Sunday, September 8, 2024
Homeರಾಷ್ಟ್ರೀಯ | Nationalಮುಂದಿನ ತಿಂಗಳು ಪೌರತ್ವ ಕಾಯ್ದೆ ಜಾರಿ..!?

ಮುಂದಿನ ತಿಂಗಳು ಪೌರತ್ವ ಕಾಯ್ದೆ ಜಾರಿ..!?

ನವದೆಹಲಿ,ಫೆ.28- 2014 ರ ಡಿಸೆಂಬರ್‍ಗೂ ಮೊದಲು ಭಾರತದಲ್ಲಿ ನೆಲೆಸಿರುವ ಮೂರು ನೆರೆಯ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ನೀಡುವ ಪೌರತ್ವ ತಿದ್ದುಪಡಿ ಕಾಯ್ದೆಯು ಮುಂದಿನ ತಿಂಗಳಿನಿಂದ ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ನೋಂದಣಿಗಾಗಿ ಆನ್‍ಲೈನ್ ಪೋರ್ಟಲ್ ಸಿದ್ಧವಾಗಿದೆ. ಈ ನಿಯಮವು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳು, ಸಿಖ್ಖರು, ಬೌದ್ಧರು ಮತ್ತು ಕ್ರಿಶ್ಚಿಯನ್ನರಿಗೆ ಅನ್ವಯಿಸುತ್ತದೆ. ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಇದು ಜಾರಿಗೆ ಬರಲಿದೆ ಎಂದು ಮೂಲಗಳು ಹೇಳಿವೆ.

ಸಿಎಎ ಅನುಷ್ಠಾನವು 2019 ರ ಲೋಕಸಭೆ ಚುನಾವಣೆ ಮತ್ತು ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಚುನಾವಣಾ ಕಾರ್ಯಸೂಚಿಯಾಗಿತ್ತು. ಅಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸಿಎಎ ಜಾರಿಗೆ ವಿರೋಧಿಸಿತ್ತು. ಕಳೆದ ವರ್ಷ ಡಿಸೆಂಬರ್‍ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸಿಎಎ ಅನುಷ್ಠಾನ ತಡೆಯಲು ಸಾಧ್ಯವಿಲ್ಲ. ಏಕೆಂದರೆ ಇದು ದೇಶದ ಕಾನೂನು ಎಂದು ಘೋಷಿಸಿದ್ದರು. ಬಹುಸಂಖ್ಯಾತರ ಭಾವನೆಗಳನ್ನೇ ಬಂಡವಾಳ ಮಾಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪ ಬಿಜೆಪಿ ವಿರುದ್ಧ ಕೇಳಿ ಬರುತ್ತಿದೆ.

ದಾಖಲೆಗಳನ್ನು ಹೊಂದಿರದ ಈ ನೆರೆಯ ದೇಶಗಳ ನಿರಾಶ್ರಿತರಿಗೆ ಸಿಎಎ ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ. ಸಚಿವಾಲಯವು ಸ್ವೀಕರಿಸಿದ ದೀರ್ಘಾವಧಿಯ ವೀಸಾಗಳಿಗಾಗಿ ಗರಿಷ್ಠ ಸಂಖ್ಯೆಯ ಅರ್ಜಿಗಳು ಪಾಕಿಸ್ತಾನದಿಂದ ಬಂದವು. ಕಳೆದ ಎರಡು ವರ್ಷಗಳಲ್ಲಿ ಪೌರತ್ವ ಕಾಯಿದೆ – 1955ರ ಅಡಿಯಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬರುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವವನ್ನು ನೀಡಲು ಒಂಬತ್ತು ರಾಜ್ಯಗಳ 30 ಕ್ಕೂ ಹೆಚ್ಚು ಜಿಲ್ಲಾ ಮ್ಯಾಜಿಸ್ಟ್ರೇಟ್‍ಗಳು ಮತ್ತು ಗೃಹ ಕಾರ್ಯದರ್ಶಿಗಳಿಗೆ ಅಧಿಕಾರವನ್ನು ನೀಡಲಾಗಿದೆ.

ರಾಜ್ಯಸಭಾ ಚುನಾವಣೆ : ಮತದಾನ ಮಾಡದಿರುವುದಕ್ಕೆ ಸ್ಪಷ್ಟನೆ ನೀಡಿದ ಹೆಬ್ಬಾರ್

ಕೇಂದ್ರ ಗೃಹ ಸಚಿವಾಲಯದ ವಾರ್ಷಿಕ ವರದಿಯ ಪ್ರಕಾರ, 2021ರ ಏ.1ರಿಂದ ಡಿಸೆಂಬರ್ 31ರವರೆಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಒಟ್ಟು 1,414 ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಪೌರತ್ವ ಕಾಯ್ದೆ 1955ರ ಅಡಿಯಲ್ಲಿ ನೋಂದಣಿ ಅಥವಾ ನೈಸರ್ಗಿಕೀಕರಣದ ಮೂಲಕ ಭಾರತೀಯ ಪೌರತ್ವ ನೀಡಲಾಗಿದೆ.

ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ದೇಶಾದ್ಯಂತ ಪ್ರತಿಭಟನೆಯ ಬಿರುಗಾಳಿ ಎಬ್ಬಿಸಿತ್ತು. ಕೋವಿಡ್ ಸಾಂಕ್ರಾಮಿಕದಿಂದಾಗಿ ಪ್ರತಿಭಟನೆಗಳು ಅಂತ್ಯಗೊಂಡವು. ಪ್ರತಿಭಟನೆ ನಿಲ್ಲುವ ಮೊದಲು ದೇಶದಾದ್ಯಂತ ಹೊರತರಬೇಕಾಗಿದ್ದ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಕೇಂದ್ರವು ತಡೆಹಿಡಿಯಿತು.

RELATED ARTICLES

Latest News