ತುಮಕೂರು, ಮಾ.11– ಆಟೋ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ ಸುಮಾರು 4 ಲಕ್ಷ ರೂ. ಮೌಲ್ಯದ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಆಟೋ ಚಾಲಕ ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ನಗರದ ಹನುಮಂತಪುರ ನಿವಾಸಿ ರವಿಕುಮಾರ್ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ.
ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಗಾಯತ್ರಿ ಎಂಬುವರು ಕುಂದೂರು ಗ್ರಾಮದಲ್ಲಿ ತಮ್ಮ ಸಂಬಂಧಿಕರೊಬ್ಬರ ಮನೆಗೆ ಸೀಮಂತ ಕಾರ್ಯಕ್ರಮಕ್ಕೆ ಬಂದಿದ್ದರು.
ಸೀಮಂತ ಮುಗಿದ ಮೇಲೆ ಮೂವರು ಆಟೋದಲ್ಲಿ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಆಟೋದಿಂದ ಇಳಿಯುವಾಗ ಮಹಿಳೆ ಚಿನ್ನದ ಆಭರಣಗಳು ಇರುವ ಬ್ಯಾಗ್ನ್ನು ಮರೆತು ಆಟೋದಲ್ಲಿ ಬಿಟ್ಟು ಹೋಗಿದ್ದರು. ಬಳಿಕ ಸ್ವಲ್ಪ ದೂರ ಹೋದ ಮೇಲೆ ನೆನಪು ಮಾಡಿ ಕೊಂಡು ವಾಪಸ್ ಬಂದು ಆಟೋಗಾಗಿ ಹುಡುಕಾಡಿದ್ದಾರೆ. ಇತ್ತ ಆಟೋ ಚಾಲಕ ಕೂಡ ಆಕೆಗಾಗಿ ಹುಡುಕಾಡಿದ್ದಾರೆ.
ಆಟೋ ಸಿಗದಿದ್ದಕ್ಕೆ ಮಹಿಳೆ ಪೊಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದರು. ಇತ್ತ ಚಾಲಕ ಕೂಡ ಮಹಿಳೆ ಕಾಣದಿದ್ದಕ್ಕೆ ಬ್ಯಾಗ್ ವಾಪಸ್ ಕೊಡಬೇಕು ಎಂದು ಪೊಲೀಸ್ ಠಾಣೆಗೆ ಬಂದಿದ್ದಾರೆ.
ಠಾಣೆಯಲ್ಲಿ ಚಾಲಕನನ್ನು ನೋಡಿದ ಮಹಿಳೆ ಫುಲ್ ಖುಷಿಯಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಬ್ಯಾಗ್ನಲ್ಲಿ ಸುಮಾರು 4 ಲಕ್ಷರೂ, ಬೆಲೆಯ 52 ಗ್ರಾಂನಷ್ಟು ಚಿನ್ನಾಭರಣ ತಮ್ಮ ಕೈಸೇರಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.