Sunday, April 28, 2024
Homeರಾಜ್ಯಶ್ರೀಘ್ರದಲ್ಲೇ 1500 ಪಿಎಸ್‍ಐ ಹುದ್ದೆಗಳ ನೇಮಕಾತಿ: ಪರಮೇಶ್ವರ್

ಶ್ರೀಘ್ರದಲ್ಲೇ 1500 ಪಿಎಸ್‍ಐ ಹುದ್ದೆಗಳ ನೇಮಕಾತಿ: ಪರಮೇಶ್ವರ್

ಬೆಂಗಳೂರು, ನ.18- ರಾಜ್ಯದಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್‍ಪೇಕ್ಟರ್ ಹುದ್ದೆಗಳಿಗೆ 1500 ಮಂದಿಯನ್ನು ನೇಮಕಾತಿ ಮಾಡಿಕೊಳ್ಳಬೇಕಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮರು ಪರೀಕ್ಷೆ ಹಾಗೂ ಹೊಸ ಪರೀಕ್ಷೆಗಳನ್ನು ನಡೆಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು 545 ಪಿಎಸ್‍ಐ ಹುದ್ದೆಗಳ ನೇಮಕಾತಿಗೆ ನಡೆದಿದ್ದ ಪರೀಕ್ಷೆ ಸಂಬಂಧಿಸಿದ ತಗಾದೆ ನ್ಯಾಯಾಲಯಲ್ಲಿತ್ತು. ಸರ್ಕಾರ ಮರು ಪರೀಕ್ಷೆ ಅವಕಾಶ ನೀಡುವಂತೆ ಸರ್ಕಾರ ವಾದ ಮಂಡಿಸಿತ್ತು. ಹಿಂದಿನ ಸರ್ಕಾರವೂ ಮರು ಪರೀಕ್ಷೆಗೆ ಅಧಿಸೂಚನೆ ಹೊರಡಿಸಿತ್ತು. ಕೆಲ ಅಭ್ಯರ್ಥಿಗಳು ಅದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಕೊನೆಗೆ ಹೈಕೋರ್ಟ್ ತಡೆಯಾಜ್ಞೆ ತೆರವು ಮಾಡಿ, ಸ್ವತಂತ್ರ ಸಂಸ್ಥೆಯಿಂದ ಪರೀಕ್ಷೆ ನಡೆಸಿ ಎಂದು ಸೂಚನೆ ನೀಡಿದೆ. ಪೊಲೀಸ್ ಇಲಾಖೆಯಿಂದ ಪರೀಕ್ಷೆ ನಡೆಸಬಾರದು ಎಂದು ಹೇಳಿದೆ ಎಂದರು.

ರಾಜ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಸ್ವತಂತ್ರ ಸಂಸ್ಥೆಗಳಿವೆ. ನ್ಯಾಯಾಲಯದ ಆದೇಶ ದೊರೆತ ನಾಲ್ಕೈದು ದಿನಗಳಲ್ಲೇ ಸರ್ಕಾರ ಅಧಿಸೂಚನೆ ಹೊರಡಿಸಿ, ಕರ್ನಾಟಕ ಪರೀಕ್ಷಾ ಪ್ರಾಕಾರದಿಂದ ಪಿಎಸ್‍ಐ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಲು ನಿರ್ಧರಿಸಿದೆ ಎಂದರು.

