ಬೆಂಗಳೂರು,ಫೆ.6- ದಲಿತ ಸಮುದಾಯಕ್ಕೆ ಸೇರಿದ ಸಚಿವ ಆರ್.ಬಿ.ತಿಮಾಪುರ ಅವರನ್ನು ಟಾರ್ಗೆಟ್ ಮಾಡಿ ತನಿಖೆಯೂ ಇಲ್ಲದೇ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿ ಅವರ ರಾಜಕೀಯ ಜೀವನವನ್ನು ನಾಶಮಾಡಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೊರಟಿರುವುದು ಶೋಷಿತ ಸಮುದಾಯವನ್ನು ತುಳಿಯುವ ಕುತಂತ್ರ ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ರಾಜ್ಯ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ್ ಕೌತಾಳ್ ಆಪಾದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು, ನಾವು ಯಾರ ಭ್ರಷ್ಟಾಚಾರವನ್ನೂ ಸಮರ್ಥಿಸುವುದಿಲ್ಲ. ಆದರೆ, ಶೋಷಿತ ಸಮುದಾಯದ ನಾಯಕರನ್ನು ಮಾತ್ರ ಗುರಿ ಮಾಡುವುದನ್ನು ಒಪ್ಪುವುದಿಲ್ಲ. ದಲಿತ ಮಾದಿಗ ಸಮುದಾಯದವರಾದ ತಿಮಾಪುರ ಅವರ ಮೇಲೆ ಆರೋಪಮಾಡಿ ಇದ್ದಕ್ಕಿದ್ದಂತೆ ಈ ಧರಣಿಯನ್ನು ಈ ಪಕ್ಷಗಳು ಆಯೋಜಿಸಿದವು.
ಸಚಿವರ ಹೆಸರಿನಲ್ಲಿ ಯಾವುದೋ ಅಧಿಕಾರಿ ಲಂಚ ಕೇಳಿದರು ಎಂಬ ಆರೋಪದ ಕಾರಣಕ್ಕೆ ಇದನ್ನು ಮಾಡುತ್ತಿದ್ದೇವೆ ಎಂಬುದು ಅವರು ಮುಂದಿಟ್ಟ ಕಾರಣ. ಈ ಪಕ್ಷಗಳ ಸೋಗಲಾಡಿತನ, ದಲಿತ ವಿರೋಧಿ, ಮಾದಿಗ ಸಮುದಾಯ ವಿರೋಧಿ ಧೋರಣೆಯೇ ಇದಕ್ಕೆ ಕಾರಣ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಈ ಸರ್ಕಾರವೂ ಸೇರಿದಂತೆ ವಿವಿಧ ಸರ್ಕಾರಗಳ ಆಳ್ವಿಕೆಯಲ್ಲಿ ಭ್ರಷ್ಟಾಚಾರ ಇಲ್ಲ ಎಂದು ಯಾರೂ ಹೇಳಲಾಗುವುದಿಲ್ಲ. ಅಂತಹ ಭ್ರಷ್ಟಾಚಾರ ಕಂಡುಬಂದಲ್ಲಿ ಅವರು ಯಾವ ಪಕ್ಷಕ್ಕೆ ಸೇರಿದ್ದರೂ, ಯಾವುದೇ ಜಾತಿ ಸಮುದಾಯಕ್ಕೆ ಸೇರಿದ್ದರೂ ಅದರ ಬಗ್ಗೆ ತನಿಖೆ ನಡೆಯಬೇಕು ಮತ್ತು ಸಂಬಂಧಪಟ್ಟವರಿಗೆ ಶಿಕ್ಷೆಯಾಗಬೇಕು ಎಂಬುದು ನಮ ಅಭಿಪ್ರಾಯ. ಭ್ರಷ್ಟಾಚಾರವು ಆಳವಾಗಿ ಬೇರೂರಿದ್ದು ಅದನ್ನು ಬುಡಸಮೇತ ತೆಗೆಯಲು ಪರಿಣಾಮಕಾರಿ ಕ್ರಮಗಳನ್ನೂ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಡಿ.ಟಿ.ವೆಂಕಟೇಶ್, ವೇಣುಗೋಪಾಲ್ ಮೌರ್ಯ, ಲಿಂಗರಾಜು, ಮಂಜು, ಲೋಕೇಶ್, ಸಂತೋಷ್ ಉಪಸ್ಥಿತರಿದ್ದರು.
