ನು ಸಂಧಾನಕ್ಕೆ ಕಳುಹಿಸಿದ್ದು ಮಾತುಕತೆ ವಿಫಲವಾಗಿದೆ. ಹಲವು ಸಂಘಟನೆಗಳು ರೈತರ ಹೋರಾಟಕ್ಕೆ ಬೆಂಬಲ ನೀಡಿವೆ. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಭಟನೆಯ ಆಖಾಡಕ್ಕಿಳಿದ ನಂತರ ರೈತರ ಹೋರಾಟ ತೀವ್ರಗತಿ ಪಡೆದುಕೊಂಡಿದೆ.

ಬೆಳಗಾವಿ ಹಾಗೂ ವಿಜಯಪುರ ಕಬ್ಬು ಹೋರಾಟಗಾರರು ಸಚಿವರ ಮನವಿಗೆ ಮಣೆ ಹಾಕದೇ ಸಂಜೆವರೆಗಿನ ಅಂತಿಮ ಗಡುವು ಕೊಟ್ಟಿದ್ದಾರೆ. ಸಂಜೆಯೊಳಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವಿಗೆ ಬರದಿದ್ದರೆ ಪಂಜಾಬ್‌ ಮಾದರಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಿಂದ ಆರಂಭವಾದ ಹೋರಾಟ ರಾಜ್ಯದ ಎಲ್ಲ ಭಾಗಗಳಿಗೂ ವ್ಯಾಪಿಸಿದೆ.

ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ರೈತರು ರಸ್ತೆ ತಡೆ, ಧರಣಿ, ರ್ಯಾಲಿ ಮತ್ತು ಪ್ರತಿಭಟನೆಗಳ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬೆಳಗಾವಿಯ ಪ್ರಮುಖ ಹೆದ್ದಾರಿಗಳು ಹಾಗೂ ನಗರ ಪ್ರದೇಶಗಳಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಪ್ರತಿಭಟನೆಗಳ ತೀವ್ರತೆ ಹೆಚ್ಚುತ್ತಿರುವಂತೆ ಹಾಲು, ಹಣ್ಣು, ತರಕಾರಿ ಪೂರೈಕೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಸಣ್ಣಪುಟ್ಟ ವ್ಯಾಪಾರ ಮಳಿಗೆಗಳು ಮುಚ್ಚಲ್ಪಟ್ಟಿದ್ದು, ಹಳ್ಳಿಗಳಿಂದ ನಗರಗಳಿಗೆ ಸರಕು ಸಾಗಣೆ ನಿಂತು ಹೋಗಿದೆ. ಹಲವೆಡೆ ಸಭೆ, ಮದುವೆ, ಸಾರ್ವಜನಿಕ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ.

ಕಳೆದ ಮೂರು ದಿನಗಳಿಂದ ಅನೇಕ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಓದು ಹಾಳಾಗುತ್ತಿರುವಂತೆಯೇ, ದಿನಗೂಲಿ ಆದಾಯದ ಮೇಲೆ ಬದುಕುವ ವರ್ಗಕ್ಕೆ ಸಂಕಷ್ಟ ಎದುರಾಗಿದೆ. ರೈತರು ತಮ ಬೇಡಿಕೆಗಳ ಬಗ್ಗೆ ಸರ್ಕಾರದಿಂದ ಸ್ಪಷ್ಟ ಪ್ರತಿಕ್ರಿಯೆ ಬಯಸುತ್ತಿದ್ದರೂ, ಸರ್ಕಾರ ಮೌನ ಕಾಯ್ದುಕೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಹೋರಾಟಗಾರರು ಹಿಂದೆ ಸರಿಯುವ ಸೂಚನೆ ಇಲ್ಲದಿರುವುದರಿಂದ ರಾಜ್ಯದಲ್ಲಿ ಆರ್ಥಿಕ ಅಸ್ತವ್ಯಸ್ತತೆ ಹೆಚ್ಚುವ ಸಾಧ್ಯತೆಗಳಿವೆ.

ಈ ಹೋರಾಟ ಮುಂದುವರಿದರೆ ರಾಜ್ಯದ ಕೃಷಿ ವಲಯದ ಜೊತೆಗೆ ಸಾರಿಗೆ, ವಾಣಿಜ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೂ ತೀವ್ರ ನಷ್ಟ ಸಂಭವಿಸಬಹುದು. ಸರ್ಕಾರ ತಕ್ಷಣ ಮಧ್ಯಸ್ಥಿಕೆ ವಹಿಸಿ ರೈತರ ಬೇಡಿಕೆಗಳಿಗೆ ತುರ್ತು ಪರಿಹಾರ ನೀಡದಿದ್ದರೆ, ಆರ್ಥಿಕ ಸಂಕಷ್ಟ ರಾಜ್ಯದ ಎಲ್ಲ ವರ್ಗಗಳಿಗೂ ತಟ್ಟುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಸರ್ಕಾರ ಮತ್ತು ರೈತರ ಮಧ್ಯೆ ಮಾತುಕತೆ ನಡೆಯದಿದ್ದರೆ, ಹೋರಾಟ ಇನ್ನಷ್ಟು ಉಗ್ರಗೊಳ್ಳುವ ಲಕ್ಷಣಗಳಿವೆ. ಜನಜೀವನ ಈಗಾಗಲೇ ಅಸ್ತವ್ಯಸ್ತಗೊಂಡಿದೆ. ಒಟ್ಟಾರೆಯಾಗಿ ಈ ಬಿಕ್ಕಟ್ಟಿನ ಹೊರೆ ಯಾರು ನಿಭಾಯಿಸಲಿದ್ದಾರೆ? ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಈ ಕುರಿತು ಮಾತನಾಡಿರುವ ರೈತ ಮುಖಂಡ ಶಶಿಕಾಂತ ಗುರೂಜಿ, ಕಳೆದ ಏಳು ದಿನಗಳಿಂದ ನಮ ಹೋರಾಟದ ಫಲವಾಗಿ ಇಂದು ಸಚಿವರು ಕಬ್ಬಿಗೆ ಸೂಕ್ತವಾದ ಬೆಲೆ ನಿಗದಿಪಡಿಸುತ್ತಾರೆಂದು ತಿಳಿದುಬಂದಿದೆ. ಆದರೆ ಸಚಿವರು ಎಲ್ಲಾ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತೇನೆ, ನಾನು ಕಬ್ಬಿಗೆ ಬೆಲೆ ನಿಗಧಿಪಡಿಸುವುದಿಲ್ಲ ಎಂದು ಹೇಳಿದ್ದಾರೆ.

