ಚಿಕ್ಕಮಗಳೂರು,ಮೇ 20-ಬೇಸಿಗೆ ರಜಾ ಕಳೆಯಲು ಅಜ್ಜಿ ಮನೆಗೆ ಬಂದ ಸಂದರ್ಭದಲ್ಲಿ ಬಾಲಕಿಯೊಬ್ಬಳು ಆಟವಾಡುತ್ತಿದ್ದ ವೇಳೆ ಹಗ್ಗಕ್ಕೆ ಸಿಲುಕಿ ಮೃತಪಟ್ಟ ಘಟನೆ ಶೃಂಗೇರಿ ತಾಲ್ಲೂಕಿನ ಬೆಟ್ಟಗೆರೆ ವ್ಯಾಪ್ತಿಯ ಕಲ್ಲೊಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಸಪ್ತಮಿ(14) ಎಂದು ಗುರುತಿಸಲಾಗಿದೆ. ಕೋಗಿನಬೈಲಿನ ಸರಕಾರಿ ಶಾಲೆಯಲ್ಲಿ ಎಂಟನೇ ತರಗತಿಗೆ ಸಪ್ತಮಿ ಹೋಗಬೇಕಾಗಿತ್ತು. ಆದರೆ ವಿಧಿಯಾಟಕ್ಕೆ ಈಕೆೆ ಬಲಿಯಾಗಿದ್ದಾಳೆ.
ಮರ್ಕಲ್ ಗ್ರಾ.ಪಂ ವ್ಯಾಪ್ತಿಯ ಕೋಗಿನಬೈಲಿನ ಶ್ರೀ ಗಜೇಂದ್ರ ಅವರ ಪುತ್ರಿ. ಸಪ್ತಮಿ ತನ್ನ ತಾಯಿ ಶುಭಾ ಅವರ ಜೊತೆ ಬೇಸಿಗೆ ರಜೆಗೆಂದು ಅಜ್ಜಿ ಮನೆಗೆ ಸಹೋದರಿ ಜೊತೆ ಬಂದಿದ್ದಳು.
ಊಟದ ಬಳಿಕ ಮನೆಯವರು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಬಾಲಕಿ ಮರದ ಏಣಿಯಿಂದ ಇಳಿಯಲು ಕಟ್ಟಿದ ನೈಲಾನ್ ಬಟ್ಟೆಯಿಂದ ಮಾಡಿದ ಹಗ್ಗವನ್ನು ಹಿಡಿದು ಆಟವಾಡುತ್ತಿದ್ದು ಕೆಳಗೆ ಇಳಿಯುವ ಸಂದರ್ಭದಲ್ಲಿ ಕಾಲು ತಪ್ಪಿ ಬಿದ್ದ ಪರಿಣಾಮ ಹಗ್ಗವು ಕುತ್ತಿಗೆಗೆ ಸಿಕ್ಕಿಕೊಂಡು ಉಸಿರುಗಟ್ಟಿ ಬಾಲಕಿ ಮೃತ ಪಟ್ಟಿದ್ದಾಳೆ. ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಕೆಯ ಅಂತಿಮಸಂಸ್ಕಾರ ಕೋಗಿನಬೈಲಿನ ಅವರ ಜಮೀನು ಸಮೀಪ ನೆರವೇರಿತು.
