Homeಅಂತಾರಾಷ್ಟ್ರೀಯಭಾಗವತ್‌ ಅವರದು ಚಿನ್ನದಂತಹ ಹೃದಯ: ಆಶಾ ಜಡೇಜಾ ಮೋಟ್ವಾನಿ

ಭಾಗವತ್‌ ಅವರದು ಚಿನ್ನದಂತಹ ಹೃದಯ: ಆಶಾ ಜಡೇಜಾ ಮೋಟ್ವಾನಿ

ನ್ಯೂಯಾರ್ಕ್‌, ಆ.28 (ಪಿಟಿಐ)- ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಚಿನ್ನದಂತಹ ಹೃದಯ ಹೊಂದಿದ್ದು, ಏಕೀಕೃತ ಭಾರತ ಹಾಗೂ ಏಕೀಕೃತ ಜಗತ್ತಿನಲ್ಲಿ ನಂಬಿಕೆ ಇಟ್ಟಿದ್ದಾರೆ. ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ಅವರು ಯಾವುದೇ ಭೇದಭಾವ ಕಾಣುವುದಿಲ್ಲ ಎಂದು ಅಮೆರಿಕದ ಸಿಲಿಕಾನ್‌ ವ್ಯಾಲಿಯಲ್ಲಿ ನೆಲೆಸಿರುವ ಸಾಹಸೋದ್ಯಮ ಉದ್ಯಮಿ ಆಶಾ ಜಡೇಜಾ ಮೋಟ್ವಾನಿ ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ಶತಮಾನೋತ್ಸವದ ಅಂಗವಾಗಿ ಆಯೋಜಿಸಿರುವ ಜಾಗತಿಕ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ಭಾಗವತ್‌ ಅವರು ಮೂರು ದಿನಗಳ ಭೇಟಿಗಾಗಿ ನ್ಯೂಯಾರ್ಕ್‌ಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಉದ್ಯಮಿಗಳು ಹಾಗೂ ಕಾರ್ಯನಿರ್ವಾಹಕರೊಂದಿಗೆ ದುಂಡುಮೇಜಿನ ಸಭೆಯಲ್ಲಿ ಅವರು ಸಂವಾದ ನಡೆಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಮೋಟ್ವಾನಿ ಮಾತನಾಡಿ, ಭಾಗವತ್‌ ಅವರೊಂದಿಗೆ ಬಾಹ್ಯಾಕಾಶ, ದೂರಸಂಪರ್ಕ, ಶುದ್ಧ ಇಂಧನ, ತಂತ್ರಜ್ಞಾನ ಹಾಗೂ ಕ್ವಾಂಟಮ್‌ ಕಂಪ್ಯೂಟಿಂಗ್‌ ಸೇರಿದಂತೆ ವಿವಿಧ ಕ್ಷೇತ್ರಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.

‘ವಿವಿಧ ಕೈಗಾರಿಕೆಗಳ ಪ್ರತಿನಿಧಿಗಳು ಭಾಗವತ್‌ ಅವರಿಗೆ ಹಲವು ಪ್ರಮುಖ ಪ್ರಶ್ನೆಗಳನ್ನು ಕೇಳಿದರು. ಭಾರತದಲ್ಲಿ ಕಂಪನಿಗಳು ಅಥವಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ಇರುವ ಅಧಿಕಾರಶಾಹಿ ಅಡೆತಡೆಗಳನ್ನು ನಿವಾರಿಸಲು ಹಾಗೂ ಕಾರ್ಯವಿಧಾನಗಳನ್ನು ಸುಗಮಗೊಳಿಸಲು ಅವರು ಹೇಗೆ ನೆರವಾಗಬಹುದು ಎಂಬುದನ್ನು ತಿಳಿದುಕೊಳ್ಳಲು ಅನೇಕರು ಆಸಕ್ತಿ ತೋರಿದರು’ ಎಂದು ಮೋಟ್ವಾನಿ ಹೇಳಿದ್ದಾರೆ.

ಭಾಗವತ್‌ ಅವರು ಪ್ರಶ್ನೆಗಳಿಗೆ ಸಮಗ್ರವಾಗಿ ಉತ್ತರಿಸಿದರೂ, ತಾವು ಭಾರತ ಸರ್ಕಾರದ ಪರವಾಗಿ ಮಾತನಾಡುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಅವರ ಉತ್ತರಗಳು ಕೆಲವು ವಿಷಯಗಳಲ್ಲಿ ನೆರವು ನೀಡಲು ಸಾಧ್ಯವಾಗಬಹುದು ಎಂಬ ವಿಶ್ವಾಸ ಮೂಡಿಸಿವೆ ಎಂದು ಅವರು ತಿಳಿಸಿದ್ದಾರೆ.

