Friday, September 20, 2024
Homeರಾಜ್ಯಮರಕ್ಕೆ ಆಡಿ ಕಾರು ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳ ದುರ್ಮರಣ

ಮರಕ್ಕೆ ಆಡಿ ಕಾರು ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳ ದುರ್ಮರಣ

ಕೋಲಾರ,ಆ.3- ಸ್ನೇಹಿತನ ಮನೆಗೆ ಹೋಗಿ ವಾಪಸ್‌‍ ಕಾರಿನಲ್ಲಿ ಹಿಂದಿರುಗುತ್ತಿದ್ದಾಗ ಅತಿ ವೇಗದಿಂದಾಗಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಇಂದು ಬೆಳಗಿನ ಜಾವ ಗ್ರಾಮಾಂತರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರೇವಾ ಯೂನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿಗಳಾದ ಹಾಸನ ಮೂಲದ ಹರ್ಷವರ್ಧನ್‌, ಬಳ್ಳಾರಿಯ ಬಸವರಾಜ್‌ ಹಾಗೂ ಬಂಗಾರಪೇಟೆಯ ನಿಚ್ಚಲ್‌ ಮೃತಪಟ್ಟ ವಿದ್ಯಾರ್ಥಿಗಳು.ಕಾರಿನಲ್ಲಿದ್ದ ಮತ್ತೊಬ್ಬ ವಿದ್ಯಾರ್ಥಿ ಸಾಯಿಗಗನ್‌ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾನೆ.

ಬಂಗಾರಪೇಟೆಯಲ್ಲಿರುವ ಸಾಯಿಗಗನ್‌ ಮನೆಗೆ ಈ ಮೂವರೂ ವಿದ್ಯಾರ್ಥಿಗಳು ಹೋಗಿದ್ದರು. ರಾತ್ರಿ ಅವರ ಮನೆಯಲ್ಲೇ ಉಳಿದುಕೊಂಡು ಬೆಳಗಿನ ಜಾವ ವಾಪಾಸ್‌‍ ಆಡಿ ಕಾರಿನಲ್ಲಿ ನಾಲ್ವರು ಬೆಂಗಳೂರಿಗೆ ಹಿಂದಿರುಗುತ್ತಿದ್ದರು.

ಕೋಲಾರ ಹೊರವಲಯದ ಬಂಗಾರಪೇಟೆ ಮುಖ್ಯರಸ್ತೆಯ ಸಹಕಾರ ನಗರ ಬಳಿ ಬರುತ್ತಿದ್ದಾಗ ಅತಿವೇಗದಿಂದಾಗಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

ಅಪಘಾತದ ತೀವ್ರತೆಗೆ ಆಡಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.ಸುದ್ದಿ ತಿಳಿಯುತ್ತಿದ್ದಂತೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರಿನಲ್ಲಿ ಸಿಕ್ಕಿಕೊಂಡಿದ್ದ ಮೂವರ ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮೃತಪಟ್ಟಿರುವ ವಿದ್ಯಾರ್ಥಿಗಳ ಪೋಷಕರಿಗೆ ವಿಷಯ ತಿಳಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News