ಗುರುವಾರ ರಾತ್ರಿ 8 ಗಂಟೆವರೆಗೆ ಸರ್ಕಾರಕ್ಕೆ ಕಾಲಾವಕಾಶ ನೀಡಿದ್ದೇವೆ. ಒಂದು ವೇಳೆ ನಮಗೆ ಸೂಕ್ತ ಬೆಲೆ ನೀಡದಿದ್ದರೆ, ಶುಕ್ರವಾರ ರಾಜ್ಯಾದ್ಯಂತ ಸುಮಾರು 50 ಲಕ್ಷ ಕಬ್ಬು ಬೆಳೆಗಾರರು ಆಯಾ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್‌ ಮಾಡಿ ಹೋರಾಟ ಮುಂದುವರಿಸುತ್ತೇವೆ. ನಮ ಹೋರಾಟ ಮುಂದುವರಿಯುತ್ತದೆ. ನಾವು ಕಬ್ಬಿಗೆ ಸೂಕ್ತ ಬೆಲೆಯನ್ನು ಪಡೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಸಕ್ಕರೆ ಕಾರ್ಖಾನೆಗಳಿಂದ 3,500 ರೂ. ದರ ನಿಗಧಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಕಳೆದ ಭಾನುವಾರ ಪ್ರತಿಭಟನಾ ಸ್ಥಳಕ್ಕಾಗಮಿಸಿದ್ದ ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಎಸ್‌‍ಪಿ ಅವರು ನೇತೃತ್ವದಲ್ಲಿ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಈ ಸಂಧಾನ ಸಭೆ ವಿಫಲವಾಗಿತ್ತು.

ಸರ್ಕಾರದಿಂದ ರೈತರ ನಿರ್ಲಕ್ಷ್ಯ : ಬಿ.ವೈ ವಿಜಯೇಂದ್ರ ಆಕ್ರೋಶ

ಬೆಂಗಳೂರು.ನ.6- ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೂ ರೈತಪರವಾದ ಒಂದೇ ಒಂದು ಯೋಜನೆಯನ್ನೂ ರೂಪಿಸಲಿಲ್ಲ. ನೆರೆ ಸಂಕಷ್ಟಿತರಿಗೆ ಪರಿಹಾರ ನೀಡಲಿಲ್ಲ, ಕನಿಷ್ಠಪಕ್ಷ ರೈತರ ಸಂಕಷ್ಟಗಳನ್ನೂ ಆಲಿಸಲಿಲ್ಲ, ರೈತರನ್ನು ವಿಪರೀತ ತಾತ್ಸಾರದಿಂದ ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಳಿ ನಡೆಸಿದ್ದಾರೆ.

ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ರೈತರೆಂದರೆ ಕಾಂಗ್ರೆಸ್‌‍ ಸರ್ಕಾರಕ್ಕೆ ಅಸಡ್ಡೆಯಾಗಿದೆ. ಸರ್ಕಾರ ರೈತರನ್ನು ಅತ್ಯಂತ ನಿಕೃಷ್ಟವಾಗಿ ಕಾಣುತ್ತಿರುವ ಧೋರಣೆಯಿಂದಾಗಿ ರೈತ ಸಮುದಾಯ ಹತಾಶೆಯ ಹಂಚಿಕೆ ತಲುಪಿದೆ. ರೈತರ ಬದುಕನ್ನು ಹಸನು ಮಾಡುತ್ತೇವೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್‌‍ ಸರ್ಕಾರ, ಅಧಿಕಾರಕ್ಕೆ ಬಂದ ಬಳಿಕ ತಮ ಕುರ್ಚಿ ಕಿತ್ತಾಟದಲ್ಲಿ ಮುಳುಗಿ ಆಡಳಿತ ವ್ಯವಸ್ಥೆಯನ್ನೇ ತುಕ್ಕು ಹಿಡಿಸಿ, ಭ್ರಷ್ಟಾಚಾರದ ಕೂಪವಾಗಿಸಿದ ಪರಿಣಾಮ ರೈತರು ಕಚೇರಿಗಳಿಗೆ ನಿತ್ಯವೂ ಅಲೆಯುವ ದುಸ್ಥಿತಿ ಬಂದೊದಗಿದೆ ಎಂದು ಕಿಡಿಕಾರಿದ್ದಾರೆ.

