Saturday, July 27, 2024
Homeರಾಜ್ಯನೇಹಾ ಹತ್ಯೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಪಾಗಲ್ ಪ್ರೇಮಿಯಿಂದ ಮತ್ತೊಬ್ಬ ಯುವತಿ ಹತ್ಯೆ

ನೇಹಾ ಹತ್ಯೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಪಾಗಲ್ ಪ್ರೇಮಿಯಿಂದ ಮತ್ತೊಬ್ಬ ಯುವತಿ ಹತ್ಯೆ

ಹುಬ್ಬಳ್ಳಿ, ಮೇ 15- ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ಯುವತಿಯ ಭೀಕರ ಕೊಲೆ ನಡೆದಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಇಂದು ನಸುಕಿನ ಜಾವ ಮನೆಗೆ ನುಗ್ಗಿ ಯುವತಿಗೆ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆಗೈದ ಘಟನೆ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವೀರಾಪುರ ಓಣಿ ಕರಿಯಮನ ಗುಡಿ ನಿವಾಸಿ ಅಂಜಲಿ ಮೋಹನ ಅಂಬಿಗೇರ (21) ಕೊಲೆಯಾದ ಯುವತಿ. ಯಲ್ಲಾಪುರ ಓಣಿಯ ಗಿರೀಶ ಅಲಿಯಾಸ್ ವಿಶ್ವ ಎಸ್. ಸಾವಂತ ಎಂಬಾತ ಕೊಲೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿ.ಅಂಜಲಿಯು ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿ ಗಿರೀಶ ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಆಕೆಯ ಮನೆ ಬಳಿ ಹೋಗಿ ಬಾಗಿಲು ಬಡಿದಿದ್ದಾನೆ.

ಪರಿಚಯಸ್ಥರು ಬಂದಿರಬಹುದೆಂದು ತಿಳಿದು ಅಂಜಲಿಯೇ ಹೋಗಿ ಬಾಗಿಲು ತೆಗೆಯುತ್ತಿದ್ದಂತೆ ಏಕಾಏಕಿ ಆಕೆಯನ್ನು ಮನೆಯ ಒಳಗೆ ತಳ್ಳಿಕೊಂಡು ಹೋಗಿ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ. ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ ಬಿಡದೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.ಆತನ ತಾಯಿ ಮನೆಗೆಲಸ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಸುದ್ದಿ ತಿಳಿದು ಬೆಂಡಿಗೇರಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಹಂತಕನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಧಮ್ಕಿ ಹಾಕಿದ್ದ ಆರೋಪಿ:
ಮೈಸೂರಿಗೆ ಬರದಿದ್ದರೆ ನಿನ್ನನ್ನು ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳಿಗೆ ಆದ ಹಾಗೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಆರೋಪಿ ಗಿರೀಶ್ ಇತ್ತೀಚೆಗೆ ಅಂಜಲಿಗೆ ಧಮ್ಕಿ ಹಾಕಿದ್ದನು ಎಂಬುವುದು ಗೊತ್ತಾಗಿದೆ.

ದೂರು ಸ್ವೀಕರಿಸದ ಪೊಲೀಸರು:
ಆರೋಪಿ ಗಿರೀಶ ಧಮ್ಕಿ ಹಾಕಿದ್ದ ವಿಚಾರ ತಿಳಿದು ಅಂಜಲಿ ಅವರ ಅಜ್ಜಿ ಗಂಗಮ ಪೊಲೀಸರ ಗಮನಕ್ಕೆ ತಂದಾಗ, ಇದೆಲ್ಲಾ ಮೂಢನಂಬಿಕೆ ಎಂದು ಹೇಳಿ ಕಳುಹಿಸಿದ್ದರ ಪರಿಣಾಮ ಇಂದು ಹುಬ್ಬಳ್ಳಿಯಲ್ಲಿ ಯುವತಿಯ ಕೊಲೆಯಾಗಿದೆ ಎಂದು ಹೇಳಲಾಗುತ್ತಿದೆ.

ಮನೆ ಮುಂದೆ ಜಮಾಯಿಸಿರುವ ಜನರು:
ಬೆಳ್ಳಂಬೆಳಗ್ಗೆಯೇ ಮನೆಗೆ ನುಗ್ಗಿ ಯುವತಿಯನ್ನು ಕೊಲೆ ಮಾಡಿರುವ ವಿಷಯ ತಿಳಿದು ಗ್ರಾಮಸ್ಥರು ಹಾಗೂ ಸುತ್ತಮುತ್ತಲ ಹಳ್ಳಿಯ ಜನರು ಅಂಜಲಿ ಮನೆ ಬಳಿ ಜಮಾಯಿಸಿದ್ದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಅವರನ್ನು ಕಾಲೇಜು ಆವರಣದಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಅಂತಹದ್ದೇ ಕೃತ್ಯ ನಡೆದಿರುವುದು ಹುಬ್ಬಳ್ಳಿಯ ಜನತೆಯನ್ನು ಬೆಚ್ಚಿಬೀಳಿಸಿದೆ.

RELATED ARTICLES

Latest News