ಬೆಂಗಳೂರು, ಮಾ.5- ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ನೇತೃತ್ವದಲ್ಲಿ ಪತ್ತೆಗಾಗಿ 7 ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ವಿಧಾನಸಭೆಗೆ ತಿಳಿಸಿದರು.
ಶೂನ್ಯ ವೇಳೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಸಚಿವರು, ಕಪಿತಾನಿಯೊ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರವೇಶ ಪತ್ರ ಪಡೆದು ದೇವಾಲಯಕ್ಕೆ ಹೋಗಿಬರುವುದಾಗಿ ನಾಪತ್ತೆಯಾಗಿದ್ದಾರೆ. ರೈಲ್ವೆ ಹಳಿ ಬಳಿ ಚಪ್ಪಲಿ, ಮೊಬೈಲ್ ಪತ್ತೆಯಾಗಿದೆ. ಆದರೆ ಇದುವರೆಗೂ ದೇಹ ಎಲ್ಲೂ ಸಿಕ್ಕಿಲ್ಲ. ಫೆಬ್ರವರಿ 25 ರಂದು ನಾಪತ್ತೆಯಾಗಿದ್ದಾರೆ. 16 ಅಂಕಿಗಳ ಸೆಕ್ಯೂರಿಟಿ ಕೋಡ್ಗಳನ್ನು ಮೊಬೈಲ್ನಲ್ಲಿ ಹಾಕಿಕೊಂಡಿದ್ದರು.
ವಿದ್ಯಾರ್ಥಿಯ ಕುಟುಂಬದ ಸ್ನೇಹಿತರ ಸಂಬಂಧಿಕರ ಮನೆ ಸೇರಿದಂತೆ ಎಲ್ಲಾ ಕಡೆ ಪರಿಶೀಲಿಸಲಾಗಿದೆ. ತಂಡದ ಮಾಹಿತಿ ಪಡೆದು ಕುಟುಂಬದವರಿಗೆ ಮಾಹಿತಿ ನೀಡಲಾಗುತ್ತಿದೆ. ಅವರ ಕುಟುಂಬದವರನ್ನು ವಿಶ್ವಾಸಕ್ಕೆ ಪಡೆದು ಸರ್ಕಾರ ಬದ್ಧತೆಯಿಂದ ಪತ್ತೆ ಹಚ್ಚುವ ಕಾರ್ಯ ಕೈಗೊಂಡಿದೆ ಎಂದು ಹೇಳಿದರು.
ರೈಲ್ವೆ ಹಳಿಯಲ್ಲಿ ಮೊಬೈಲ್, ಚಪ್ಪಲಿ ದೊರೆತ ಬಳಿಕ ಡೋನ್ ಕ್ಯಾಮರಾ ಸಹಾಯದಿಂದ ರೈಲ್ವೆ ಹಳಿಯುದ್ದಕ್ಕೂ ಪರಿಶೀಲನೆ ನಡೆಸಲಾಗಿದೆ. ಆದರೆ ಈತನಕ ಆತನ ದೇಹ ಪತ್ತೆಯಾಗಿಲ್ಲ ಎಂದರು. ಇದಕ್ಕೂ ಮುನ್ನ ಮಾತನಾಡಿದ ಸಭಾಧ್ಯಕ್ಷರು ವಿದ್ಯಾರ್ಥಿ ನಾಪತ್ತೆಯಾಗಿರುವ ಬಗ್ಗೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಬೇಕು ಎಂದರು.
ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಪರಂಗಿ ಪೇಟೆಯ ವಿದ್ಯಾರ್ಥಿ ನಾಪತ್ತೆಯಾಗಿ 8-10 ದಿನಗಳಾದರೂ ಪತ್ತೆಯಿಲ್ಲ, ಪರಂಗಿಪೇಟೆಯನ್ನು ಬಂದ್ ಮಾಡಲಾಗಿತ್ತು. ರೈಲ್ವೆ ಹಳಿಯಲ್ಲಿ ವಿದ್ಯಾರ್ಥಿಯ ಚಪ್ಪಲಿ ಸಿಕ್ಕಿದ್ದು, ರಕ್ತದ ಕಲೆ ಇತ್ತೆಂದು ಹೇಳಲಾಗುತ್ತಿದೆ. ಈ ವಿದ್ಯಾರ್ಥಿ ಪತ್ತೆ ಕಾರ್ಯ ತುರ್ತು ಆವಶ್ಯಕತೆ ಇದೆ. ವಿಶೇಷ ಪಡೆ ರಚನೆ ಮಾಡಬೇಕು ಎಂದು ಸಲಹೆ ಮಾಡಿದರು. ಬಿಜೆಪಿ ಶಾಸಕ ಉಮಾನಾಥ್ ಎ ಕೋಟ್ಯಾನ್ ಮಾತನಾಡಿ, ರೈಲ್ವೆ ಹಳಿ ಬಳಿ ಕ್ವಾಲಿಸ್ ವಾಹನವೊಂದು ತಿರುಗಾಡುತ್ತಿತ್ತು ಎಂಬ ಮಾಹಿತಿ ಇದೆ ಎಂದರು.