ಸರ್ಕಾರಿ ಕಚೇರಿಗಳಿಗೆ ನಿತ್ಯವೂ ಅಲೆದು ತಮ ಕೆಲಸಗಳಾಗದೇ ಮನನೊಂದು ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಆತಹತ್ಯೆಗೆ ಯತ್ನಿಸಿ ಸಾವಿಗೀಡಾಗಿರುವ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಯ ರೈತ ಮಂಜೇಗೌಡರ ಸಾವು ಆಘಾತ ತಂದಿದೆ. ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನಲ್ಲಿ ಬೆಳೆ ಹಾನಿ ಪರಿಹಾರ ಸಿಗದಿದ್ದಕ್ಕೆ ರೈತ ಸಿದ್ದನಗೌಡ ಹಿರೇಗೌಡ್ರ ಆತಹತ್ಯೆಗೆ ಯತ್ನಿಸಿ ಸಾವುಬದುಕಿನ ನಡುವೆ ಹೋರಾಡುತ್ತಿರುವುದು ದುರ್ದೈವದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ವಿದ್ಯಾನಿಧಿ, ರೈತಶಕ್ತಿ ಯೋಜನೆ, ಕಿಸಾನ್‌ ಸಮಾನ್‌ ನಿಧಿಯನ್ನು ನಿಲ್ಲಿಸಿದೆ. 25 ಸಾವಿರಕ್ಕೆ ಸಿಗುತ್ತಿದ್ದ ಟಿಸಿ ಸಂಪರ್ಕ ಇಂದು ಕನಿಷ್ಠ 3 ಲಕ್ಷ ಬೇಕಾಗಿದೆ. ಇದಕ್ಕಾಗಿ ರೈತರು ಸಾಲ ಮಾಡಬೇಕಾದ ಪರಿಸ್ಥಿತಿಯನ್ನು ಸರ್ಕಾರ ತಂದೊಡ್ಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕೂಡಲೇ ಆತಹತ್ಯೆಗೀಡಾದ ರೈತ ಮಂಜೇಗೌಡ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಿ, ಗದಗ ಜಿಲ್ಲೆಯ ರೈತ ಸಿದ್ದನಗೌಡ ಹಿರೇಗೌಡ್ರರ ಬೆಳೆ ಪರಿಹಾರ ನೀಡಿ, ಅವರ ಚಿಕಿತ್ಸೆಗೆ ಸೂಕ್ತ ನೆರವು ಕಲ್ಪಿಸಲಿ. ಈ ರೀತಿಯ ಘಟನೆಗಳು ಮರುಕಳಿಸದಂತೆ ಅಧಿಕಾರಿ ವರ್ಗಕ್ಕೆ ಸರ್ಕಾರ ಬಿಸಿ ಮುಟ್ಟಿಸುವ ಕೆಲಸಕ್ಕೆ ಮುಂದಾಗಲಿ ಎಂದು ವಿಜಯೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

RSS ಚಟುವಟಿಕೆ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದ ಸರ್ಕಾರಕ್ಕೆ ಮತ್ತೆ ಮುಖಭಂಗ

ಬೆಂಗಳೂರು,ನ.6- ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌‍ಎಸ್‌‍)ವನ್ನು ಗುರಿಯಾಗಿಟ್ಟು ಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ನಡೆಸಲು ಸರ್ಕಾರದ ಪೂರ್ವಾನುಮತಿ ಕಡ್ಡಾಯ ಎಂಬ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ತಡೆಯಾಜ್ಞೆಯನ್ನು ದ್ವಿಸದಸ್ಯ ಪೀಠ ಎತ್ತಿ ಹಿಡಿದಿದ್ದು, ಸರ್ಕಾರಕ್ಕೆ ಮತ್ತೆ ಮುಖಭಂಗವಾಗಿದೆ.
ತಡೆಯಾಜ್ಞೆ ತೆರವು ಮಾಡಬೇಕಾದರೆ ಧಾರವಾಡ ಪೀಠದ ಮುಂದೆ ಹೋಗುವಂತೆ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಧಾರವಾಡ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲನವಿಯನ್ನು ದ್ವಿಸದಸ್ಯಪೀಠ ವಜಾಗೊಳಿಸಿದೆ. ಇದರಿಂದ ಸರ್ಕಾರಕ್ಕೆ 2ನೇ ಬಾರಿ ಕಾನೂನು ಹೋರಾಟದಲ್ಲಿ ಭಾರೀ ಹಿನ್ನಡೆಯಾಗಿದೆ.

ವಾದ-ಪ್ರತಿವಾದವನ್ನು ಆಲಿಸಿ ಕಾಯ್ದಿರಿಸಿದ ತೀರ್ಪನ್ನು ಪ್ರಕಟಿಸಿದ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್‌‍ ಜಿ ಪಂಡಿತ್‌ ಮತ್ತು ಕೆ ಬಿ ಗೀತಾ ಅವರನ್ನೊಳಗೊಂಡ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿದು ಸರ್ಕಾರದ ಮೇಲನವಿ ಅರ್ಜಿಯನ್ನು ವಜಾಗೊಳಿಸಿತು. ರಸ್ತೆ, ಉದ್ಯಾನ, ಆಟದ ಮೈದಾನ ಸೇರಿ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕೂ ಅಧಿಕ ಮಂದಿ ಗುಂಪು ಸೇರಿದರೆ ಅದನ್ನು ಅಕ್ರಮ ಕೂಟವೆಂದು ಪರಿಗಣಿಸಬೇಕೇ ಎಂದು ಪ್ರಶ್ನೆ ಮಾಡಿದೆ.

