Friday, May 3, 2024
Homeರಾಜ್ಯ716 ಕೋಟಿ ಹಾಲು ಪ್ರೋತ್ಸಾಹ ಧನ ಬಾಕಿ ಕೊಡಿ : ವಿಜಯೇಂದ್ರ ತಿರುಗೇಟು

716 ಕೋಟಿ ಹಾಲು ಪ್ರೋತ್ಸಾಹ ಧನ ಬಾಕಿ ಕೊಡಿ : ವಿಜಯೇಂದ್ರ ತಿರುಗೇಟು

ಬೆಂಗಳೂರು,ಫೆ.5- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ಯಾರಿಗೆ ಲಾಟರಿ ಇಲ್ಲವೇ ಯಾರಿಗೆ ಬಂಪರ್ ಎಂಬುದನ್ನು ತೀರ್ಮಾನಿಸುತ್ತಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ಗೆ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಆಕಸ್ಮಿಕವಾಗಿ ಅಧಿಕಾರಕ್ಕೆ ಬಂದಿದೆ. ಜನರ ಮೂಗಿಗೆ ಗ್ಯಾರಂಟಿ ಎಂಬ ತುಪ್ಪ ಸವರಿ ಗೆದ್ದು ಬಂದಿದ್ದೀರಿ. ಲೋಕಸಭೆ ಚುನಾವಣೆಯಲ್ಲಿ ಲಾಟರಿನೋ ಅಥವಾ ಬಂಪರೋ ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆಯಿಂದ ಜನ ಮಾತ್ರವಲ್ಲ ಜಾನುವಾರುಗಳು ಸರ್ಕಾರಕ್ಕೆ ಶಾಪ ಹಾಕುತ್ತಿದೆ. ಜನರ ಕೋಪ ಮಾತ್ರವಲ್ಲ, ಜಾನುವಾರುಗಳ ಕೋಪಕ್ಕೆ ರಾಜ್ಯ ಸರ್ಕಾರ ಬಲಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುತ್ತಿದ್ದರು. ಅದರ ಪರಿಣಾಮ ಬಿಜೆಪಿ ಆಡಳಿತದಲ್ಲಿದ್ದಾಗ 26 ಲಕ್ಷ ಗ್ರಾಮೀಣ ರೈತರಿಂದ 80-85 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಈ ಸರ್ಕಾರ 716 ಕೋಟಿ ರೂ. ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದೆ.

ಪಾಕಿಸ್ತಾನ : ಠಾಣೆ ಮೇಲೆ ದಾಳಿ ನಡೆಸಿ 10 ಪೊಲೀಸರನ್ನು ಕೊಂದ ಉಗ್ರರು

ಇದರ ಪರಿಣಾಮ 80-85 ಲಕ್ಷ ಲೀಟರ್ ಹಾಲು ಸಂಗ್ರಹಣೆ ಆಗುತ್ತಿತ್ತು. ಈಗ 10 ಲಕ್ಷ ಲೀಟರ್‍ಗೆ ಇಳಿದಿದೆ ಎಂದರು. ರೈತರ ಪ್ರೋತ್ಸಾಹ ಧನ ಉಳಿಸಿಕೊಂಡ ಪಾಪದ ಸರ್ಕಾರ ಇದು. ಮಾನ ಮಾರ್ಯಾದೆ ಇದ್ದರೇ ಬಾಕಿ ಉಳಿಸಿಕೊಂಡಿರುವ ಕೂಡಲೇ ಪ್ರೋತ್ಸಾಹ ಧನ ಬಿಡುಗಡೆ ಮಾಡಿ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.

ರಾಜಸ್ವ ಸ್ವೀಕೃತಿ ಟಾರ್ಗೆಟ್ 2,38,000 ಮಾಡುತ್ತೇವೆ ಎಂದಿದ್ದರು. ಶೇ.67ರಷ್ಟು ಮಾತ್ರ ಸಂಗ್ರಹ ಮಾಡಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಶೇ. 82ರಷ್ಟು ಸಂಗ್ರಹ ಮಾಡಿದ್ದೇವು. ನಿಮ್ಮದೇ ಸರ್ಕಾರ ಟಾರ್ಗೆಟ್ ರೀಚ್ ಮಾಡಲು ಸಾಧ್ಯವಾಗಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದೇ 10ರಂದು ಬೆಂಗಳೂರಿಗೆ ಬರುತ್ತಿದ್ದಾರೆ. ಕ್ಲಸ್ಟರ್‍ನ ಸಭೆ ಹಾಗೂ ಕೋರ್ ಕಮಿಟಿ ಸಭೆ ನಡೆಸಲಿದ್ದು, ಸಂಜೆ 5 ಗಂಟೆಗೆ ಮೈಸೂರಿನ ಸುತ್ತೂರು ಮಠಕ್ಕೂ ಭೇಟಿ ನೀಡಲಿದ್ದಾರೆ. ಇನ್ನು ಎಲ್ಲಾ ಕಾರ್ಯಕ್ರಮ ಅಂತಿಮಗೊಂಡಿಲ್ಲ. ಆದರೆ ಕೋರ್ ಕಮಿಟಿ ಸಭೆ ಮಾತ್ರ ಬೆಂಗಳೂರಿನಲ್ಲಿ ನಡೆಯುತ್ತದೆ ಎಂದು ತಿಳಿಸಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿಯೇ ಉಳಿಸಿಕೊಳ್ಳಲಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಇದು ನಾಲ್ಕು ಗೋಡೆಗಳ ಮಧ್ಯೆ ಮಾತನಾಡಬೇಕಾದ ವಿಚಾರ. ನಾಲ್ಕು ಗೋಡೆ ಮಧ್ಯೆ ಕುಳಿತು ಬಗೆಹರಿಸುತ್ತೇವೆ ಎಂದು ಹೇಳಿದರು.

RELATED ARTICLES

Latest News