ಭಾಗವತ್‌ ಅವರೊಂದಿಗಿನ ಸಂವಾದದ ಕುರಿತು ಪ್ರತಿಕ್ರಿಯಿಸಿದ ಮೋಟ್ವಾನಿ, ‘ಅವರಿಗೆ ಚಿನ್ನದ ಹೃದಯವಿದೆ. ಏಕೀಕೃತ ಭಾರತ ಮತ್ತು ಏಕೀಕೃತ ಜಗತ್ತಿನಲ್ಲಿ ಅವರು ನಂಬಿಕೆ ಇಟ್ಟಿದ್ದಾರೆ. ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ಯಾವುದೇ ವ್ಯತ್ಯಾಸವನ್ನು ಅವರು ಕಾಣುವುದಿಲ್ಲ. ಅವರ ಪಾಲಿಗೆ ಎಲ್ಲ ಭಾರತೀಯರೂ ಒಂದು ಕುಟುಂಬ’ ಎಂದು ಹೇಳಿದ್ದಾರೆ.

ಭಾರತೀಯ ಯುವಕರ ಬಗ್ಗೆ ಭಾಗವತ್‌ ಅವರಿಗೆ ಅಪಾರ ವಿಶ್ವಾಸವಿದೆ. ಯುವಕರು ದೇಶದಲ್ಲಿ ತಮಗೆ ಬೇಕಾದ ಬದಲಾವಣೆಯನ್ನು ತರಬಲ್ಲರು ಎಂಬ ನಂಬಿಕೆ ಅವರಲ್ಲಿದೆ. ಭಾರತೀಯ ಯುವಕರು ಅಭೂತಪೂರ್ವ ರೀತಿಯಲ್ಲಿ ಬದಲಾವಣೆ ತರಲಿದ್ದಾರೆ ಎಂಬ ವಿಶ್ವಾಸದೊಂದಿಗೆ ಸಭೆಯಿಂದ ಹೊರಬಂದಿದ್ದೇನೆ ಎಂದು ಮೋಟ್ವಾನಿ ಹೇಳಿದ್ದಾರೆ.

ಅಮೆರಿಕ-ಭಾರತ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ಹಾಗೂ ಉಭಯ ದೇಶಗಳ ನಡುವೆ ಸೇತುವೆ ನಿರ್ಮಿಸುವ ವಿಚಾರದಲ್ಲಿ ಭಾಗವತ್‌ ಅವರು ನಂಬಿಕೆ ಹೊಂದಿದ್ದಾರೆ. ಅಮೆರಿಕಕ್ಕೆ ಮತ್ತಷ್ಟು ಭೇಟಿ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಮೋಟ್ವಾನಿ ತಿಳಿಸಿದ್ದಾರೆ.

ಆಗಸ್ಟ್‌ 29ರಂದು ನ್ಯೂಯಾರ್ಕ್‌ನ ಮ್ಯಾಡಿಸನ್‌ ಸ್ಕ್ವೇರ್‌ ಗಾರ್ಡನ್‌ನಲ್ಲಿ ನಡೆಯಲಿರುವ ‘ಸಾರ್ವತ್ರಿಕ ಏಕತೆ’ ಕಾರ್ಯಕ್ರಮಕ್ಕೂ ಮುನ್ನ ಈ ದುಂಡುಮೇಜಿನ ಸಭೆ ನಡೆದಿದೆ. ಕಾರ್ಯಕ್ರಮದಲ್ಲಿ ಭಾರತೀಯ ವಲಸಿಗರು ಸೇರಿದಂತೆ ವಿವಿಧ ಸಮುದಾಯಗಳ ಸುಮಾರು 6,000 ಮಂದಿಯನ್ನು ಭಾಗವತ್‌ ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.

ಕಾರ್ಯಕ್ರಮ ಆಯೋಜಿಸಿರುವ ‘ಅಮೆರಿಕನ್‌ ಹಿಂದೂಸ್‌ ಫಾರ್‌ ಎಂಗೇಜ್‌ಮೆಂಟ್‌ ಅಂಡ್‌ ಡೈಲಾಗ್‌’ ಸಂಸ್ಥೆ ಇದನ್ನು ‘ಹೆಗ್ಗುರುತಿನ ರಕ್ಷಾ ಬಂಧನ ಸಭೆ’ ಎಂದು ಬಣ್ಣಿಸಿದೆ. ಅಮೆರಿಕದಾದ್ಯಂತದ ಸಾವಿರಾರು ಹಿಂದೂಗಳು ಹಾಗೂ ನೂರಾರು ಹಿಂದೂ, ಸಾಂಸ್ಕೃತಿಕ, ಆಧ್ಯಾತ್ಮಿಕ, ಸೇವಾ ಮತ್ತು ಸಮುದಾಯ ಸಂಘಟನೆಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

RELATED ARTICLES
spot_img

Latest News