ಆರ್‌ಎಸ್‌‍ಎಸ್‌‍ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 2025ರ ಅಕ್ಟೋಬರ್‌ 18ರಂದು ಆದೇಶ ಹೊರಡಿಸಿತ್ತು. ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಸರ್ಕಾರವು ತನ್ನ ಆಸ್ತಿ ಮತ್ತು ಸಾರ್ವಜನಿಕರ ಹಕ್ಕು ರಕ್ಷಣೆ ಮಾಡಲು 10ಕ್ಕೂ ಅಧಿಕ ಮಂದಿ ರಸ್ತೆ, ಮೈದಾನದಲ್ಲಿ ಸಮಾವೇಶ/ರ್ಯಾಲಿ ನಡೆಸುವುದನ್ನು ಕಾನೂನುಬಾಹಿರ ಎಂದಿದ್ದು, ಭಾರತೀಯ ನ್ಯಾಯ ಸಂಹಿತೆ ಅಡಿ ಅಪರಾಧ ಕೃತ್ಯ ಎಂದು ಆದೇಶ ಮಾಡಿದೆ. ಇದು ಸಕಾರಾತಕ ಆದೇಶ ಎಂದು ಸರ್ಕಾರದ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದರು.

ಉದ್ಯಾನ, ಆಟದ ಮೈದಾನಕ್ಕೆ ಸ್ಪಷ್ಟ ವ್ಯಾಖ್ಯಾನವಿದೆ. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ರಸ್ತೆಯಲ್ಲಿ ಮೆರವಣಿಗೆ/ರ್ಯಾಲಿ/ಸಮಾವೇಶ ಮಾಡುವುದಕ್ಕೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದರಿಂದ ಸಾರ್ವಜನಿಕರಿಗೆ ಸರಾಗವಾಗಿ ಓಡಾಡಲು ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಆದೇಶ ಮಾಡಿದೆ. ಇದರಲ್ಲಿ ತಪ್ಪೇನಿದೆ? ಎಂದು ಸಮರ್ಥಿಸಿಕೊಂಡಿದ್ದರು.

ಯಾವುದೇ ಚಟುವಟಿಕೆ ನಡೆಸಲು ಅನುಮತಿ ಕೋರಿದರೆ ಮೂರು ದಿನದಲ್ಲಿ ನೀಡಲಾಗುವುದು. ಈ ಸಂಬಂಧ ಸರ್ಕಾರವು ಮಾರ್ಗಸೂಚಿ ರೂಪಿಸಿದೆ. ಸರ್ಕಾರದ ಆಸ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಆಕ್ಷೇಪಿಸಲಾದ ಆದೇಶ ಮಾಡಲಾಗಿದೆ ಎಂದು ಹೇಳಿದ್ದರು.
ಅರ್ಜಿದಾರ ಪರವಾಗಿ ಹಿರಿಯ ವಕೀಲ ಅಶೋಕ್‌ ಹಾರ್ನಹಳ್ಳಿ, ಆಟದ ಮೈದಾನ, ಸಾರ್ವಜನಿಕ ಸ್ಥಳಗಳು ತನಗೆ ಸೇರಿದ್ದು, ಅವುಗಳನ್ನು ಜನರು ಬಳಕೆ ಮಾಡಲು ಹಕ್ಕು ಹೊಂದಿಲ್ಲ ಎಂದು ಸರ್ಕಾರ ಭಾವಿಸಿದೆ. ಇದು ಸರಿಯಾದ ರೀತಿಯ ಕಾನೂನಿನ ವ್ಯಾಖ್ಯಾನವಲ್ಲ. ಏಕಸದಸ್ಯ ಪೀಠದ ಮುಂದೆ ಮಧ್ಯಂತರ ಆದೇಶ ತೆರವು ಕೋರುವುದಿಲ್ಲ, ಅದಕ್ಕಾಗಿ ಮೇಲನವಿ ಸಲ್ಲಿಕೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಇದಕ್ಕೆ ನಮ ಆಕ್ಷೇಪವಿದೆ ಎಂದು ಹೇಳಿದ್ದರು.

ಗುಂಪೊಂದು ಮೈದಾನದಲ್ಲಿ ಕ್ರಿಕೆಟ್‌ ಆಡಬೇಕೆಂದರೆ ಸರ್ಕಾರದ ಬಳಿ ದಿನಂಪ್ರತಿ ಅನುಮತಿ ಪಡೆಯಬೇಕೆ? ಇದರಲ್ಲಿ ಸಕಾರಾತಕವಾದ ವಿಚಾರವೇನಿದೆ? ಸಂವಿಧಾನದ 19(ಬಿ) ವಿಧಿಯಡಿ ಶಾಂತಿಯುತವಾಗಿ ಜೊತೆಗೂಡುವುದನ್ನು ನಿರ್ಬಂಧಿಸಲಾಗದು. ಹೀಗಾಗಿ, ಇದಕ್ಕಿಂತ ಸ್ವೇಚ್ಛೆಯ ಆದೇಶ ಇನ್ನೊಂದಿಲ್ಲ ಎಂದು ಆಕ್ಷೇಪಿಸಿದ್ದರು.

