ಬೆಂಗಳೂರು,ಮೇ 2- ಚಾಮರಾಜನಗರದ ಡಿಸಿ ಕಚೇರಿಗೆ ಇ-ಮೇಲ್ ನಲ್ಲಿ ಬಂದ ಬಾಂಬ್ ಬೆದರಿಕೆ ಸಂದೇಶದಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಡಿಸಿ ಕಚೇರಿಯ ಅಧಿಕೃತ ಮೇಲ್ಗೆ ಇಂದು ಮಧ್ಯಾಹ್ನ 3 ಗಂಟೆಗೆ ಡಿಸಿ ಕಚೇರಿ ಸ್ಪೋಟಗೊಳ್ಳಲಿದೆ ಎಂಬ ಸಂದೇಶ ಗಮನಿಸಿದ ಸಿಬ್ಬಂದಿ ತಕ್ಷಣ ಡಿಸಿಗೆ ತಿಳಿಸಿದ್ದಾರೆ.
ಡಿಸಿ ಅವರು ಈ ವಿಷಯವನ್ನು ಎಸ್ಪಿಯವರಿಗೆೆ ತಿಳಿಸಿದ್ದು, ಜಿಲ್ಲಾಡಳಿತ ಭವನದಲ್ಲಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯವರುಗಳು ಕಚೇರಿಯಿಂದ ಹೊರ ಕಳುಹಿಸಿದ್ದಾರೆ.ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಬಾಂಬ್ ನಿಷ್ಕ್ರೀಯ ದಳ, ಬಾಂಬ್ ಪತ್ತೆದಳ ಡಿಸಿ ಕಚೇರಿ ಪೂರ್ತಿ ಪರಿಶೀಲಿಸಿದರಾದರೂ ಯಾವುದೇ ಬಾಂಬ್ ಮಾದರಿಯ ವಸ್ತುಗಳು ಪತ್ತೆಯಾಗಿಲ್ಲ.
ಇದು ಹುಸಿ ಇ-ಮೇಲ್ ಸಂದೇಶ ಎಂಬುವುದು ಗೊತ್ತಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಪರಿಶೀಲನೆ: ಈ ಇ-ಮೇಲ್ ಸಂದೇಶ ಎಲ್ಲಿಂದ ಬಂದಿದೆ,ಯಾರು ಯಾತಕ್ಕಾಗಿ ಡಿಸಿ ಕಚೇರಿಗೆ ಸಂದೇಶ ಕಳುಹಿಸಿದ್ದಾರೆ ಎಂಬುವುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ನಡುವೆ ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿಗೂ ಇದೇ ರೀತಿಯ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಪೊಲೀಸರು ಹಾಗೂ ಬಾಂಬ್ ನಿಷ್ಕ್ರೀಯ ದಳ ಪರಿಶೀಲನೆ ನಡೆಸಿದ್ದು, ಯಾವುದೇ ಬಾಂಬ್ ಪತ್ತೆಯಾಗಿಲ್ಲ.