ವಿದ್ಯಾರ್ಥಿಗಳ ಭವಿಷ್ಯ ಹಾಗೂ ಇಲಾಖೆಯ ಕಾರ್ಯಧ್ಯಕ್ಷತೆ ದೃಷ್ಟಿಯಿಂದ ಶೀಘ್ರವೇ ಮರು ಪರೀಕ್ಷೆಯಾಗಬೇಕಿದೆ. ವಿಳಂಬ ಮಾಡಲು ಸಾಧ್ಯವಿಲ್ಲ. ಬೇರೆ ಇಲಾಖೆಗಳಂತೆ ನೇಮಕಾತಿಯಾದ ತಕ್ಷಣವೇ ಕೆಲಸಕ್ಕೆ ನಿಯೋಜನೆ ಮಾಡಲು ಪೊಲೀಸ್ ಇಲಾಖೆಯಲ್ಲಿ ಸಾಧ್ಯವಿಲ್ಲ. ಒಂದು ವರ್ಷ ತರಬೇತಿ ನೀಡಬೇಕಿದೆ. ಮೈಸೂರಿನಲ್ಲಿರುವ ನಮ್ಮ ತರಬೇತಿ ಸಂಸ್ಥೆಯ ಸಾಮಥ್ರ್ಯ 300 ರಿಂದ 400 ಮಂದಿಯಷ್ಟೆ ,ಅದನ್ನು ಹೆಚ್ಚಿಸಬೇಕಿದೆ. ನೇಮಕಾತಿಯ ಜೊತೆಗೆ ತರಬೇತಿಯ ಸಾಮಥ್ರ್ಯವನ್ನು ಗಮನದಲ್ಲಿ ಇರಿಸಿಕೊಳ್ಳಬೇಕಿದೆ ಎಂದು ಹೇಳಿದರು.

ನಮ್ಮ ಪೊಲೀಸ್‍ಠಾಣೆಗಳಲ್ಲಿ ಪಿಎಸ್‍ಐಗಳೇ ಇಲ್ಲವಾಗಿ, ಸಾವಿರಾರು ಹುದ್ದೆಗಳು ಖಾಲಿ ಇವೆ. ನಿಯಮ 32ನ್ನು ಜಾರಿ ಮಾಡಿ 600 ಪಿಎಸ್‍ಐಗಳಿಗೆ ಇತ್ತೀಚೆಗೆ ಬಡ್ತಿ ನೀಡಿದ್ದೇವೆ. ಅವರು ಈಗ ಪಿಎಸ್‍ಐಗಳಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಈಗಾಗಲೇ 400 ಹುದ್ದೆಗಳು ಈಗಾಗಲೇ ಖಾಲಿಯಾಗಿವೆ. ಜೊತೆಯಲ್ಲಿ 600 ಹೆಚ್ಚುವರಿ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಹಾಗೂ ಗೃಹ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಒಂದು ಸಾವಿರ ಹಾಗೂ ಹಿಂದಿನ 540 ಸೇರಿ 1540 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕಿದೆ. ಅಭ್ಯರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೇಮಕಾತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಇಂದು ಸಭೆ ನಡೆಸಿ ಈ ನಿಟ್ಟಿನಲ್ಲಿ ಚರ್ಚೆ ಮಾಡಲಾಗುವುದು ಎಂದರು.

ಪೊಲೀಸ್ ಇನ್ ಸ್ಪೆಕ್ಟರ್ ವರ್ಗಾವಣೆ ಸ್ವಾಭಾವಿಕ. ಅದಕ್ಕಾಗಿ ಇಲಾಖೆಯಲ್ಲಿ ಮಂಡಳಿ ರಚನೆ ಮಾಡಲಾಗಿದೆ. ಅನೇಕ ಕಾರಣದಿಂದ ವರ್ಗಾವಣೆಗಳಾಗುತ್ತವೆ. ಪೊಲೀಸ್ ಇಲಾಖೆ ಬೇರೆ ಇಲಾಖೆಯಂತಲ್ಲ, ಠಾಣೆಗಳಲ್ಲಿ ಅಧಿಕಾರಿಗಳ ಹುದ್ದೆಗಳನ್ನು ಹೆಚ್ಚು ಸಮಯ ಖಾಲಿ ಇಡಲಾಗಲ್ಲ. ಠಾಣೆಯಲ್ಲಿ ಇನ್ ಸ್ಪೆಕ್ಟರ್ ಇಲ್ಲ ಅಂದರೆ ಮುಂದಿನ ವರ್ಷ ವರ್ಗಾವಣೆ ಸಮಯ ಬರುವವರೆಗೂ ಕಾಯಲು ಆಗಲ್ಲ, ಅದಕ್ಕಾಗಿ ಮಂಡಳಿಯ ಮೂಲಕ ಕಾಲ ಕಾಲಕ್ಕೆ ವರ್ಗಾವಣೆ ಮಾಡುತ್ತಲೇ ಇರುತ್ತೇವೆ. ಕೆಲವೊಮ್ಮೆ ಕಾರ್ಯಧ್ಯಕ್ಷತೆ ಕೊರತೆಯಾದಾಗಲೂ ಬದಲಾವಣೆ ಮಾಡುತ್ತೇವೆ ಎಂದರು.