ಪ್ರತಿಯೊಂದು ಮೈದಾನ, ರಸ್ತೆ ನಮಗೆ ಸೇರಿರುವುದರಿಂದ ಅದನ್ನು ನಿರ್ಬಂಧಿಸುವ ಅಧಿಕಾರ ನಮಗೆ ಇದೆ ಎಂದು ಸರ್ಕಾರ ಹೇಳಲಾಗದು. ಉದ್ಯಾನಕ್ಕೆ ಹೋಗುವವರಿಗೆ ಅನುಮತಿ ಪಡೆಯಬೇಕು ಎಂದು ಸರ್ಕಾರ ಹೇಳಲಾಗದು. ಪೂರ್ವಾನುಮತಿ ಇಲ್ಲದೆ ಆಟದ ಮೈದಾನದಲ್ಲಿ ಕ್ರಿಕೆಟ್‌ ಆಡುವಂತಹ ದಿನನಿತ್ಯದ ಚಟುವಟಿಕೆಗಳನ್ನು ಇದು ಪರಿಣಾಮಕಾರಿಯಾಗಿ ಅಪರಾಧೀಕರಿಸುತ್ತದೆ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸುವ ವಿಚಾರ ನಗರ ಸ್ಥಳೀಯ ಸಂಸ್ಥೆಗಳಿಗೆ ಬರುತ್ತದೆ ಎಂದು ವಾದಿಸಿದರು.

ಅಕ್ಟೋಬರ್‌ 28ರಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಸಾರ್ವಜನಿಕ ಸ್ಥಳಗಳಲ್ಲಿ ಹತ್ತಕ್ಕೂ ಅಧಿಕ ಮಂದಿ ಗುಂಪು ಸೇರುವುದನ್ನು ನಿರ್ಬಂಧಿಸಿ ಸರ್ಕಾರ ಹೊರಡಿಸಿರುವ ಆದೇಶವು ಮೇಲ್ನೋಟಕ್ಕೆ ಸಂವಿಧಾನದ 19(1)(ಎ) (ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಹಾಗೂ 19(1)(ಬಿ) (ಶಸಾ್ತ್ರಸ್ತ್ರರಹಿತವಾಗಿ, ಶಾಂತಿಯುತವಾಗಿ ಒಟ್ಟುಗೂಡುವ) ವಿಧಿ ಅಡಿಯಲ್ಲಿ ಸಾರ್ವಜನಿಕರಿಗೆ ದೊರೆತಿರುವ ಹಕ್ಕುಗಳನ್ನು ಕಸಿದುಕೊಳ್ಳುವಂತಿವೆ. ಸಂವಿಧಾನ ಪ್ರದತ್ತ ಹಕ್ಕನ್ನು ಕಾನೂನು ಜಾರಿಗೊಳಿಸುವ ಮೂಲಕ ಕಸಿದುಕೊಳ್ಳಬಹುದೇ ಹೊರತು ಸರ್ಕಾರಿ ಆದೇಶ ಹೊರಡಿಸುವ ಮೂಲಕವಲ್ಲ ಎಂದು ಮಧ್ಯಂತರ ಆದೇಶ ಮಾಡಿತ್ತು.

ಸರ್ಕಾರದ ಆದೇಶ ಪ್ರಾಥಮಿಕ ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅ.28ರಂದು ಹೊರಡಿಸಿದ ಮಧ್ಯಂತರ ಆದೇಶದಲ್ಲಿ ಏಕಸದಸ್ಯ ನ್ಯಾಯಾಧೀಶರು ಹೇಳಿದ್ದರು. ಸರ್ಕಾರದ ಆದೇಶ ಉಲ್ಲಂಘಿಸಿ ನಡೆಯುವ ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆಯನ್ನು ಭಾರತೀಯ ನ್ಯಾಯ ಸಂಹಿತಾ ನಿಬಂಧನೆಗಳಡಿ ಕಾನೂನುಬಾಹಿರ ಸಭೆ ಎಂದು ಪರಿಗಣಿಸಲಾಗುತ್ತದೆ ಎಂದು ಸರ್ಕಾರ ಆದೇಶದಲ್ಲಿ ಹೇಳಿತ್ತು.

ಕೆಂಪೇಗೌಡ ಬಸ್‌‍ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್‌ ಭೇಟಿ

ಬೆಂಗಳೂರು, ನ.6-ಕೆಂಪೇಗೌಡ ಬಸ್‌‍ ನಿಲ್ದಾಣ(ಕೆಎಸ್‌‍ಆರ್‌ಟಿಸಿ) ಕ್ಕೆ ಇಂದು ದಿಢೀರ್‌ ಭೇಟಿ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ(Ramalinga Reddy) ಅವರು, ಕಾಮಗಾರಿಗಳನ್ನು ಪರಿಶೀಲಿಸಿದರು. ಕೆಂಪೇಗೌಡ ಬಸ್‌‍ ನಿಲ್ದಾಣದಲ್ಲಿ ವಾಹನಗಳ ನಿಲುಗಡೆಗಾಗಿ ಮೀಸಲಿರುವ ಪ್ರದೇಶವು ಸಮತಟ್ಟಾಗಿರದೇ, ಮಳೆ ಬಂದ ಸಂದರ್ಭದಲ್ಲಿ ನೀರು ನಿಂತು ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಪ್ರಯಾಣಿಕರು ಸಚಿವರ ಗಮನಕ್ಕೆ ತಂದಿದ್ದರು.

