ಬೆಂಗಳೂರು,ಫೆ.8- ಜಾಗತಿಕ ಹೂಡಿಕೆದಾರರ ಸಮಾವೇಶವು ಇದೇ 11 ರಿಂದ 14 ರವರೆಗೆ ನಾಲ್ಕು ದಿನಗಳ ಕಾಲ ಬೆಂಗಳೂರಿನ ಅರಮನೆಯಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿ 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ನಿರೀಕ್ಷೆ ಮಾಡಲಾಗುತ್ತದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಹೂಡಿಕೆ ಸಮಾವೇಶದಲ್ಲಿ ಆಗುವ ಒಪ್ಪಂದಗಳಲ್ಲಿ ಶೇ.75 ರಷ್ಟು ಕಾರ್ಯಗತವಾಗಬೇಕು, ಕಾಗದದಲ್ಲಿ ಎಂಬುದು ನಮ ಉದ್ದೇಶ ಎಂದರು.ಫೆ.11 ರಂದು ಸಂಜೆ 4 ಗಂಟೆಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರ ಉಪಸ್ಥಿತಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೂಡಿಕೆದಾರರ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಪ್ರತಿನಿಧಿಸುವ ಹಾಗೂ ಕೈಗಾರಿಕೆ ಇಲಾಖೆಗೆ ಸಂಬಂಧಿಸಿದ ಎಲ್ಲಾ ಸಚಿವರಿಗೂ ಸಮಾವೇಶದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದು, ಅವರೂ ಕೂಡ ಭರವಸೆ ನೀಡಿದ್ದಾರೆ.ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಹಾಗೂ ಎಚ್.ಡಿ.ಕುಮಾರಸ್ವಾಮಿಯವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ಗಾಂಧಿಯವರು ಕೂಡ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ ಎಂದರು.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಅಶ್ವಿನ್ ವೈಷ್ಣವ್, ಪಿಯುಷ್ ಗೋಯಲ್ ಅವರಿಗೂ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.ಕರ್ನಾಟಕದ ಪ್ರಗತಿಗೆ ಕಾರಣರಾದವರನ್ನು ಗುರುತಿಸಿ ಫೆ.12 ರಂದು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗಮಿಸುವ ನಿರೀಕ್ಷೆಯಿದೆ. ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ವಿ.ಸೋಮಣ್ಣ ಅವರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನಸಭೆ ಸಭಾಪತಿ ಬಸವರಾಜ ಹೊರಟ್ಟಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರು, ಸ್ಥಳೀಯ ಶಾಸಕರು, ಸಂಸದರು, ಉಭಯ ಸದನದ ವಿರೋಧಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಖ್ಯಾತ ಉದ್ಯಮಿಗಳಾದ ಆನಂದ್ ಮಹೀಂದ್ರ, ಸಜ್ಜನ್ ಜಿಂದಾಲ್, ಕಿರಣ್ ಮಜುಂದಾರ್ ಸೇರಿದಂತೆ ಹಲವರು ಉದ್ಯಮಿಗಳು ಭಾಗವಹಿಸಲಿದ್ದಾರೆ. ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ ಹೊಸ ಕೈಗಾರಿಕಾ ನೀತಿ, ಏಕಗವಾಕ್ಷಿ ಪೋರ್ಟಲ್ ಹಾಗೂ ಕ್ಲೀನ್ಮೊಬಿಲಿಟಿ ನೀತಿಯನ್ನು ಬಿಡುಗಡೆ ಮಾಡಲಾಗುವುದು. 15 ರೌಂಡ್ಟೇಬಲ್ ಉಪನ್ಯಾಸಗಳು, 60ಕ್ಕೂ ಹೆಚ್ಚು ಪರಿಣಿತರಿಂದ ಭಾಷಣ ನಡೆಯಲಿದೆ ಎಂದು ಹೇಳಿದರು.
ಫೆ.13 ರಂದು ಎಸ್ಎಂಇ ಪ್ರಶಸ್ತಿ ನೀಡಲಾಗುವುದು. ಈ ಬಾರಿ ಪ್ರಗತಿಯ ಮರುಕಲ್ಪನೆ ಎಂಬ ಘೋಷವಾಕ್ಯ ಇಟ್ಟುಕೊಳ್ಳಲಾಗಿದೆ. ಪ್ರಸಕ್ತ ಕೈಗಾರಿಕೆಗಳ ಸವಾಲು ಗಮನದಲ್ಲಿಟ್ಟುಕೊಂಡು ಕೈಗಾರಿಕಾ ನೀತಿಯನ್ನು ರೂಪಿಸಲಾಗಿದೆ. ಉದ್ಯೋಗ ಸೃಷ್ಟಿ ಮಾಡುವ ಉದ್ಯಮಿಗಳಿಗೆ ಉತ್ತೇಜನ ನೀಡಲಾಗುವುದು. ಮಹಿಳಾ ಉದ್ಯೋಗ ಕಲ್ಪಿಸುವ ಉದ್ಯಮಿಗಳಿಗೆ ಇನ್ನೂ ಹೆಚ್ಚಿನ ಉತ್ತೇಜನ ನೀಡಲಾಗುವುದು. 400 ಕ್ಕೂ ಹೆಚ್ಚು ಕಂಪನಿಗಳು ರಾಜ್ಯದಲ್ಲಿದ್ದು, ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಮಾಡುತ್ತಿವೆ ಎಂದು ಅವರು ಮಾಹಿತಿ ನೀಡಿದರು.
ಮೈಕ್ರೋ ಸಾಫ್ಟ್ ವೆರ್ ಕಂಪನಿಗಳ ಜೊತೆಗೂಡಿ ಏಕಗವಾಕ್ಷಿ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದ್ದು, ಇದರಲ್ಲಿ ದೇಶದಲ್ಲಿ ಅಸ್ತಿತ್ವದಲ್ಲಿರುವ ಮತ್ತು ರಾಜ್ಯದ ಪರವಾನಗಿಗಳು, ಕಾನೂನುಗಳು, ಭೂಮಿಯ ಲಭ್ಯತೆ ಸಿಗುವ ಉತ್ತೇಜನದ ಮಾಹಿತಿ ದೊರೆಯಲಿದೆ. ಉದ್ಯಮಿಗಳ ಮಂಜೂರಾತಿ 100 ರಿಂದ 50 ದಿನಕ್ಕೆ ಇಳಿಸಬೇಕೆಂಬ ಉದ್ದೇಶವಿದೆ ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.