ಮೈಸೂರಿನ ವಿ.ವಿ.ಪುರಂ ಠಾಣೆಗೆ ವಿವೇಕಾನಂದ ಎಂಬ ಅಧಿಕಾರಿ ವರ್ಗಾವಣೆಯಾಗಿರುವುದು, ಯತೀಂದ್ರ ಅವರ ವಿಡಿಯೋದಲ್ಲಿ ವಿವೇಕಾನಂದ ಹೆಸರು ಹೇಳಿರುವುದು ಕಾಕತಾಳೀಯ ಇರಬಹುದು. ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ನನ್ನ ಮೇಲೆ ಯಾರು ಒತ್ತಡ ಹೇರಿಲ್ಲ. ಯತೀಂದ್ರ ನನ್ನ ಬಳಿ ಯಾವ ಹೆಸರನ್ನು ಹೇಳಿಲ್ಲ, ಪೊಲೀಸ್ ಅಧಿಕಾರಿಗಳ ವರ್ಗಾವಣೆಗೂ ಯತೀಂದ್ರ ಅವರ ವಿಡಿಯೋದಲ್ಲಿನ ಸಂಭಾಷಣೆಗೂ ಸಂಬಂಧ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ವರ್ಗಾವಣೆಯಲ್ಲಿ ದಂಧೆ ನಡೆಯುತ್ತಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಡಿಸೆಂಬರ್ 4 ರಂದು ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಸದನದಲ್ಲಿ ಇದರ ಬಗ್ಗೆ ಚರ್ಚೆ ಮಾಡಲಿ. ಹಣ ತೆಗೆದುಕೊಂಡಿರುವ ಬಗ್ಗೆ ದಾಖಲೆ ಇದ್ದರೆ ಪ್ರಸ್ತಾಪ ಮಾಡಲಿ. ನಾವು ಸಮರ್ಥವಾಗಿ ಉತ್ತರ ನೀಡುತ್ತೇವೆ, ಅವರಿಗೆ ಸಮಾಧಾನ ಆಗುವ ರೀತಿಯಲ್ಲೇ ಉತ್ತರ ನೀಡುತ್ತೇವೆ, ನಾವೇನು ಉದ್ವೇಗಕ್ಕೆ ಒಳಗಾಗುವುದಿಲ್ಲ ಎಂದರು ಹೇಳಿದರು.

ವಿಶ್ವಕಪ್ ಫೈನಲ್: ಪ್ರಧಾನಿ ಮೋದಿ, ಅಮಿತಾಬ್ ಬಚ್ಚನ್, ರಜನಿಕಾಂತ್ ಸೇರಿ ಕ್ರಿಕೆಟ್ ದಿಗ್ಗಜರು ಪಂದ್ಯ ವೀಕ್ಷಣೆ