ಈ ಬಗ್ಗೆ ಕೂಡಲೇ ಕಾಮಗಾರಿ ಕೈಗೆತ್ತಿಕೊಂಡು ಬಸ್‌‍ಗಳ ಸುಗಮ ಸಂಚಾರಕ್ಕೆ ಕ್ರಮ ತೆಗೆದುಕೊಳ್ಳಲು ಸಚಿವರು ಸೂಚಿಸಿದ್ದರು. ಈ ಸಂಬಂಧ ತೆಗೆದುಕೊಂಡಿರುವ ಕ್ರಮವನ್ನು ಪರಿಶೀಲಿಸಲು ಬಸ್‌‍ನಿಲ್ದಾಣಕ್ಕೆ ದಿಢೀರ್‌ ಭೇಟಿ ನೀಡಿ ಪರಾಮರ್ಶೆ ನಡೆಸಿದ್ದಾರೆ.

ಮೊದಲ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಿ, ಮುಂದಿನ ಹಂತದಲ್ಲಿ ಇನ್ನೆರಡು ಸ್ಥಳಗಳಲ್ಲಿ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಬಸ್‌‍ ನಿಲ್ದಾಣದ ಎಲ್ಲಾ ಟರ್ಮಿನಲ್‌ಗಳ ಪರಿವೀಕ್ಷಣೆ ನಡೆಸಿದ ಅವರು, ಸಾರ್ವಜನಿಕ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸುವುದರ ಜೊತೆಗೆ ವಾಣಿಜ್ಯ ಮಳಿಗೆಗಳು ಖಾಲಿ ಉಳಿಯದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಾರ್ವಜನಿಕ ಪ್ರಯಾಣಿಕರಿಗೆ ಹಾಗೂ ಚಾಲನಾ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್‌ ದೀಪದ ಹಾಗೂ ಶೌಚಾಲಯದ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚಿಸಿದರು. ಅಲ್ಲದೇ, ಬಿಎಂಟಿಸಿ ಬಸ್‌‍ ನಿಲ್ದಾಣಕ್ಕೂ ಭೇಟಿ ನೀಡಿ, ಕಟ್ಟಡದ ಮೇಲೆ ಬೆಳೆದಿರುವ ಗಿಡಗಳನ್ನು ತೆಗಿಸಿ, ಸ್ವಚ್ಛಗೊಳಿಸಲು ಸೂಚಿಸಿದರು.
ಕೆಎಸ್‌‍ಆರ್‌ಟಿಸಿ ಹಿರಿಯ ಅಧಿಕಾರಿಗಳು, ಕೇಂದ್ರ ಕಚೇರಿಯ ಇಲಾಖಾ ಮುಖ್ಯಸ್ಥರು ಕೆಂಪೇಗೌಡ ಬಸ್‌‍ ನಿಲ್ದಾಣ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಹುಲ್‌ಗಾಂಧಿ ಹಾಕುತ್ತಿರುವ ಬಾಂಬ್‌ಗಳು ಠುಸ್ ಆಗೊತ್ತಿರೋದೇಕೆ..?

ಬೆಂಗಳೂರು,ನ.11- ತಮ ಪುನರಾವರ್ತಿತ ವೈಫಲ್ಯಗಳ ನಂತರ, ರಫೇಲ್‌ ಹಗರಣ ಮತ್ತು ಚೌಕಿದಾರ್‌ ಚೋರ್‌ ಹೈ ನಿರೂಪಣೆಯಿಂದ ಜಾತಿ ರಾಜಕೀಯ ಮತ್ತು ಸುಳ್ಳು ಪ್ರಚಾರದವರೆಗೆ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಈಗ ಭಾರತದ ಯುವಕರನ್ನು ತಮ ರಾಜಕೀಯ ಸಾಧನವಾಗಿ ಬಳಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಭಾರತದ ಯುವ ಪೀಳಿಗೆಯು ವಿಭಜಕ, ಆಧಾರರಹಿತ ಮತ್ತು ದೂರದೃಷ್ಟಿಯಿಲ್ಲದ ರಾಜಕೀಯವನ್ನು ಮೀರಿ ಸಾಗಿದೆ. ನವಭಾರತದ ಯುವಕರು ಕಾರ್ಯಕ್ಷಮತೆ, ಪ್ರಗತಿ ಮತ್ತು ದೇಶಭಕ್ತಿಯಲ್ಲಿ ನಂಬುತ್ತಾರೆ, ಪಿತೂರಿ ಸಿದ್ಧಾಂತಗಳಲ್ಲಿ ಅಲ್ಲ. ರಾಹುಲ್‌ ಗಾಂಧಿಯವರ 100 ಚುನಾವಣಾ ಸೋಲುಗಳ ದಾಖಲೆಯು ಭಾರತದ ಜನರನ್ನು ಮತ್ತು ವಿಶೇಷವಾಗಿ ಯುವಕರನ್ನು ಇನ್ನು ಮುಂದೆ ತಪ್ಪುದಾರಿಗೆ ಎಳೆಯಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ರಾಹುಲ್‌ ಗಾಂಧಿಯವರು ಮಹೇವಪುರ ಮತ್ತು ಆಳಂದ ಮಾತ್ರವಲ್ಲದೆ ರಾಜ್ಯಾದ್ಯಂತ ಮತ್ತು ರಾಷ್ಟ್ರಮಟ್ಟದಲ್ಲೂ ಇಡೀ ರಾಜ್ಯ ಚುನಾವಣೆಯನ್ನು ಕದ್ದಿದ್ದಾರೆ ಎಂದು ಹೇಳುವ ಮೂಲಕ ಮತ್ತೊಮೆ ರಾಷ್ಟ್ರವನ್ನು ದಾರಿತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಇಂತಹ ಹೇಳಿಕೆಗಳು ಆಧಾರರಹಿತವಾಗಿರುವುದು ಮಾತ್ರವಲ್ಲದೆ ಭಾರತದ ಪ್ರಜಾಸತ್ತಾತಕ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುವ ಗುರಿ ಹೊಂದಿದೆ.

