Friday, January 9, 2026
Homeರಾಜ್ಯಅರಸು ಅವರು ಸಿದ್ದರಾಮಯ್ಯನವರಂತೆ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಾ ಕಾಲ ಕಳೆದಿರಲಿಲ್ಲ : ಬಿ.ವೈ ವಿಜಯೇಂದ್ರ

ಅರಸು ಅವರು ಸಿದ್ದರಾಮಯ್ಯನವರಂತೆ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಾ ಕಾಲ ಕಳೆದಿರಲಿಲ್ಲ : ಬಿ.ವೈ ವಿಜಯೇಂದ್ರ

Arasu did not spend time struggling to retain his chair like Siddaramaiah: Vijayendra

ಬೆಂಗಳೂರು,ಜ.7- ಮಾಜಿ ಮುಖ್ಯಮಂತ್ರಿ ದಿ.ದೇವರಾಜು ಅರಸು ಅವರು ಹೊಸ ತಲೆಮಾರಿನ ಹಲವು ನಾಯಕರನ್ನು ಬೆಳೆಸಿದರು. ಅವರೆಂದಿಗೂ ಯಾರನ್ನೂ ಹತ್ತಿಕ್ಕಲು ಪ್ರಯತ್ನಿಸುತ್ತಾ, ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಾ ಕಾಲ ಕಳೆಯಲಿಲ್ಲ. ಅವರಷ್ಟು ದಿನಗಳು ಅಧಿಕಾರದಲ್ಲಿರುವುದಕ್ಕೂ, ಅವರಂತೆ ಅಧಿಕಾರ ನಡೆಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಅಲ್ಲವೇ? ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು,ಅರಸು ಅವರು ಶಾಶ್ವತವಾದ ಭೂ ಸುಧಾರಣೆ ತಂದರು. ಚುನಾವಣೆ ಗೆಲ್ಲಲು ಯಾವ ಗ್ಯಾರಂಟಿಯನ್ನು ಘೋಷಿಸಲಿಲ್ಲ. ರಾಜ್ಯದ ಬೊಕ್ಕಸ ಬರಿದು ಮಾಡಲಿಲ್ಲ. ದೂರದೃಷ್ಟಿಗೂ, ಮತ ದೃಷ್ಟಿಗೂ ದೊಡ್ಡ ಅಂತರವಿದೆ ಅಲ್ಲವೇ? ದಾಖಲೆ ಸರಿಗಟ್ಟಿದವರೆಲ್ಲ ಇತಿಹಾಸ ಬರೆಯುವುದಿಲ್ಲ, ಇತಿಹಾಸ ಅವರನ್ನು ನೆನಪಿಟ್ಟುಕೊಳ್ಳುವುದೂ ಇಲ್ಲ ಎಂದಿದ್ದಾರೆ.

ಗಾತ್ರಕ್ಕಿಂತ ಗುಣ ಮುಖ್ಯ ಅನ್ನುವ ಹಾಗೆ ಸುದೀರ್ಘ ಕಾಲಕ್ಕಿಂತಲೂ ಶಾಶ್ವತ ಸಾಧನೆ ಬಹಳ ಮುಖ್ಯ! ಈ ನಿಟ್ಟಿನಲ್ಲಿ ಅರಸು ಅವರ ಹತ್ತಿರಕ್ಕೂ ಬರಲಾಗದಿದ್ದರೂ, ಎತ್ತರಕ್ಕೆ ಏರಲಾಗದಿದ್ದರೂ, ಹಿಂದುಳಿದ ವರ್ಗಗಳ ಹರಿಕಾರ ಸನಾನ್ಯ ದೇವರಾಜ ಅರಸ್‌‍ ಅವರ ದಾಖಲೆ ದಾಟಿ, ರಾಜ್ಯದ ಸುದೀರ್ಘ ಅವಧಿಯ ಮುಖ್ಯಮಂತ್ರಿಗಳಾಗುತ್ತಿರುವ ಸಿದ್ದರಾಮಯ್ಯ ನವರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಅರಸು ಅವರ ಹಲವು ಸೈದ್ಧಾಂತಿಕ ನಿಲುವು, ನಿರ್ಧಾರಗಳನ್ನು, ಕಾರ್ಯಗಳನ್ನು ನಾವು ಮೆಚ್ಚಿಕೊಳ್ಳದೆ ಇದ್ದರೂ, ಅವರ ದಿಟ್ಟತನ, ಜನರ ಬಗ್ಗೆ ಅವರ ಕಾಳಜಿ, ಅವರು ತಂದ ಹಲವು ಐತಿಹಾಸಿಕ ಸುಧಾರಣೆಗಳನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಎಷ್ಟು ದಿನ ಕುರ್ಚಿ ಮೇಲೆ ಕೂತಿದ್ದರು ಎನ್ನುವುದಕ್ಕಿಂತಲೂ ಆ ಸ್ಥಾನದಲ್ಲಿ ಕುಳಿತು ಮಾಡಿದ ಕೆಲಸಗಳಿಗೆ ಮಹತ್ವ ಹೆಚ್ಚು ಎಂದು ಹೇಳಿದ್ದಾರೆ.

