ದಾವಣಗೆರೆ,ಮಾ.16- ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ದರೋಡೆಗೆ ಬಂದಿದ್ದ ಉತ್ತರ ಪ್ರದೇಶದ ದರೋಡೆಕೋರರ ತಂಡದ ಮೇಲೆ ದಾವಣಗೆರೆ ಪೊಲೀಸರು ಗುಂಡು ಹಾರಿಸಿ ನಾಲ್ವರನ್ನು ಸೆರೆ ಹಿಡಿದಿದ್ದಾರೆ. ರಾಜ್ಯದಲ್ಲಿ ನಡೆದಿದ್ದ ಕೋಟ್ಯಾಂತರ ರೂ. ಮೌಲ್ಯದ ದರೋಡೆ ಪ್ರಕರಣಗಳು ಬಯಲಿಗೆ ಬಂದಿದೆ.
ಒಬ್ಬ ದರೋಡೆಕೋರ ಗುಂಡೇಟಿನಿಂದ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೊನ್ನಾಳಿ ತಾಲೂಕಿನ ಅರಬಘಟ್ಟದಲ್ಲಿ ಇಂದು ಮುಂಜಾನೆ 1.40ರ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಉತ್ತರ ಪ್ರದೇಶ ಮೂಲದ ಹಜರತ್ ಆಲಿ (50), ಅಸ್ಲಾಂ ಟನ್ ಟನ್ (55), ಕಮರುದ್ದೀನ್ ಅಲಿಯಾಸ್ ಬಾಬು ಸೆರಲಿ (40) ಎಂಬುವವರನ್ನು ಬಂಧಿಸಲಾಗಿದೆ.
ದರೋಡೆಕೋರರ ಗ್ಯಾಂಗ್ ಬ್ಯಾಂಕ್ ದರೋಡೆಗೆ ಬಂದಿದೆ ಎಂಬ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸರು ಅಲರ್ಟ್ ಆಗಿ ಕಾರ್ಯಾಚರಣೆಗೆ ಇಳಿದಿದ್ದರು. ಹೊನ್ನಾಳಿ ಬಳಿ ಪೊಲೀಸರ ತಂಡ ನಾಕಬಂಧಿ ಮಾಡಿ ಕಳೆದ ರಾತ್ರಿ ವಾಹನ ತಪಾಸಣೆ ನಡೆಸುತ್ತಿದ್ದರು. ಎರೆಟಿಗಾ ಹಾಗೂ ಮಹೀಂದ್ರ ಎಸ್ಯುವಿ 500 ಉತ್ತರ ಪ್ರದೇಶ ನೋಂದಣಿಯ ಕಾರು ಹರಿಹರದ ಕಡೆಯಿಂದ ನ್ಯಾಮತಿ ಕಡೆಗೆ ಹೋಗುತ್ತಿತ್ತು.
ಈ ವೇಳೆ ಇವರನ್ನು ಹೊನ್ನಾಳಿ ಬಳಿಯ ಚೆಕ್ಪೋಸ್ಟ್ನಲ್ಲಿ ತಡೆಯಲು ಪೊಲೀಸರು ಯತ್ನಿಸಿದ್ದಾರೆ. ಈ ವೇಳೆ ಅವರು ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾದರು.ನಂತರ ಪೊಲೀಸರು ಅವರ ಕಾರನ್ನು ಬೆನ್ನಟ್ಟಿದಾಗ ಅರಬಘಟ್ಟ ಬಳಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಅರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿ ಕಾನ್್ಸಟೇಬಲ್ ಅನಂದ್ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ದರೋಡೆಕೋರರು ದಾಳಿ ನಡೆಸುತ್ತಿದ್ದಂತೆ ಆತರಕ್ಷಣೆಗಾಗಿ ಇನ್ಸ್ಪೆಕ್ಟರ್ ರವಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಆತರಕ್ಷಣೆಗಾಗಿ ಹಾರಿಸಿದ ಒಂದು ಗುಂಡು ಗುಡ್ಡು ಅಲಿಯಾನ್ ಗುಡು ಖಾಲಿಯಾ(45) ಕಾಲಿಗೆ ಗುಂಡು ತಗುಲಿ ಕುಸಿದು ಬಿದ್ದಿದ್ದಾನೆ. ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ದರೋಡೆಕೋರರನ್ನು ಬಂಧಿಸಿದ್ದಾರೆ.