ಮತದಾರರ ಪಟ್ಟಿಯಲ್ಲಿ ವೃದ್ಧೆಯ ಹೆಸರು 220 ಬಾರಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ ಅವರು ಉಲ್ಲೇಖಿಸಿದ ಮತದಾರರ ಪಟ್ಟಿಯು ಮುಲಾನಾ ಅಸೆಂಬ್ಲಿ ಕ್ಷೇತ್ರಕ್ಕೆ ಸೇರಿದೆ. ಇದನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌‍ ಸ್ವತಃ ಗೆದ್ದಿದೆ. ಇದು ಸುಳ್ಳು ಮತ್ತು ವಾಸ್ತವಿಕ ನಿಖರತೆಯ ಕೊರತೆಯನ್ನು ಸ್ಪಷ್ಟವಾಗಿ ಬಹಿರಂಗಪಡಿಸುತ್ತದೆ.

ತಮ ಮೂರನೇ ಹೇಳಿಕೆಯಲ್ಲಿ, ಬ್ಯಾಲೆಟ್‌ ಪೇಪರ್‌ಗಳಲ್ಲಿ ಕಾಂಗ್ರೆಸ್‌‍ ಮುನ್ನಡೆ ಸಾಧಿಸುತ್ತಿದೆ. ಆದರೆ ಅಂತಿಮ ಫಲಿತಾಂಶದಲ್ಲಿ ಸೋತಿದೆ ಎಂದು ಆರೋಪಿಸಿದ್ದಾರೆ. ಆದಾಗ್ಯೂ ಹರಿಯಾಣದಲ್ಲಿ ಬ್ಯಾಲೆಟ್‌ ಪೇಪರ್‌ಗಳು ಒಟ್ಟು ಮತಗಳ ಶೇ.0.57ರಷ್ಟು ಮಾತ್ರವೇ ಎಂಬುದು ಸತ್ಯ. ರಾಹುಲ್‌ ಗಾಂಧಿಗೆ, ಇವಿಎಂಗಳ ಮೂಲಕ ತಮ ಹಕ್ಕನ್ನು ಚಲಾಯಿಸಿದ ಉಳಿದ 99.43% ಮತದಾರರಿಗಿಂತ 0.57% ಅಭಿಪ್ರಾಯವು ಹೆಚ್ಚು ಮಹತ್ವದ್ದಾಗಿದೆ.

2015ರಲ್ಲಿ ಬಿಹಾರ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಇದೇ ರೀತಿಯ ಪರಿಸ್ಥಿತಿಯು ಸಂಭವಿಸಿತು. ಮತಪತ್ರ ಎಣಿಕೆಯ ಸಮಯದಲ್ಲಿ ಬಿಜೆಪಿ ಮತ್ತು ಎನ್‌ಡಿಎ ಮುನ್ನಡೆ ಸಾಧಿಸಿತು, ಆದರೆ ಅಂತಿಮವಾಗಿ ಮಹಾಘಟಬಂಧನ್‌ ಅನುಕೂಲಕರ ಅಂತರದಿಂದ ಗೆದ್ದಿತು. ಆಗ ವೋಟ್‌ ಚೋರಿ ಎಂಬ ಯಾವುದೇ ಆರೋಪಗಳನ್ನು ಮಾಡಲಿಲ್ಲ.

2024ರ ಅಕ್ಟೋಬರ್‌ 6ರಂದು ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಅವರು ನೀಡಿದ ಹೇಳಿಕೆಯನ್ನು ರಾಹುಲ್‌ ಗಾಂಧಿ ತಿರುಚಿದ್ದಾರೆ. ಅವರು ವ್ಯವಸ್ಥಾ ಪದವನ್ನು ಸಿಎಂ ಬಳಸಿರುವುದನ್ನು ವೋಟ್‌ ಚೋರಿ ಎಂದು ಉಲ್ಲೇಖಿಸಿದ್ದಾರೆ. ವಾಸ್ತವದಲ್ಲಿ ಚುನಾವಣೋತ್ತರ ಮೈತ್ರಿಯ ಸಂದರ್ಭದಲ್ಲಿ ಸಿಎಂ ಮಾತನಾಡುತ್ತಿರುವುದು ಅವರ ಪತ್ರಿಕಾಗೋಷ್ಠಿಯ ಪೂರ್ಣ, ಎಡಿಟ್‌ ಮಾಡದ ವೀಡಿಯೋದಿಂದ ಸ್ಪಷ್ಟವಾಗಿದೆ.

