ಕೊಡಿಗೇನಹಳ್ಳಿ, ಜು.10- ಇಲ್ಲಿನ ಸಮೀಪದ ಸಿಂಗನಹಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿ, ಸುಮಾರು 30 ಕುರಿಗಳನ್ನು ಕಚ್ಚಿ ಕೊಂದಿರುವ ಭೀಕರ ಘಟನೆ ಸಂಭವಿಸಿದೆ. ದಾಳಿಯಲ್ಲಿ 10ಕ್ಕೂ ಹೆಚ್ಚು ಕುರಿಗಳು ತೀವ್ರವಾಗಿ ಗಾಯಗೊಂಡಿವೆ.
ಗ್ರಾಮದ ರೈತ ಶನಿವಾರಪ್ಪ ಎಂಬುವವರಿಗೆ ಸೇರಿದ ಕುರಿಗಳು ಎಂದಿನಂತೆ ರೊಪ್ಪದಲ್ಲಿದ್ದಾಗ (ದೊಡ್ಡಿ), ಏಕಾಏಕಿ ನುಗ್ಗಿದ ಬೀದಿ ನಾಯಿಗಳ ಹಿಂಡು ಜಾನುವಾರುಗಳ ಮೇಲೆ ಮುಗಿಬಿದ್ದಿದೆ. ನಾಯಿಗಳ ರೌದ್ರಾವತಾರಕ್ಕೆ ಸಿಲುಕಿದ 30 ಕುರಿಗಳು ಸ್ಥಳದಲ್ಲೇ ಸಾವನಪ್ಪಿದ್ದು, ರೈತನಿಗೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಗಾಯಗೊಂಡಿರುವ ಉಳಿದ 10 ಕುರಿಗಳ ಸ್ಥಿತಿ ಕೂಡ ಚಿಂತಾಜನಕವಾಗಿದೆ.
ಅಧಿಕಾರಿಗಳ ಭೇಟಿ, ಪರಿಶೀಲನೆ:
ವಿಷಯ ತಿಳಿಯುತ್ತಿದ್ದಂತೆ ಪಶು ವೈದ್ಯಾಧಿಕಾರಿ ಡಾ. ಸೀಮಾ, ಕುರಿ ಸಂಘದ ಜಿಲ್ಲಾಧ್ಯಕ್ಷ ನಾಗರೆಡ್ಡಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಗೊಂಡಿರುವ ಕುರಿಗಳಿಗೆ ಪಶು ವೈದ್ಯರು ತಕ್ಷಣದ ಚಿಕಿತ್ಸೆ ನೀಡಿದ್ದಾರೆ. ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರೈತರ ಜಾನುವಾರುಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಡಾ. ಸೀಮಾ, ಪಶು ವೈದ್ಯಾಧಿಕಾರಿ, ಕಡಗತ್ತೂರು ಸ್ಥಳ ಪರಿಶೀಲನೆ ನಡೆಸಿ, ಬದುಕುಳಿದಿರುವ ಕುರಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಘಟನೆ ಕುರಿತು ಇಲಾಖೆಗೆ ಸಂಪೂರ್ಣ ವರದಿ ಸಲ್ಲಿಸಲಾಗುವುದು. ನೊಂದ ರೈತ ಶನಿವಾರಪ್ಪಗೆ ಸರಕಾರದಿಂದ ಸಿಗಬೇಕಾದ ಸೂಕ್ತ ಪರಿಹಾರವನ್ನು ಆದಷ್ಟು ಬೇಗ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
