ಬೆಂಗಳೂರು,ಜ.28-ನೀರಾವರಿ ಇಲಾಖೆಯಲ್ಲಿ 13 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಬಿಲ್ಗಳು ಬಾಕಿ ಇದ್ದು ಆ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಜೆಡಿಎಸ್ನ ಶಾಸಕ ಎಚ್.ಡಿ.ರೇವಣ್ಣ ಒತ್ತಾಯಿಸಿದರು.
ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸಿದ್ದ ಅವರು, ನೀರಾವರಿ ಇಲಾಖೆಯಲ್ಲಿ 13 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಬಿಲ್ಗಳು ಬಾಕಿ ಉಳಿದಿವೆ. ಕಾವೇರಿ ನೀರಾವರಿ ನಿಗಮದಲ್ಲೇ 3,500 ಕೋಟಿ ರೂ.ಗಳ ಬಿಲ್ಗಳು ಬಾಕಿ ಇದ್ದು 3500ಕ್ಕೂ ಹೆಚ್ಚು ಸಣ್ಣ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಅವರಲ್ಲಿ ಕೆಲವರು ಮಾಂಗಲ್ಯ ಅಡ ಇಟ್ಟಿದ್ದಾರೆ. ಇನ್ನು ಕೆಲವರು ಬಡ್ಡಿ ನೀಡಿ ಸಾಲ ತಂದಿದ್ದಾರೆ. ಅವರಿಗೆ ಬಾಕಿ ಬಿಲ್ ಪಾವತಿ ಮಾಡುವ ಮೂಲಕ ಸರ್ಕಾರ ಅವರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ದೊಡ್ಡ ದೊಡ್ಡ ಗುತ್ತಿಗೆದಾರರ ಬಿಲ್ಗಳಿಗೆ ಆದ್ಯತೆ ನೀಡಿ ಸಣ್ಣ ಗುತ್ತಿಗೆದಾರರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಎಂದ ರೇವಣ್ಣ ಅವರು, ನಿಲುವಳಿ ಸೂಚನೆಯಡಿ ಈ ವಿಷಯದ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಸಭಾಧ್ಯಕ್ಷ ಯು.ಟಿ.ಖಾದರ್, ನಿಲುವಳಿ ಸೂಚನೆಯ ಬದಲಾಗಿ ನಿಯಮ 69ರಡಿ ಸಾರ್ವಜನಿಕ ಮಹತ್ವದ ವಿಚಾರವನ್ನಾಗಿ ಪರಿಗಣಿಸಿ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು.