ವಿಪರ್ಯಾಸವೆಂದರೆ 2019 ಮತ್ತು 2024ರ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಯಾವುದೇ ವಾಸ್ತವಿಕ ಆಧಾರವಿಲ್ಲದೆ ಇಂತಹ ಹೇಳಿಕೆಗಳನ್ನು ನೀಡುತ್ತಾ, ವಾರಣಾಸಿಯಿಂದ ಪ್ರಧಾನಿ ಸೋಲುತ್ತಾರೆ ಎಂದು ಸ್ವತಃ ರಾಹುಲ್‌ ಗಾಂಧಿ ಅವರೇ ಆಗಾಗ ಹೇಳಿಕೊಂಡಿದ್ದಾರೆ.
ಹರಿಯಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌‍ ನಡುವಿನ ಒಟ್ಟು ಮತ ಹಂಚಿಕೆಯಲ್ಲಿ ಕೇವಲ 1.18 ಲಕ್ಷ ಮತಗಳ ವ್ಯತ್ಯಾಸವಿದ್ದು, ಒಟ್ಟು 22,779 ಮತಗಳಿಂದ ಕಾಂಗ್ರೆಸ್‌‍ ಎಂಟು ಸ್ಥಾನಗಳನ್ನು ಕಳೆದುಕೊಂಡಿದೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಅವರು ಇದನ್ನು ಅವ್ಯವಹಾರದ ಪುರಾವೆಯಾಗಿ ಪ್ರಸ್ತುತಪಡಿಸಿದರು. ಆದಾಗ್ಯೂ ನಿಕಟ ಅಂತರಗಳು ಪ್ರತಿ ಚುನಾವಣೆಯ ಭಾಗವಾಗಿದೆ ಎಂಬುದು ಸತ್ಯ. ಹರಿಯಾಣದ ಹತ್ತು ಕ್ಷೇತ್ರಗಳ ವಿಶ್ಲೇಷಣೆಯು ಕಡಿಮೆ ಅಂತರದಲ್ಲಿ ಕಾಂಗ್ರೆಸ್‌‍ 6ರಲ್ಲಿ ಗೆದ್ದಿದ್ದರೆ, ಬಿಜೆಪಿ 3ರಲ್ಲಿ ಮಾತ್ರ ಗೆದ್ದಿದೆ. ಆದ್ದರಿಂದ ಕಿರಿದಾದ ಗೆಲುವುಗಳು ಯಾವುದೇ ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ.

ಜಿ20 ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ : ಟ್ರಂಪ್‌

ನ್ಯೂಯಾರ್ಕ್‌,ನ.6- ಈ ತಿಂಗಳ ಕೊನೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಜಿ.20 ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ (DonaldTrump) ಹೇಳಿದ್ದಾರೆ.

ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ದಕ್ಷಿಣ ಆಫ್ರಿಕಾ, ನ. 22 ಮತ್ತು 23 ರಂದು ಜೋಹಾನ್‌್ಸಬರ್ಗ್‌ನಲ್ಲಿ ಶೃಂಗಸಭೆಯನ್ನು ಆಯೋಜಿಸಿದ್ದು,ಇದೇ ಮೊದಲ ಬಾರಿಗೆ ಜಿ.20 ನಾಯಕರ ಸಭೆ ಆಫ್ರಿಕನ್‌ ನೆಲದಲ್ಲಿ ನಡೆಯಲಿದೆ.ಫ್ಲೋರಿಡಾದಲ್ಲಿ ನಡೆದ ಅಮೇರಿಕಾ ಬಿಸಿನೆಸ್‌‍ ಫೋರಂ ಸಮೇಳನದಲ್ಲಿ ಅವರು ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ.

ನಾನು ಹೋಗುತ್ತಿಲ್ಲ.ಏಕೆಂದರೆ ಅಲ್ಲಿ ಎಲ್ಲವೂ ಸೆರಿಯಿಲ್ಲ ನಮ ದೇಶವನ್ನು ಪ್ರತಿನಿಧಿಸುವುದಿಲ್ಲ ಎಂದು ಟ್ರಂಪ್‌ ಹೇಳಿದರು. ಡಿಸೆಂಬರ್‌.1ರಂದು ದಕ್ಷಿಣ ಆಫ್ರಿಕಾದಿಂದ ಜಿ20 ಅಧ್ಯಕ್ಷತೆಯನ್ನು ಅಮೆರಿಕ ವಹಿಸಿಕೊಳ್ಳಲಿದ್ದು, ನವೆಂಬರ್‌ 30, 2026 ರವರೆಗೆ ಗುಂಪಿನ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ. ಟ್ರಂಪ್‌ ಈ ಹಿಂದೆ 2026 ರ ಜಿ.20 ಶೃಂಗಸಭೆಯನ್ನು ಮಿಯಾಮಿ ಬಳಿಯ ತಮ ಗಾಲ್‌್ಫ ಕ್ಲಬ್‌ನಲ್ಲಿ ಆಯೋಜಿಸುವುದಾಗಿ ಹೇಳಿದ್ದರು.

ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್‌‍, ಕೆನಡಾ, ಚೀನಾ, ಫ್ರಾನ್ಸ್ , ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್‌, ದಕ್ಷಿಣ ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ ಮತ್ತು ಯುಎಸ್‌‍ ಹಾಗೂ ಯುರೋಪಿಯನ್‌ ಒಕ್ಕೂಟ ಮತ್ತು ಆಫ್ರಿಕನ್‌ ಒಕ್ಕೂಟ ಸೇರಿ ಜಿ.20ಯಲ್ಲಿ 19 ದೇಶಗಳಿವೆ.

ಟ್ರಂಪ್‌ ಕಮ್ಯುನಿಸ್ಟ್‌ ಎಂದು ನ್ಯೂಯಾರ್ಕ್‌ ಸಿಟಿ ಮೇಯರ್‌ ಜೋಹ್ರಾನ್‌ ಮಮ್ದಾನಿಯನ್ನು ಟೀಕಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಕಮ್ಯುನಿಸ್ಟ್‌ ದಬ್ಬಾಳಿಕೆಯಿಂದ ಪಲಾಯನ ಮಾಡುವ ಜನರಿಗೆ ಮಿಯಾಮಿ ಬಹಳ ಹಿಂದಿನಿಂದಲೂ ಸ್ವರ್ಗವಾಗಿದೆ ಎಂದು ಹೇಳಿದರು