ಬೆಂಗಳೂರು, ಫೆ. 6- ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ನಿರ್ಮಾಪಕ ಕನಕಪುರ ಶ್ರೀನಿವಾಸ್ ಈ ಕೂಡಲೆ ಅಪ್ಪು ಅಭಿಮಾನಿಗಳ ಕ್ಷಮೆ ಕೇಳದಿದ್ದರೆ ಕಾಟನ್ಪೇಟೆ ಗೇಟ್ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಅಖಿಲ ಕರ್ನಾಟಕ ಡಾ.ರಾಜ್ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
ಕಾಟನ್ ಪೇಟೆ ಗೇಟ್ ಎಂಬ ಕನ್ನಡ ಚಲನಚಿತ್ರದ ಬಿಡುಗಡೆಗೆ ಸಂಬಂಧಿಸಿದ ಪತ್ರಿಕಾ ಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಆರ್.ಶ್ರೀನಿವಾಸ್ ಎಂಬುವವರು ಕರ್ನಾಟಕ ರತ್ನ ಡಾ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿದ್ದಾರೆ ಎಂದು ಒಕ್ಕೂಟದ ಗೌರವಾಧ್ಯಕ್ಷ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ನಾಯಕತ್ವ ದಲ್ಲಿ ತಾವು ನಿರ್ಮಿಸ ಬೇಕಿದ್ದ ಮಯೂರ ಎಂಬ ಸಿನಿಮಾದ ನಿರ್ದೇಶಕನೂ ಸತ್ತುಹೋದ ಮತ್ತು ಆ ಚಿತ್ರದ ನಾಯಕ ನಟನೂ ಸತ್ತುಹೋದ, ಅವರಿಬ್ಬರೂ ಈಗ ಮೇಲೆ ಚೆನ್ನಾಗಿದ್ದಾರೆ. ಎಂದು ಅಸಂಬದ್ಧವಾಗಿ ಶ್ರೀನಿವಾಸ್ ಮಾತನಾಡಿದ್ದಾರೆ.
ಅವರ ಈ ಹೇಳಿಕೆ ಕರ್ನಾಟಕ ರತ್ನ ಡಾ ಪುನೀತ್ ರಾಜ್ ಕುಮಾರ್ ಅವರ ಕೋಟ್ಯಾಂತರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡಲು ಅವಕಾಶವಿರುವ ಇಂತಹ ಮಾತುಗಳನ್ನಾಡಿರುವ ಶ್ರೀನಿವಾಸ್ ವಿರುದ್ಧ ಅಖಿಲ ಕರ್ನಾಟಕ ಡಾ ರಾಜಕುಮಾರ್ ಅಭಿಮಾನಿಸಂಘ ಗಳ ಒಕ್ಕೂಟ, ವಿಶ್ವಮಾನವ ಡಾ ರಾಜಕುಮಾರ್ ಫೌಂಡೇಶನ್, ಡಾ ರಾಜಕುಮಾರ್ ಸೇನೆ ಮತ್ತು ರಾಜವಂಶ ಡಾ ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ರಾಜ್ಯಾದ್ಯಂತ ಒಂದು ನೂರಕ್ಕೂ ಹೆಚ್ಚು ದೂರುಗಳನ್ನು ನೀಡಲಾಗಿದೆ.
ಆರ್.ಶ್ರೀನಿವಾಸ್ ನಿರ್ಮಾಣದ ಕಾಟನ್ ಪೇಟೆ ಗೇಟ್ ಚಿತ್ರ ಫೆ.13 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಅವರು ಸಮಸ್ತ ಕನ್ನಡಿಗರಲ್ಲಿ ಬಹಿರಂಗವಾಗಿ ಬೇಷರತ್ ಕ್ಷಮೆಯಾಚಿಸಬೇಕೆಂದು ಎಂದು ಅವರು ಆಗ್ರಹಿಸಿದ್ದಾರೆ.
ಇಲ್ಲವಾದಲ್ಲಿ ಕಾಟನ್ ಪೇಟೆ ಗೇಟ್ ಚಲನ ಚಿತ್ರ ಬಿಡುಗಡೆಯಾಗುವ ಚಿತ್ರ ಮಂದಿರಗಳ ಮುಂಭಾಗದಲ್ಲಿ ಕಾನೂನು ರೀತ್ಯಾ ಪ್ರತಿಭಟನಾ ಕಾರ್ಯಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