ದೇವರಾಜ ಅರಸು ಅವರು ಉಳುವವನೇ ಭೂ ಒಡೆಯ ಸುಧಾರಣೆ ತಂದು ಲಕ್ಷಾಂತರ ಬಡವರ ಜೀವನದಲ್ಲಿ ಪರಿವರ್ತನೆ ತಂದರು. ಅವರೆಂದೂ ಹಗರಣದಲ್ಲಿ ಸಿಲುಕಿ ನಿವೇಶನ ಹಿಂದಿರುಗಿಸಿಲ್ಲ, ಅಕ್ರಮ ವಲಸಿಗರಿಗೆ ಭೂಮಿ ನೀಡಲು ಮುಂದಾಗಲಿಲ್ಲ. ಸುಧಾರಣೆಗೂ ವಹಿವಾಟಿಗೂ ವ್ಯತ್ಯಾಸವಿದೆ ಅಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಅರಸು ಅವರು ಹಿಂದುಳಿದ ವರ್ಗಕ್ಕೆ ಅಧಿಕಾರ ನೀಡಿದರು, ಹಿಂದುಳಿದವರನ್ನು ಮುಂದಕ್ಕೆ ತಂದರು. ಅವರು ಅಂಕಿ-ಅಂಶಗಳ ಜಾತಿ ಜನಗಣತಿ ವರದಿ ಹಿಡಿದು ಎಂದೂ ರಾಜಕೀಯ ಮಾಡಲಿಲ್ಲ. ಅರಸು ಅವರು ಹಿಂದುಳಿದ ಸಮಾಜವನ್ನು ಒಗ್ಗೂಡಿಸಿ, ಮೇಲೆಕ್ಕೆತ್ತಲು ರಾಜಕೀಯ ಮಾಡಿದರು. ತಮ ರಾಜಕೀಯಕ್ಕಾಗಿ ಸಮುದಾಯಗಳನ್ನು ಬಳಸಿಕೊಂಡು ಮೇಲಕ್ಕೇರಲಿಲ್ಲ. ಅವರೆಂದೂ ಯಾವ ಸಮುದಾಯವನ್ನು ಒಡೆಯುವ ಪ್ರಯತ್ನ ಮಾಡಲಿಲ್ಲ. ಅಹಿಂದ ವರ್ಗಗಳನ್ನು ಬಳಸಿಕೊಂಡು ಮೇಲಕ್ಕೆ ಬರುವುದಕ್ಕೂ, ಆ ವರ್ಗಗಳನ್ನು ಮೇಲೆಕ್ಕೆ ತರುವುದಕ್ಕೂ ವ್ಯತ್ಯಾಸವಿದೆಯಲ್ಲವೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಅರಸು ಅವರು ಅಂದು ಪ್ರಧಾನಿ ಇಂದಿರಾ ಗಾಂಧಿಯವರ ಹೈಕಮಾಂಡ್‌ ಎದುರು ರಾಜ್ಯದ ಹಿತಕ್ಕಾಗಿ ಎದೆಯುಬ್ಬಿಸಿ ನಿಂತರು. ಅವರೆಂದೂ ಪ್ರತಿ ನಿರ್ಧಾರಕ್ಕೂ, ದೆಹಲಿಯ ಹಸಿರು ನಿಶಾನೆಗಾಗಿ ಕಾಯುತ್ತಿರಲಿಲ್ಲ. ಅವರೆಂದೂ ರಾಜ್ಯಕ್ಕೆ ಮಾರಿ, ಪರ ರಾಜ್ಯಕ್ಕೆ ಉಪಕಾರಿ ಆಗಲಿಲ್ಲ, ಹೈಕಮಾಂಡ್‌ ಹೇಳಿತೆಂದು ಅಕ್ರಮ ನಿವಾಸಿಗಳಿಗೆ ಭೂಮಿ ಕೊಡಲು ಮುಂದಾಗಲಿಲ್ಲ. ಕುರ್ಚಿಗಾಗಿ ಯಾರೊಂದಿಗೂ ಒಳ ಒಪ್ಪಂದವನ್ನಾಗಲಿ, ಅದಕ್ಕಾಗಿ ತಂತ್ರಗಾರಿಕೆಯನ್ನಾಗಲಿ ಮಾಡಲಿಲ್ಲ. ಸ್ವಾಭಿಮಾನಕ್ಕೂ ಶರಣಾಗತಿೞಗೂ ಹೋಲಿಕೆ ಮಾಡಲು ಸಾಧ್ಯವೇ? ಎಂದು ವಿಜಯೇಂದ್ರ ಪ್ರಶ್ನೆಗಳ ವಾಗ್ಬಾಣ ಬಿಟ್ಟಿದ್ದಾರೆ.

RELATED ARTICLES

Latest News