ಬಿಜೆಪಿಯಿಂದ ವಿರೋಧ ಪಕ್ಷ ನಾಯಕನಾಗಿ ಆಯ್ಕೆಯಾದ ಆರ್.ಅಶೋಕ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಪಕ್ಷ ದೊಡ್ಡ ಜವಾಬ್ದಾರಿ ನೀಡಿದೆ. ಸರ್ಕಾರಕ್ಕೆ ಸಲಹೆ ಕೊಟ್ಟು, ಎಚ್ಚರಿಸುವ ಕೆಲಸ ಮಾಡಲಿ, ವಿರೋಧ ಪಕ್ಷದ ನಾಯಕರಾದ ಮೇಲೆ ಟೀಕೆ ಮಾಡುವುದು, ಸರ್ಕಾರದ ತಪ್ಪು ಹೇಳುವುದು ಸ್ವಾಭಾವಿಕ. ಸತ್ಯಾಸತ್ಯತೆ ಅರಿತು ಮಾತನಾಡಲಿ.

ಸರ್ಕಾರ ಬಿಳಿಸುತ್ತೇನೆ ಎಂದು ಹೇಳುತ್ತಿದ್ದಾರೆ, ಕಾಂಗ್ರೆಸ್‍ಗೆ ಜನ 135 ಶಾಸಕರನ್ನು ಆರಿಸಿಕಳಿಸಿದ್ದಾರೆ. ನಮಗೆ ಅಧಿಕಾರ ಕೊಟ್ಟಿದ್ದಾರೆ, ಸರ್ಕಾರ ಬಿಳಿಸಲು ಇವರ್ಯಾರು. ಬೇರೆ ರೀತಿಯಲ್ಲಿ ಹೇಳಿಕೆ ಕೊಟ್ಟರೆ ಅದಕ್ಕೆ ಅರ್ಥ ಇರಲ್ಲ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್‍ನ ಹಿರಿಯ ಶಾಸಕ ಜಿ.ಟಿ.ದೇವೇಗೌಡರನ್ನು ಭೇಟಿ ಮಾಡಿರುವ ಕುರಿತಂತೆ ಮಾತನಾಡಿದ ಅವರು, ಇತರ ಪಕ್ಷಗಳ ನಾಯಕರು ಆಸಕ್ತಿ ತೋರಿಸಿದರೆ ನಾವು ಕರೆಯುತ್ತೇವೆ. ನಮ್ಮ ಪಕ್ಷದತ್ತ ಆಸಕ್ತಿ ತೋರಿಸಿದರೆ ಕರೆಯುವುದರಲ್ಲಿ ತಪ್ಪೇನಿದೆ. ಇಬ್ಬರು ನಾಯಕರ ಭೇಟಿ ಸೌಜನ್ಯದಷ್ಟೆ, ಅಲ್ಲಿ ಏನು ಚರ್ಚೆಯಾಗಿದೆ ಎಂದು ಮಾಹಿತಿ ಇಲ್ಲ. ಸರಿಯಾದ ವಿವರ ಇಲ್ಲದೆ ಪಕ್ಷ ಸೇರ್ಪಡೆಗೆ ಚರ್ಚೆಯಾಗಿದೆ ಎಂದರೆ ಹೇಗೆ ಎಂದರು.

ಬಿಜೆಪಿ ಮಾಜಿ ಶಾಸಕ ವಿ.ಸೋಮಣ್ಣ ಮೊನ್ನೆ ನಮ್ಮ ಮನೆಗೆ ಬಂದಿದ್ದರು, ಅವರ ಮನೆಯಲ್ಲಿ ಕಾರ್ಯಕ್ರಮವೊಂದಿದೆ, ಅದಕ್ಕೆ ನಾನು ಹೋಗುತ್ತೇನೆ. ಅದನ್ನು ಪಕ್ಷಕ್ಕೆ ಕರೆಯಲು ಹೋಗಿದ್ದರು, ಕಳುಹಿಸಲು ಹೋಗಿದ್ದರು ಎಂದರೆ ಹೇಗೆ ಎಂದು ಪ್ರಶ್ನಿಸಿದರು.

RELATED ARTICLES

Latest News