ಗ್ಯಾಂಗ್ನ ನಾಯಕ ರಾಜಾರಾಮ್, ಬಾಬುಷಾ, ಹಾಗೂ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಆಪೀಜ್ ಪರಾರಿಯಾಗಿದ್ದಾರೆ. ಪರಾರಿಯಾದ ಅರೋಪಿಗಳ ಬಂಧನಕ್ಕೆ ಎರಡು ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ ಕೆಲ ತಿಂಗಳ ಹಿಂದೆ ನ್ಯಾಮತಿಯಲ್ಲಿ ನಡೆದ ಎಸ್ಬಿಐ ಬ್ಯಾಂಕ್ನ ದರೋಡೆಗೂ ಇವರಿಗೂ ಸಂಬಂಧ ಇದೆ ಎಂದು ಶಂಕೆ ವ್ಯಕ್ತವಾಗಿದ್ದು, ಇದಲ್ಲದೇ, ಹಲವೆಡೆ ಇವರು ಅಪರಾಧ ಕೃತ್ಯಗಳನ್ನು ನಡೆಸಿದ್ದಾರೆಂದು ಗೊತ್ತಾಗಿದೆ.
ಕಳೆದ ಒಂದು ವಾರದ ಹಿಂದೆ ಕರ್ನಾಟಕಕ್ಕೆ ಬಂದ ಇವರು ದಾವಣಗೆರೆಯಲ್ಲಿ ಬಿಡಾರ ಹೂಡಿ ಸವಳಂಗ ಗ್ರಾಮದ ಎಸ್ಬಿಐ ಬ್ಯಾಂಕ್ ದರೋಡೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.
ಈ ಆರೋಪಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಹಳ್ಳಿ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ 3.33,82.940 ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದರೆಂದು ಗೊತ್ತಾಗಿದೆ. ಇದಲ್ಲದೇ ಕೊಪ್ಪಳದ ಬೇವೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ 1.46,55,905 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತಿತ್ತರ ವಸ್ತುಗಳ ಪ್ರಕರಣ ಕೂಡ ಬಳಕಿಗೆ ಬಂದಿದೆ.
ಶಿವಮೊಗ್ಗದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಎಲೆಕ್ಟ್ರಾನಿಕ್ ವಸ್ತುಗಳ ಕಳ್ಳತನ, ಹಾವೇರಿ ಜಿಲ್ಲೆಯ ತಡಸಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಜ್ಯುವೆಲ್ಲರಿ ಅಂಗಡಿ ಕಳ್ಳತನ ಪ್ರಕರಣದಲ್ಲಿ ಇವರು ಭಾಗಿಯಾಗಿದ್ದು ತಿಳಿದುಬಂದಿದೆ.
ತಮಿಳುನಾಡಿನ ಕೃಷ್ಣಗಿರಿ, ಜಾರ್ಖಂಡ್ನ ಪಳಮು ಜಿಲ್ಲೆಯಲ್ಲೂ ಇವರು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದರಿ ಆರೋಪಿಗಳು ಕರ್ನಾಟಕದಲ್ಲಿ 2014ರಿಂದ 2024ರವರೆಗೆ ರಾಜ್ಯದ ಹಲವೆಡೆ ಬ್ಯಾಂಕ್ಗಳು ಸೇರಿದಂತೆ ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.ಘಟನಾ ಸ್ಥಳದಲ್ಲಿ ಮಚ್ಚು, ಗುಂಡುಗಳು, ಎರಡು ಕಾರು, ಮಂಕಿಕ್ಯಾಪ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.